ಪ್ರಯಾಣಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ: ಈ ಮೆಟ್ರೋ ಸ್ಟೇಷನ್ಗಳಲ್ಲಿ ಇಳಿಯೋದಿದ್ರೆ ಗಮನಿಸಿ
ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಹಿನ್ನೆಲೆ ಇಂದು ಬೆಂಗಳೂರಿನ ವಿಧಾನಸೌಧ, ಲೋಕಭವನ ಸುತ್ತಮುತ್ತ ಹಾಗೂ ಇತರ ಕೆಲವು ಪ್ರದೇಶಗಳಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ಸಂಚಾರಕ್ಕೆ ನಿರ್ಬಂಧವಿದ್ದು, ಪರ್ಯಾರ ಮಾರ್ಗಗಳನ್ನು ಸೂಚಿಸಲಾಗಿದೆ. ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯುವವರಿಗೂ ಗೆ ರಸ್ತೆ ಸಂಚಾರದ ಅಡಚಣೆ ಎದುರಾಗಲಿದೆ.

ಬೆಂಗಳೂರು, ಜೂನ್ 3: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಇಂದು (ಜೂನ್ 3) ಲೋಕಭವನದ ಗ್ಲಾಸ್ ಹೌಸ್ನಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಭವನ ವ್ಯಾಪ್ತಿಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಭಾರಿ ಬದಲಾವಣೆಗಳನ್ನು ಮಾಡಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ವಿಶೇಷವಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಕೂಡ ಇದನ್ನು ಗಮನಿಸಬೇಕಾಗಿದೆ. ನೀವು ಒಂದು ವೇಳೆ ಲೋಕಭವನ ಮತ್ತು ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಿಗೆ ತಲುಪಲು ವಿಧಾನಸೌಧ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯಲು ಯೋಜಿಸಿದ್ದರೆ, ನಿಲ್ದಾಣದಿಂದ ಹೊರಬಂದ ತಕ್ಷಣವೇ ನಿಮಗೆ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಬಹುದು.
ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ಹೊರಭಾಗದ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರಲಿದ್ದು, ಕೇವಲ ಪಾದಚಾರಿಗಳಿಗೆ ಅಥವಾ ಪಾಸ್ ಇದ್ದವರಿಗೆ ಮಾತ್ರ ಪ್ರವೇಶವಿರಲಿದೆ. ಹೀಗಾಗಿ ಹೊರಬಂದ ತಕ್ಷಣ ಆಟೋ, ಟ್ಯಾಕ್ಸಿ ಅಥವಾ ಇತರೆ ವಾಹನಗಳ ಸೌಲಭ್ಯ ಸಿಗುವುದು ದುಸ್ತರವಾಗಲಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.
ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ವಿವರ
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2026
- ಬಸವೇಶ್ವರ ವೃತ್ತದಿಂದ ಬಿಆರ್ವಿ ಜಂಕ್ಷನ್: ರಾಜಭವನ ರಸ್ತೆಯ ಈ ಮಾರ್ಗದಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
- ಪರ್ಯಾಯ ರಸ್ತೆಗಳು: ಕಬ್ಬನ್ ರಸ್ತೆ ಮಾರ್ಗವಾಗಿ ಚಲಿಸುವ ವಾಹನಗಳು ಬಿಆರ್ವಿ ಜಂಕ್ಷನ್ನಲ್ಲಿ ಬಲತಿರುವು ಪಡೆದು ಶಿವಾಜಿನಗರ, ಬಾಳೇಕುಂದ್ರಿ ವೃತ್ತದ ಕಡೆಗೆ ಸಾಗಬಹುದು. ಕ್ವೀನ್ಸ್ ರಸ್ತೆಯಿಂದ ಬರುವವರು ಬಾಳೇಕುಂದ್ರಿ ಜಂಕ್ಷನ್ ಮೂಲಕ ಕನ್ನಿಂಗ್ಹ್ಯಾಮ್ ರಸ್ತೆ ಬಳಸಲು ಸೂಚಿಸಲಾಗಿದೆ.
- ನೋ ಪಾರ್ಕಿಂಗ್ ವಲಯಗಳು: ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ಕಬ್ಬನ್ ರಸ್ತೆ, ಕಸ್ತೂರಬಾ ರಸ್ತೆ ಹಾಗೂ ಕಬ್ಬನ್ ಪಾರ್ಕ್ನ ಒಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಭಾರೀ ವಾಹನಗಳಿಗೆ ನಿಷೇಧ: ಇಡೀ ಬೆಂಗಳೂರು ನಗರದಾದ್ಯಂತ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಹಾಗೂ ದಿನನಿತ್ಯದ ವಾಹನ ಸವಾರರು ಈ ಟ್ರಾಫಿಕ್ ಅಡ್ವೈಸರಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣದ ಸಮಯ ಹಾಗೂ ಮಾರ್ಗವನ್ನು ಯೋಜಿಸಿಕೊಳ್ಳುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




