ಧಾರವಾಡದಲ್ಲಿ ಇಬ್ಬನಿ ಕಾಟಕ್ಕೆ ಕಂಗಾಲಾದ ಮಾವಿನ ಬೆಳೆಗಾರರು

ಬೆಳ್ಳಂಬೆಳಗ್ಗೆ ಇಬ್ಬನಿ ಬೀಳುವುದನ್ನು ನೋಡುವುದು ಒಂದು ಸುಂದರ ಅನುಭೂತಿ. ಇದನ್ನು ನೋಡುವುದೇ ಒಂದು ಭಾಗ್ಯ. ಆದರೆ ಈ ಇಬ್ಬನಿ ಈಗ ಮಾವು ಬೆಳೆಗಾರರಿಗೆ ಶಾಪವಾಗಿದೆ.

ಧಾರವಾಡದಲ್ಲಿ ಇಬ್ಬನಿ ಕಾಟಕ್ಕೆ ಕಂಗಾಲಾದ ಮಾವಿನ ಬೆಳೆಗಾರರು
ಮಾವಿನ ಗಿಡಗಳು ಮತ್ತು ಇಬ್ಬನಿ
sandhya thejappa

Updated on: Mar 11, 2021 | 9:45 AM

ಧಾರವಾಡ: ಮಾವಿನ ಬೆಳೆಯಲ್ಲಿ ಹೆಚ್ಚು ಫೇಮಸ್ ಆಗಿರುವ ಜಿಲ್ಲೆ ಎಂದರೆ ಧಾರವಾಡ. ಆದರೆ ಈ ಬಾರಿ ಜಿಲ್ಲೆಯ ರೈತರಿಗೆ ಸಂಕಷ್ಟದ ಸಮಯ. ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲಾ ಒಂದು ಸಮಸ್ಯೆಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಈ ಬಾರಿ ಇಬ್ಬನಿ ಸಮಸ್ಯೆ ಉಂಟು ಮಾಡಿದೆ. ಕಳೆದೊಂದು ವಾರದಿಂದ ನಿರಂತರವಾಗಿ ಬೀಳುತ್ತಿರುವ ಇಬ್ಬನಿಯಿಂದಾಗಿ ಮಾವಿನ ಬೆಳೆಗೆ ತುಂಬಾ ತೊಂದರೆಯಾಗಿದೆ.

ಬೆಳ್ಳಂಬೆಳಗ್ಗೆ ಇಬ್ಬನಿ ಬೀಳುವುದನ್ನು ನೋಡುವುದು ಒಂದು ಸುಂದರ ಅನುಭೂತಿ. ಕೆರೆಯ ದಡದಲ್ಲಿ, ಸೂರ್ಯೋದಯದ ವೇಳೆ, ದಟ್ಟ ಕಾನನದ ಮಧ್ಯೆ, ಆಕಾಶದೆತ್ತರಕ್ಕೆ ಬೆಳೆದಿರುವ ಮರಗಳ ಮೇಲ್ತುದಿಯಲ್ಲಿ ಇಬ್ಬನಿ ಕಾಣುತ್ತಿದ್ದರೆ ಅದನ್ನು ನೋಡುವುದೇ ಒಂದು ಭಾಗ್ಯ. ಆದರೆ ಈ ಇಬ್ಬನಿ ಬೀಳುವುದಕ್ಕೂ ಒಂದು ಕಾಲವಿದೆ. ಬೇಸಿಗೆ ಆರಂಭವಾಗಿದ್ದರೂ ಧಾರವಾಡದಲ್ಲಿ ಬೀಳುತ್ತಿರುವ ಇಬ್ಬನಿಯಿಂದಾಗಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲೇ ಈ ಬಾರಿ ಅಕಾಲಿಕ ಮಳೆಯಾಗಿ ಮಾವಿನ ಬೆಳೆ ಅಷ್ಟಕ್ಕಷ್ಟೇ ಅನ್ನುವಂತಾಗಿತ್ತು. ಆದರೆ ಇದೀಗ ವಿಪರೀತ ಇಬ್ಬನಿ ಮಾರ್ಚ್ ತಿಂಗಳಲ್ಲಿ ಬೀಳುತ್ತಿರುವುದರಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಈಗಾಗಲೇ ಮಾವಿನ ಗಿಡಗಳು ಕಾಯಿ ಬಿಟ್ಟಿವೆ. ಈ ವೇಳೆಯಲ್ಲಿ ಇಬ್ಬನಿ ಬಿದ್ದರೆ ಗಿಡಗಳಿಗೆ ವಿವಿಧ ರೋಗಗಳು ತಗುಲಿ ಮಾವಿನ ಕಾಯಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿವೆ.

ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಇಬ್ಬನಿ ಬೀಳುತ್ತದೆ. ಆಗಷ್ಟೇ ಗಿಡಗಳಲ್ಲಿ ಹೂವು ಕಟ್ಟಿಕೊಂಡಿರುತ್ತದೆ. ಆದರೆ ಗಿಡಗಳು ಕಾಯಿ ಕಟ್ಟಿ, ಕಾಯಿಗಳು ದೊಡ್ಡವಾಗುವ ಸಂದರ್ಭದಲ್ಲಿ ಇಬ್ಬನಿ ಬಿದ್ದರೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಇಬ್ಬನಿ ಬೀಳುವುದರಿಂದ ಜಿಗುಟು, ಬೂದು ರೋಗಗಳು ಗಿಡಗಳಲ್ಲಿ ಕಾಣಿಸಿಕೊಂಡರೆ ಅಲ್ಲಿಗೆ ಮಾವಿನ ಫಸಲಿನ ಆಸೆಯನ್ನು ಕೈ ಬಿಟ್ಟಂತೆಯೇ. ಏಕೆಂದರೆ ಈ ಜಿಗುಟು ರೋಗದಿಂದ ಮಾವಿನ ಕಾಯಿಯ ಮೇಲೆ ಕಪ್ಪು ಬಣ್ಣ ಹತ್ತಿಕೊಳ್ಳುತ್ತದೆ. ಕಪ್ಪು ಬಣ್ಣ ಹತ್ತಿದ ಮಾವಿನ ಕಾಯಿಗಳಿಗೆ ಒಳ್ಳೆ ದರ ಸಿಗುವುದಿಲ್ಲ. ಇಬ್ಬನಿಯ ಮತ್ತೊಂದು ಸಮಸ್ಯೆ ಎಂದರೆ ಕಟ್ಟಿಕೊಂಡಿರುವ ಕಾಯಿಗಳು ಕೂಡ ಉದುರಿ ಹೋಗುತ್ತವೆ. ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇರುವ ಗಿಡಗಳನ್ನ ಕತ್ತರಿಸಿ ಹಾಕುವುದೊಂದೆ ಪರಿಹಾರ ಎನ್ನುವಷ್ಟರ ಮಟ್ಟಿಗೆ ರೈತರು ನೊಂದಿದ್ದಾರೆ.

ಇಬ್ಬನಿಯಿಂದಾಗಿ ಮಾವಿನ ಬೆಳೆಗೆ ತುಂಬಾ ತೊಂದರೆಯಾಗಿದೆ

ಗಿಡಗಳು ಕಾಯಿ ಕಟ್ಟಿ, ಕಾಯಿಗಳು ದೊಡ್ಡವಾಗುವ ಸಂದರ್ಭದಲ್ಲಿ ಇಬ್ಬನಿ ಬಿದ್ದರೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ

ಸೂರ್ಯ ಉದಯವಾದಂತೆ ಸರಿದ ಇಬ್ಬನಿ

ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದ ಮಾವು ಬೆಳೆಗಾರರು
ಕಳೆದ ವರ್ಷ ಉತ್ತಮ ಇಳುವರಿ ಬಂದಿದ್ದರೂ ಕೊರೊನಾ ಹಿನ್ನೆಲೆಯಲ್ಲಿ ಮಾರುಕಟ್ಟೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಗಿಡಗಳು ಉತ್ತಮವಾಗಿ ಹೂವುಗಳನ್ನು ಕಟ್ಟಿಕೊಂಡಿದ್ದವು. ಜನವರಿಯಲ್ಲಿ ಬಿದ್ದ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಕಾಯಿಗಳು ಉದುರಿ, ರೈತರು ಸಮಸ್ಯೆಗೆ ಸಿಲುಕಿದ್ದರು. ಉಳಿದಿರುವ ಕಾಯಿಗಳಿಂದಾದರೂ ಈ ಬಾರಿ ಕೊಂಚ ಆದಾಯ ಪಡೆಯಬಹುದು ಅಂದುಕೊಂಡಿದ್ದ ರೈತರಿಗೆ ಇದೀಗ ಹವಾಮಾನ ವೈಪರೀತ್ಯ ಉಂಟಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಾವಿನ ತೆನೆ

ಮಾವಿನ ತೋಟವನ್ನು ಆವರಿಸಿಕೊಂಡ ಇಬ್ಬನಿ

ಇದನ್ನೂ ಓದಿ

ಬೆಲೆ ಕುಸಿತಕ್ಕೆ ಕಂಗಾಲಾದ ವೀಳ್ಯದೆಲೆ ಬೆಳೆಗಾರರು

ಶುಂಠಿ ಧಾರಣೆ ಕುಸಿತ.. ಬೆಳೆಗಾರರು ಕಂಗಾಲು; ವಾಣಿಜ್ಯ ಬೆಳೆಯ ಹಿಂದೆ ಬಿದ್ದು ಕೈ ಸುಟ್ಟುಕೊಂಡ ಚಿಕ್ಕಬಳ್ಳಾಪುರ ರೈತರು

Published On - 6:23 pm, Wed, 10 March 21

sandhya thejappa
Follow Us