ಬೆಂಗಳೂರು/ಮಂಗಳೂರು, (ಆಗಸ್ಟ್ 21): ಧರ್ಮಸ್ಥಳ ಪ್ರಕರಣಕ್ಕೆ (Dharmasthala case) ಸಂಬಂಧಿಸಿದಂತೆ ದಿನಕ್ಕೊಂದು ಮಹತ್ವದ ಬೆಳವಣಿಗಳು ನಡೆಯುತ್ತಿದ್ದು, ಇದೀಗ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬೆಳಗ್ಗೆಯೇ ತಿಮರೋಡಿಯನ್ನು ವಶಕ್ಕೆ ಪಡೆದಿದ್ದ ಉಡುಪಿ ಪೊಲೀಸರು, ಇದೀಗ ಬಂಧನ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಪ್ರಮುಖ ಕಾರಣರಾದ ಯುಟ್ಯೂಬರ್ ಎಂ.ಡಿ. ಸಮೀರ್ ನನ್ನು ( youtuber MD Sameer )ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ ಪೊಲೀಸರು, ಬೆಂಗಳೂರಿನ ಜಿಗಣಿಯಲ್ಲಿರುವ ಸಮೀರ್ ಮನೆಗೆ ಆಗಮಿಸಿದ್ದಾರೆ. ಆದ್ರೆ, ಸಮೀರ್ ಪೊಲೀಸರಿಗೆ ಯಾಮಾರಿಸಿ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿದ್ದಾನೆ.
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ನೀಡಲಾಗಿದ್ದ ದೂರಿನ ಮೇರೆಗೆ ಯುಟ್ಯೂಬರ್ ಸಮೀರ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಮಧ ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆನಂದ್ ಎನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಆದರೆ, ಪೊಲೀಸರ ಆಗಮನದ ಸುಳಿವು ಸಿಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದಾನೆ. ಬಂಧನದ ಭೀತಿ ಹಿನ್ನೆಲೆಯಲ್ಲಿ ಸಮೀರ್ ಬೆಂಗಳೂರು ಮನೆಯಲ್ಲೇ ಮೊಬೈಲ್ ಕೊಟ್ಟು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿದ್ದಾನೆ. ಪೊಲೀಸರು, ಸಮೀರ್ ಎಲ್ಲಿದ್ದಾರೆಂದು ತಿಳಿದರೆ ಕೂಡಲೇ ಗಮನಕ್ಕೆ ತರುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದು, ನಾಪತ್ತೆಯಾಗಿರುವ ಸಮೀರ್ ಯಾವುದೇ ಸಂದರ್ಭದಲ್ಲೂ ಬಂಧನವಾಗಹುದು. ಇನ್ನು ಸಮೀರ್ ಈಗಾಗಲೇ ಮಂಗಳೂರಿನ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು ಪೊಲೀಸರು ಬಂಧಿಸುವ ಸುದ್ದಿ ತಿಳಿಯುತ್ತಿದ್ದಂತೆಯೇ ಸಮೀರ್, ಪಕ್ಕಾ ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆಗಿದ್ದಾರೆ. ಬೆಂಗಳೂರಿನಲ್ಲಿರೋ ಕುಟುಂಬಸ್ಥರಿಗೆ ಮೊಬೈಲ್ ಕೊಟ್ಟು ಮಂಗಳೂರು ಸೇರಿದ್ದಾನೆ. ಇತ್ತ ಬೆಂಗಳೂರಿನಲ್ಲಿರುವ ಕುಟುಂಬಸ್ಥರು ಮೊಬೈಲ್ ತೆಗೆದುಕೊಂಡು ನಗರದೆಲ್ಲೆಡೆ ಸುತ್ತಾಡಿದ್ದಾರೆ. ಇನ್ನೊಂದೆಡೆ ಮೊಬೈಲ್ ಲೊಕೇಷನ್ ಆಧಾರದಲ್ಲಿ ಪೊಲೀಸರು ಸಹ ಸಮೀರನ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ, ಸಮೀರ್ ಮೊಬೈಲ್ ಸಮೇತ ನಿನ್ನೆ ರಾತ್ರಿ ಜಿಗಣಿಯಲ್ಲಿರುವ ಮನೆಗೆ ಹೋಗಿದ್ದಾರೆ. ಆಗ ಲೋಕೇಷನ್ ಮನೆಯಲ್ಲಿರುವುದು ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ. ಆದ್ರೆ, ಮನೆಯಲ್ಲಿ ಸಮೀರ್ ಇಲ್ಲದಿರುವುದು ಕಂಡುಬಂದಿದೆ. ಈ ಮೂಲಕ ಪಕ್ಕಾ ಪ್ಲ್ಯಾನ್ ಮಾಡಿಯೇ ಸಮೀರ್ ಪೊಲೀಸರಿಗೆ ಯಾಮಾರಿಸಿದ್ದಾನೆ.
ಕಳೆದೊಂದು ವಾರದಿಂದ ತನ್ನ ಮೊಬೈಲ್ ಯೂಸ್ ಮಾಡದ ಸಮೀರ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿಕ್ಕಮ್ಮನ ಮಗನ ಮೊಬೈಲ್ ಉಪಯೋಗಿಸುತ್ತಿದ್ದ ಎನ್ನುವುದು ತಿಳಿದುಬಂದಿದೆ. ಆದ್ರೆ ಸಮೀರ್ ಮೊಬೈಲ್ ಸಿಡಿಆರ್ ಲೊಕೇಷನ್ ಟವರ್ ಡಂಪ್ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸರು ಹುಲ್ಲಹಳ್ಳಿ ಬಳಿಯ ರಾಯಲ್ ರೆಸಿಡೆನ್ಸಿ ಬಡಾವಣೆಯ ಸಮೀರ್ ಮನೆಗೆ ಬಂದಿದ್ದಾರೆ. ಆದ್ರೆ ಪೊಲೀಸರು ಬರುವ ಮೊದಲೇ ಸಮೀರ್ ಎಸ್ಕೇಪ್ ಆಗಿದ್ದ. ಇದರಿಂದ ಪೊಲೀಸರು ಬಂದ ಧಾರಿಗೆ ಸುಂಕವಿಲ್ಲದೆ ವಾಪಸ್ ಆಗಿದ್ದಾರೆ.
ಸಮೀರ್ನನ್ನು ವಶಕ್ಕೆ ಪಡೆದು ಬೆಳ್ತಂಗಡಿಗೆ ವಿಚಾರಣೆಗೆ ಕರೆತರಲು ಪೊಲೀಸರು ನಿರ್ಧರಿಸಿದ್ದರು. ಆದರೆ ಪೊಲೀಸರ ಆಗಮನದ ಸುಳಿವು ಸಿಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದಾನೆ. ಆತ ಮನೆಯಲ್ಲಿ ಇಲ್ಲ ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಮೀರ್ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಜುಲೈ ತಿಂಗಳಲ್ಲಿಯೇ ಈತನ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕೇಸುಗಳು ದಾಖಲಾಗಿದ್ದವು. ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿ ವಿಡಿಯೋ ಮಾಡಿರುವುದು, ಜನರಲ್ಲಿ ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿರುವುದು ಈ ಪ್ರಕರಣಗಳಾಗಿವೆ. ಬೆಳ್ತಂಗಡಿ ಪೊಲೀಸರ ಆಗಮನ ಸಮೀರ್ ತಿಳಿದದ್ದು ಹೇಗೆ, ಆತನಿಗೆ ಮಾಹಿತಿ ನೀಡುವವರು ಇಲಾಖೆಯಲ್ಲೇ ಇದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ.
Published On - 4:12 pm, Thu, 21 August 25