ಭದ್ರಾ ಡ್ಯಾಂನಿಂದ ತುಂಗಭದ್ರ ನದಿಗೆ ನೀರು; ನದಿ ಪಾತ್ರದ ಜನ ಎಚ್ಚರಿಕೆ ವಹಿಸಲು ಸೂಚನೆ
ಶಿವಮೊಗ್ಗದ ಭದ್ರ ಡ್ಯಾಂ ನಿಂದ ಒಂದು ಟಿಎಂಸಿ ನೀರು ತುಂಗಭದ್ರಾ ನದಿಗೆ ಬಿಡಲು ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ದಾವಣಗೆರೆ, ಹಾವೇರಿ, ವಿಜಯನಗರ ಸೇರಿದಂತೆ ತುಂಗಭದ್ರ ನದಿ ಪಾತ್ರದಲ್ಲಿ ಬರುವ ಗ್ರಾಮಸ್ಥರು ಎಚ್ಚರಿಕೆ ವಹಿಸಲು ಸೂಚನೆ.

ಮುಖ್ಯಾಂಶಗಳು
- ಹಾವೇರಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ
- ಭದ್ರ ಡ್ಯಾಂ ನಿಂದ ಒಂದು ಟಿಎಂಸಿ ನೀರು ತುಂಗಭದ್ರಾ ನದಿಗೆ ಬಿಡಲು ನಿರ್ಧಾರ
- ದಾವಣಗೆರೆ, ಹಾವೇರಿ, ವಿಜಯನಗರ ಸೇರಿದಂತೆ ತುಂಗಭದ್ರ ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ
ದಾವಣಗೆರೆ: ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ(Summer). ಮೈ ಬೆವೆತು ನೀರಿನ ದಾಹ ಹೆಚ್ಚುತ್ತಿದೆ. ಹೀಗಾಗಿ ಹಾವೇರಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು ಭದ್ರಾ ನೀರಾವರಿ ಸಲಹಾ ಸಮಿತಿ ನೀರು ಬಿಡಲು ನಿರ್ಧರಿಸಿದೆ. ನದಿ ಪಾತ್ರದ ಜನ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕಾರಣಕ್ಕಾಗಿ ಶಿವಮೊಗ್ಗದ ಭದ್ರ ಡ್ಯಾಂ ನಿಂದ ಒಂದು ಟಿಎಂಸಿ ನೀರು ತುಂಗಭದ್ರಾ ನದಿಗೆ ಬಿಡಲು ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ಇದೇ 27 ರಿಂದ ನಿತ್ಯ ಒಂದು ಸಾವಿರ ಕ್ಯೂಸೆಕ್ಸ್ ನಂತೆ ಮೇ ಒಂಬತ್ತರ ವರೆಗೆ ನೀರು ಹರಿಸಲು ನಿರ್ಧಾರ ಮಾಡಲಾಗಿದೆ.
ಇದು ಕುಡಿಯುವ ನೀರಿಗಾಗಿ ಕೈಗೊಂಡ ನಿರ್ಧಾರ. ಮೇಲಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವುದರಿಂದ ದಾವಣಗೆರೆ, ಹಾವೇರಿ, ವಿಜಯನಗರ ಸೇರಿದಂತೆ ತುಂಗಭದ್ರ ನದಿ ಪಾತ್ರದಲ್ಲಿ ಬರುವ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಹೀಗೆ ನದಿಗೆ ನೀರು ಬಿಟ್ಟ ವೇಳೆ ಅಪೂರ್ಣಗೊಂಡ ಕಾಮಗಾರಿ ಆರಂಭಿಸುವುದು. ನದಿ ಪಾತ್ರದಲ್ಲಿ ಸುತ್ತಾಡುವುದು. ಜಾನುವಾರುಗಳನ್ನ ಮೇಯಿಸುವುದು ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಬೆಳೆಗಳನ್ನ ಮಾಡುವುದನ್ನ ನಿಷೇಧಿಸಲಾಗಿದೆ.
ಬೇಸಿಗೆ ವೇಳೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಭದ್ರಡ್ಯಾಂನಲ್ಲಿ ಇಂತಿಷ್ಟು ನೀರು ಸಂಗ್ರಹ ಇರುತ್ತದೆ. ಇದೇ ಕಾರಣಕ್ಕೆ ಈ ನೀರು ಕುಡಿಯುವುದಕ್ಕಾಗಿ ಬಳಕೆ ಆಗಬೇಕು. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು, ರೈತರು, ನದಿ ದಂಡೆಯಲ್ಲಿ ಪಂಪ್ ಸೆಟ್ ಅಳವಡಿಸುವುದು. ಅನಧಿಕೃತವಾಗಿ ನೀರು ಎತ್ತುವುದನ್ನ ನಿಷೇಧಿಸಲಾಗಿದೆ. ಅಕ್ರಮವಾಗಿ ತಮ್ಮ ತೋಟಗಳಿಗೆ ನೀರು ಬಿಟ್ಟು ಕೊಳ್ಳುವಂತಿಲ್ಲ. ನಾಳೆಯಿಂದ ತುಂಗಭದ್ರಾ ನದಿಗೆ ಬಿಡುತ್ತಿರುವ ನೀರು ಕುಡಿಯುವುದಕ್ಕೆ ಮಾತ್ರ ಎಂದು ಭದ್ರಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ಎನ್. ಸುಜಾತಾ ಸ್ಪಷ್ಟ ಪಡಿಸಿದ್ದಾರೆ.
ರಾಜ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:38 am, Wed, 26 April 23



