
ದಾವಣಗೆರೆ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಆಚರಣೆಗೆ ಬೆಣ್ಣೆನಗರಿ ದಾವಣಗೆರೆ ಸಜ್ಜಾಗಿದೆ. ಇಂದು (ಆಗಸ್ಟ್ 3, ಬುಧವಾರ) ನಡೆಯಲಿರುವ ಸಿದ್ದರಾಮೋತ್ಸವ (Siddaramotsava) ಕ್ಕಾಗಿ ನಗರದ ಎಲ್ಲೆಡೆ ಕಾಂಗ್ರೆಸ್ ಧ್ವಜ, ಬ್ಯಾನರ್, ಕಟೌಟ್ಗಳು ರಾರಾಜಿಸುತ್ತಿವೆ. ಘಟಾನುಘಟಿ ನಾಯಕರು ಈಗಾಗಲೇ ದಾವಣಗೆರೆಗೆ ಬಂದಿದ್ದು, ತಮ್ಮ ಪಾಲಿನ ಹೊಣೆಗಳನ್ನು ನಿಭಾಯಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಸುಮಾರು 7,000 ಬಸ್ಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ದಾವಣಗೆರೆಗೆ ಬರುವ ನಿರೀಕ್ಷೆಯಿದ್ದು, ಊಟೋಪಚಾರ ಸಜ್ಜುಗೊಳಿಸುವ ಕೆಲಸವೂ ಭರದಿಂದ ಸಾಗಿದೆ. ಸಿದ್ದರಾಮೋತ್ಸವ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ, ಮಳೆ ಬಂದಿದ್ದರಿಂದ ಕಾರ್ಯಕ್ರಮಕ್ಕೆ ಸ್ವಲ್ಪ ಅನಾನುಕೂಲ ಆಗಿದೆ ಎಂದರು. ಸಿದ್ದರಾಮೋತ್ಸವ ಕಾರ್ಯಕ್ರಮದ ತಾಜಾ ಅಪ್ಡೇಟ್ ಇಲ್ಲಿ ಲಭ್ಯ.
ಇದನ್ನೂ ಓದಿ: Siddaramotsava: ದಾವಣಗೆರೆಯಲ್ಲಿ ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ; ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರು ಎರಚಿದ ಮಳೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜನರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಯೇ ಪ್ರಮುಖವಾದುದು. ಜನರ ಆಶೀರ್ವಾದ ಇದ್ದಾಗ ಮಾತ್ರ, ಜನರ ಸೇವೆ ಮಾಡಲು ಆಗುವುದು. ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಕರ್ನಾಟಕದ ಎಲ್ಲಾ ಜನತೆಗೆ ಧನ್ಯವಾದಗಳು. ನನಗೆ ಶಕ್ತಿ ಇರುವವರೆಗೂ ಜನರ ಸೇವೆಯನ್ನು ಮಾಡುತ್ತೇನೆ ಎಂದರು.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಸೇತುವೆ ಬಳಿ ಈಜಲು ತೆರಳಿದ್ದ ವ್ಯಕ್ತಿ ನೀರುಪಾಲಾಗಿದ್ದಾನೆ. ಚೌಳೂರು ಗ್ರಾಮದ ಕುಮಾರ್(35) ಮೃತ ದುರ್ದೈವಿ. ಈಜಲು ತೆರಳಿದ್ದ ಕುಮಾರ್ ಸೇತುವೆ ಬಳಿಯ ನೀರಿನಲ್ಲಿ ಈಜಲಾಗದೆ ಅಸ್ವಸ್ಥಗೊಂಡಿದ್ದಾನೆ. ಆಗ ಅಸ್ವಸ್ಥನಾಗಿದ್ದ ಕುಮಾರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳಕ್ಕೆ ತಹಶೀಲ್ದಾರ್ ರಘುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿ, ಸೇತುವೆ ಬಳಿ ತೆರಳದಂತೆ ಜನರಿಗೆ ತಹಶೀಲ್ದಾರ್ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ 75ನೇ ಜನ್ಮದಿನ ಅಮೃತ ಮಹೋತ್ಸವ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರೂ ಶಕ್ತಿ ಪ್ರದರ್ಶನ ಮಾಡಬೇಕು, ಮಾತಾಡ್ತಾರೆ ತಪ್ಪಿಲ್ಲ. ಜನರ ವಿಶ್ವಾಸ, ಜನಾಶೀರ್ವಾದ, ಬೆಂಬಲ ಪಡೆಯಬೇಕು.ಶುಭ ಸಂದರ್ಭ 75ನೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದರು, ಇನ್ಮುಂದೆ ಆಗಲ್ಲ. 75 ವರ್ಷ ಆಗಿರುವುದರಿಂದ ಸಿದ್ದರಾಮಯ್ಯ ನಿವೃತ್ತಿಯಾಗಲಿ. ಕಾಂಗ್ರೆಸ್ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುವ ಪಕ್ಷ. ಕಾಂಗ್ರೆಸ್ ಅಧಿಕಾರಕ್ಕಾಗಿ ಹಾತೊರೆಯುವಂತಹ ಪಕ್ಷ. ಕೆಲವೇ ವರ್ಷಗಳಲ್ಲಿ ಕಾಂಗ್ರೆಸ್ ಮ್ಯೂಸಿಯಂ ಸೇರಿಕೊಳ್ಳುತ್ತೆ ಎಂದರು.
ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಮಾಡುದ್ರು. ಪ್ರವಾಹದಿಂದ ಪ್ರಾಣ ಕಳೆದುಕೊಂಡವರಿಗೆ ರಾಹುಲ್ ಸಂತಾಪ ಸೂಚಿಸಿದ್ದಾರೆ. ಸಿದ್ದರಾಮಯ್ಯರ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ಸಂತಸವಾಗ್ತಿದೆ. ನಾನು ಇಲ್ಲಿಗೆ ಬರಲು ಸಿದ್ದರಾಮಯ್ಯ, ನನಗೆ ವಿಶೇಷ ಸಂಬಂಧವಿದೆ. ವ್ಯಕ್ತಿಯಾಗಿ ನಾನು ಸಿದ್ದರಾಮಯ್ಯರನ್ನು, ಬಡವರ ಬಗ್ಗೆ ಸಿದ್ದರಾಮಯ್ಯರವರ ಬದ್ಧತೆಯನ್ನು, ಸಿಎಂ ಆಗಿದ್ದಾಗ ಉತ್ತಮ ಆಡಳಿತ ನೀಡಿದ್ದಕ್ಕೆ ನನಗೆ ಹೆಮ್ಮೆ ಇದೆ. ಕರ್ನಾಟಕದ ಬಡವರ ಬಗ್ಗೆ ಸಿದ್ದರಾಮಯ್ಯಗೆ ಕಾಳಜಿ ಇದೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಇದು ನಮ್ಮೆಲ್ಲರ ಸಂಕಲ್ಪವಾಗಬೇಕು. ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ನಾಯಕರಲ್ಲ. ಸರ್ವ ಜನಾಂಗಕ್ಕೂ, ಸರ್ವ ಧರ್ಮಕ್ಕೂ ಸಿದ್ದರಾಮಯ್ಯ ನಾಯಕ. ರಾಜ್ಯದ ಸೇವೆ ಮಾಡಲು ಸಿದ್ದರಾಮಯ್ಯಗೆ ದೇವರು ಶಕ್ತಿ ನೀಡಲಿ. ಸಿದ್ದರಾಮಯ್ಯ ಮುಂದಾಳತ್ವದಲ್ಲಿ ಒಟ್ಟಾಗಿ ಕೆಲಸ ಮಾಡೋಣ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸೋಣ. ಸಿದ್ದರಾಮಯ್ಯ ಮುಂದಾಳತ್ವದಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಡಿಕೆ ಶಿವಕುಮಾರ್ ಹೇಳಿದ್ರು.
ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ವೇದಿಕೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಸನ್ಮಾನ ಮಾಡಲಾಯಿತು. ಹಾಗೂ ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸನ್ಮಾನ ಮಾಡಿದ್ರು.
ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಗೆ ರಾಹುಲ್ ಗಾಂಧಿ ಆಗಮಿಸಿದ್ದು ವೇದಿಕೆಯಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿಗೆ ಸನ್ಮಾನ ಮಾಡಲಾಗಿದೆ.
ಚಾಮರಾಜನಗರ: ಕಲಾವಿದನ ಕೈಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಮೂಡಿಬಂದಿದೆ. ಕಲಾವಿದ ಅಕ್ಕಿ ಕಾಳಿನಲ್ಲಿ ಸಿದ್ದರಾಮಯ್ಯರ ಪ್ರತಿಮೆ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಟಿ. ಹೊಸೂರು ಗ್ರಾಮದ ಕಲಾವಿದ ಬಿ. ಮಹೇಶ್ ಅವರ ಕೈಚಳಕದಲ್ಲಿ ಅನ್ನರಾಮಯ್ಯ ಮೂಡಿಬಂದಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಮೊದಲ ದಿನವೇ ಘೋಷಣೆ ಮಾಡಿದ ಮಹತ್ವ ಪೂರ್ಣ ಯೋಜನೆ ಅನ್ನಭಾಗ್ಯ ಯೋಜನೆ ಸ್ಮರಿಸಿ ಕಲಾವಿದ ತನ್ನ ಕೈ ಚಳಕ ತೋರಿಸಿದ್ದಾರೆ.
ಚಿತ್ರದುರ್ಗದ ಮುರುಘಾಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಈ ವೇಳೆ ಮುರುಘಾ ಶ್ರೀಗಳು ರಾಹುಲ್ಗೆ ಲಿಂಗಧಾರಣೆ ಮಾಡಿ ವಿಭೂತಿ ಹಚ್ಚಿದ್ದಾರೆ. ಲಿಂಗ ಪೂಜೆ ಬಗ್ಗೆ ಮಾಹಿತಿ ನೀಡುವಂತೆ ರಾಹುಲ್ ಮನವಿ ಮಾಡಿದ್ದು ಲಿಂಗಪೂಜೆ ಪಾಲಿಸುವುದಾಗಿ ಶ್ರೀಗಳಿಗೆ ರಾಹುಲ್ ಹೇಳಿದ್ರು.
ಅಡುಗೆ ಸಿದ್ಧಪಡಿಸುತ್ತಿದ್ದ ಬಾಣಸಿಗರು ಕಾರ್ಯಕ್ರಮಕ್ಕೆ ಸೇರಿದ ಅಪಾರ ಜನರನ್ನು ಕಂಡು ಕಂಗಾಲಾದರು. ಫುಡ್ ಕಾರ್ನರ್ನಲ್ಲಿ ಕಾರ್ಯಕರ್ತರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಡುಗೆ ವಿತರಿಸುವ ಸ್ಥಳದಲ್ಲಿ ಜನರು ಭರ್ತಿಯಾದ ಹಿನ್ನೆಲೆಯಲ್ಲಿ ಅಡುಗೆ ತಯಾರಿಸುತ್ತಿರುವ ಸ್ಥಳಕ್ಕೇ ಕಾರ್ಯಕರ್ತರು ನುಗ್ಗಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರೂ ಇರಲಿಲ್ಲ. ಹೀಗಾಗಿ ಆಹಾರ ಕೇಂದ್ರದಲ್ಲಿ ಆಯೋಜಕರು ಮತ್ತು ಬಾಣಿಸಿಗರ ಪರದಾಡಬೇಕಾಯಿತು.
ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಿದ್ದು ಊಟಕ್ಕಾಗಿ ಹಲವು ಕೌಂಟರ್ಗಳನ್ನು ರೂಪಿಸಲಾಗಿದೆ. ಊಟದ ಹೊತ್ತು ಆಗುತ್ತಿದ್ದಂತೆ ಕಾರ್ಯಕರ್ತರು ಕೌಂಟರ್ಗಳತ್ತ ಧಾವಿಸಿದರು. ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು.
ದಾವಣಗೆರೆ: ದೇಶದಲ್ಲೇ ಯಾವ ನಾಯಕರಿಗೂ ಇಷ್ಟು ಜನ ಸೇರಿರಲಿಲ್ಲ. ನಮ್ಮ ನಾಯಕ ಸಿದ್ದರಾಮಯ್ಯರು ಇತಿಹಾಸ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯರ ಅಭಿಮಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯರ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಸಿದ್ದರಾಮಯ್ಯರು ಸಿಎಂ ಆಗಬೇಕೆಂದು ಎಲ್ಲರಿಗೂ ಆಸೆ. ಆದ್ರೆ ನಮ್ಮ ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಧರಿಸ್ತಾರೆ ಎಂದು ಕೈ ನಾಯಕ ಜಮೀರ್ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ಹಿನ್ನೆಲೆ ದಾವಣಗೆರೆಯ ಹಜರತ್ ಅಲಿ ಶಾ ದರ್ಗಾಗೆ ಸಿದ್ದರಾಮಯ್ಯ ಭೇಟಿ ನೀಡಿದರು. ವೇದಿಕೆಗೆ ಆಗಮಿಸುವ ಮೊದಲು ದರ್ಗಾಗೆ ಸಿದ್ದರಾಮಯ್ಯ ಭೇಟಿ ನೀಡಿದರು.
ದಾವಣಗೆರೆ: ಎಣ್ಣೆಗಾಗಿ ಜನರು ಮುಗಿ ಬಿದಿದ್ದು, ಬೆಳ್ಳಂ ಬೆಳಗ್ಗೆ ಬಾರ್ ಮುಂದೆ ಫುಲ್ ಕ್ಯೂ ಹಚ್ಚಲಾಗಿದೆ. ಬಾರ್ ಓಪನ್ ಆಗದೆ ಇದ್ರು ಮದ್ಯಕ್ಕಾಗಿ ಜನರು ಕಾದು ಕುಳಿತಿದ್ದಾರೆ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಬಂದಿರುವರು ಎಣ್ಣೆಗಾಗಿ ಪರದಾಡಿದ್ದಾರೆ.
ಕಿಕ್ನಲ್ಲಿ ಕಾರ್ಯಕ್ರಮ ವೀಕ್ಷಿಸಲು ಕೆಲ ಕಾರ್ಯಕರ್ತರು ಸಿದ್ದರಾದಂತ್ತಿದೆ. ಮೈದಾನಕ್ಕೂ ತೆರಳುವ ಮುನ್ನ ಬಾರ್ ಮುಂದೆ ಪರಿತಪ್ಪಿಸುತ್ತಿರುವ ಯುವಕರು.
ದಾವಣಗೆರೆ: ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ಹಿನ್ನೆಲೆ ಮುಖ್ಯ ವೇದಿಕೆಯಲ್ಲಿ 11 ನಾಯಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಹರಿಪ್ರಸಾದ್, ಕೆ.ಸಿ.ವೇಣುಗೋಪಾಲ್ ಹಾಗೂ ಎಂ.ಬಿ.ಪಾಟೀಲ್, ಪರಮೇಶ್ವರ್ ಸೇರಿ 11 ನಾಯಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿನ್ನೆಲೆ ರಾಹುಲ್ ಗಾಂಧಿ ಜೊತೆಗೆ 2 ಸಾವಿರ ವಿವಿಐಪಿಗಳಿಗೆ ಭರ್ಜರಿ ಊಟ ರೆಡಿ ಮಾಡಿದ್ದು, ಹೋಳಿಗೆ, ಪುರಿ, ಚನಾ ಮಸಾಲ, ಜೊತೆಗೆ ಪಲಾವ್, ಮೈಸೂರು ಪಾಕ್ ಸೇರಿದಂತೆ ಇತರೆ ಖಾದ್ಯಗನ್ನು ಸಿದ್ದ ಮಾಡಲಾಗಿದೆ.
ದಾವಣಗೆರೆ: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಕ್ಷಣ ಗಣನೆ ಶುರುವಾಗಿದ್ದು, ಸಿದ್ದರಾಮಯ್ಯ ಉಡುಗೊರೆ ನೀಡಲು ಅಭಿಮಾನಿಯೊಬ್ಬರು ಕುರಿ ಮರಿ ತಂದಿದ್ದಾರೆ. ರಾಯಚೂರು ಮೂಲದ ಅಭಿಮಾನಿ ಕುರಿ ಮರಿ ತಂದಿದ್ದು, ಸಿದ್ದರಾಜು ಎಂದು ಕುರಿ ಮರಿಗೆ ನಾಮಕರಣ ಮಾಡಲಾಗಿದೆ.
ದಾವಣಗೆರೆ: ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ ಹಿನ್ನೆಲೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧವಾಗಿದ್ದು, 3 ಕಿಲೋಮೀಟರ್ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಶಾಮನೂರು ಪ್ಯಾಲೇಸ್ ತಲುಪಲು ಅಭಿಮಾನಿಗಳು ಹರಸಾಹಸ ಪಡುವಂತ್ತಾಗಿದೆ.
ಸಿದ್ದರಾಮೋತ್ಸವಕ್ಕೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಿಂದ ರಾತ್ರಿ 12ರ ಸುಮಾರಿಗೆ ಸುಮಾರು 70 ಕೂಸರ್ ವಾಹನಗಳಲ್ಲಿ ಅಭಿಮಾನಿಗಳು ದಾವಣಗೆರೆಯತ್ತ ಹೊರಟರು. ಬಾಗಲಕೋಟೆ ಜಿಲ್ಲೆಯಿಂದ 132 ಸಾರಿಗೆ ನಿಗಮದ ಬಸ್ಗಳು, ಸಾವಿರಕ್ಕೂ ಅಧಿಕ ಕ್ರೂಸರ್ ಹಾಗೂ ವೈಯಕ್ತಿಕ ಕಾರುಗಳಲ್ಲಿ ಅಭಿಮಾನಿಗಳು ದಾವಣಗೆರೆ ಕಡೆಗೆ ಸಾಗುತ್ತಿದ್ದಾರೆ. ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ಕ್ಷೇತ್ರದಿಂದ ೫೦ ಬಸ್, ಟೆಂಪೊ, ಕ್ರೂಸರ್ ಸೇರಿದಂತೆ 600 ವಾಹನಗಳು ಹೊರಟಿವೆ. ಬಾಗಲಕೋಟೆಯಿಂದ ಸುಮಾರು 30 ಸಾವಿರ ಮಂದಿ, ಬಾದಾಮಿ ಕ್ಷೇತ್ರದಿಂದ ಸುಮಾರು 10 ಸಾವಿರ ಮಂದಿ ದಾವಣಗೆರೆಗೆ ತೆರಳಿದ್ದಾರೆ.
ದಾವಣಗೆರೆ: ನಗರದ ರೈಲ್ವೆ ನಿಲ್ಧಾಣದಲ್ಲಿ ಸಿದ್ದು ಕಲರವ ಶುರುವಾಗಿದ್ದು, ಸಿದ್ದರಾಮಯ್ಯರ 75ನೇ ಅಮೃತ ಮಹೋತ್ಸವಕ್ಕೆ ಜನ ಸಾಗರ ಹರಿದು ಬರುತ್ತಿದೆ. ತಮ್ಮ ಸ್ವಂತ ಹಣದಿಂದಲೇ ದಾವಣಗೆರೆಗೆ ಅಭಿಮಾನಿಗಳು ಬರುತ್ತಿದ್ದಾರೆ.
Published On - 9:10 am, Wed, 3 August 22