ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: 10 ಕೋಟಿ ಜನರಿಗೆ ಆಹ್ವಾನ, ಸಚಿವ ಜೋಶಿ ಸಾರಥ್ಯದಲ್ಲಿ ಧಾರವಾಡದಿಂದ ವಿಶೇಷ ರೈಲು

| Updated By: ಸಾಧು ಶ್ರೀನಾಥ್​

Updated on: Nov 23, 2023 | 5:45 PM

ಅಯೋಧ್ಯೆಗೆ ಧಾರವಾಡದಿಂದ ವಿಶೇಷ ರೈಲು ಬಿಡಲು ಈಗಾಗಲೇ ಜೋಶಿ ಆಪ್ತರು ರೈಲ್ವೆ ಇಲಾಖೆ ಸಂಪರ್ಕದಲ್ಲಿದ್ದಾರೆ. ಉದ್ಘಾಟನೆಯ ಎರಡು ದಿನ ಮುಂಚೆ ಅಯೋಧ್ಯೆ ತಲುಪುವಂತೆ ರೈಲು ಸೇವೆಗೆ ಮನವಿ ಇಟ್ಟಿದ್ದಾರೆ. ಉದ್ಘಾಟನೆಗೆ ಮುಂಚೆ ಭಕ್ತರು ಅಲ್ಲಿನ ಸುತ್ತಮುತ್ತಲಿನ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: 10 ಕೋಟಿ ಜನರಿಗೆ ಆಹ್ವಾನ, ಸಚಿವ ಜೋಶಿ ಸಾರಥ್ಯದಲ್ಲಿ ಧಾರವಾಡದಿಂದ ವಿಶೇಷ ರೈಲು
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಧಾರವಾಡದಿಂದ ವಿಶೇಷ ರೈಲು
Follow us on

ಅಯೋಧ್ಯೆಯಲ್ಲಿ (Ayodhya) ಮುಂದಿನ ವರ್ಷ ನೂತನ ರಾಮ ಮಂದಿರದ (ram mandir) ಉದ್ಘಾಟನೆ ನಡೆಯಲಿದೆ. ಮಂದಿರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ದೇಶದಲ್ಲಿ ಹತ್ತು ಕೋಟಿ ಜನರಿಗೆ ಆಹ್ವಾನ ಪತ್ರಿಕೆ ಕಳಿಸಲಾಗುತ್ತಿದೆ. ಇದೇ ವೇಳೆ ಕೇಂದ್ರದಲ್ಲಿ ಪ್ರಭಾವಿ ಖಾತೆ ಹೊಂದಿರೋ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರೋ ಧಾರವಾಡದ (dharwad) ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad joshi) ತಮ್ಮ ಅಭಿಮಾನಿಗಳಿಗೆ ಗಿಫ್ಟ್ ಕೊಡಲು ನಿರ್ಧರಿಸಿದ್ದಾರೆ. ಏನದು? ಇಲ್ಲಿದೆ ನೋಡಿ…

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಈ ಭವ್ಯ ರಾಮ ಮಂದಿರ ನಿರ್ಮಾಣದ ಹಿಂದೆ ದೊಡ್ಡ ಇತಿಹಾಸವೇ ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇಂಥ ರಾಮಮಂದಿರ ಉದ್ಘಾಟನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಒಟ್ಟು 10 ಕೋಟಿ ಜನರಿಗೆ ಆಹ್ವಾನ ನೀಡಲಾಗುತ್ತಿದೆ.

ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ ಲೋಕಸಭಾ ಕ್ಷೇತ್ರದಿಂದ ಅನೇಕರನ್ನು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬೇಕೆಂದು ತೀರ್ಮಾನಿಸಿದ್ದಾರೆ. ಇದೇ ಕಾರಣಕ್ಕೆ ವಿಶೇಷ ರೈಲೊಂದನ್ನು (special train) ಧಾರವಾಡದಿಂದ ಬಿಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪಾಲಿಕೆ ಸದಸ್ಯ ಹಾಗೂ ಜೋಶಿ ಆಪ್ತ ಈರೇಶ ಅಂಚಟಗೇರಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: Ayodhya: ಅಯೋಧ್ಯೆಯಲ್ಲಿ ಶ್ರೀರಾಮ ಮಹಾಮಸ್ತಕಾಭಿಷೇಕದ ಸಮಯ ನಿಗದಿ

ಈ ಬಗ್ಗೆ ಈಗಾಗಲೇ ಜೋಶಿ ಆಪ್ತರು ರೈಲ್ವೆ ಇಲಾಖೆಯವರನ್ನು ಸಂಪರ್ಕಿಸಿದ್ದಾರೆ.‌ ಅಧಿಕಾರಿಗಳನ್ನು ಸಂಪರ್ಕಿಸಿರೋ ಜೋಶಿ ಆಪ್ತರು, ಉದ್ಘಾಟನೆಯ ಎರಡು ದಿನ ಮುಂಚೆ ಅಯೋಧ್ಯೆ ಮುಟ್ಟುವಂತೆ ರೈಲು ಸೇವೆಗೆ ಮನವಿ ಇಟ್ಟಿದ್ದಾರೆ. ಉದ್ಘಾಟನೆಗೆ ಎರಡು ದಿನ ಮುಂಚೆ ಹೋಗೋ ಭಕ್ತರು ಅಲ್ಲಿನ ಸುತ್ತಮುತ್ತಲಿನ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಜನವರಿ 22 ರಂದು ನಡೆಯೋ ಕಾರ್ಯಕ್ರಮದಲ್ಲಿ ಭಾಗಿಯಾಗೋ ಪ್ಲ್ಯಾನ್ ಹೊಂದಿದ್ದಾರೆ. ಒಂದು ವೇಳೆ ರೈಲ್ವೆ ಇಲಾಖೆ ಅಧಿಕಾರಿಗಳು ಈ ಮನವಿಗೆ ಸ್ಪಂದಿಸಿದರೆ ನಮಗೆ ಖುಷಿಯಾಗುತ್ತೆ ಅನ್ನುತ್ತಾರೆ ಜೋಶಿ ಅಭಿಮಾನಿಗಳು.

ಈಗಾಗಲೇ ಅನೇಕರು ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಹೋಗಲು ಸಾಧ್ಯವಾಗದ ಅನೇಕರಿಗೆ ಜೋಶಿ ಅವರ ಈ ಯೋಜನೆಯಿಂದ ಖುಷಿಯಾಗಿದ್ದಂತೂ ಸತ್ಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ