ಹೇಳಿಕೆ ನೀಡಿ ಕುಮಾರಣ್ಣ ಸೈಲೆಂಟ್: ಇತ್ತ ನೈಸ್ ಟೋಲ್ ಸಿಬ್ಬಂದಿ-ಜನರ ಮಧ್ಯೆ ನಿತ್ಯ ಫೈಟ್!
ನೈಸ್ ರಸ್ತೆ ಟೋಲ್ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೋಲ್ ಕಟ್ಟಬೇಡಿ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಕೆಲ ವಾಹನ ಸವಾರರು ಟೋಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಮತ್ತೊಂದೆಡೆ ರೈತ ಸಂಘಗಳು ಕುಮಾರಸ್ವಾಮಿ ಹೇಳಿಕೆಗೆ ಬೆಂಬಲ ಸೂಚಿಸಿದ್ದು, ಜಮೀನು ಕಳೆದುಕೊಂಡ ರೈತರು ಮಾತ್ರ ತಮ್ಮ ಸಮಸ್ಯೆಗಳನ್ನು ಯಾರೂ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ನೈಸ್ ಆಡಳಿತ ಟೋಲ್ ಪಾವತಿಸದೇ ಸಂಚರಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

ಬೆಂಗಳೂರು ದಕ್ಷಿಣ, (ಆಗಸ್ಟ್ 20): ನೈಟ್ ಟೋಲ್ (Nice Road Toll) ಬಗ್ಗೆ ಗೊಂದಲ ಮೂಡಿಸಿದೆ. ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಯಾರೂ ಟೋಲ್ ಕಟ್ಟಬೇಡಿ ಎಂದು ಕರೆ ನೀಡಿದ್ದಾರೆ. ಇದರಿಂದ ಜನರು ಸಹ ನೈಸ್ ರೋಡ್ನ್ಲಲಿ ಟೋಲ್ ಕಟ್ಟಲು ಹಿಂದೇಟು ಹಾಕುತ್ತಿದ್ದು, ಈ ಸಂಬಂಧ ಟೋಲ್ ಸಿಬ್ಬಂದಿ ಜೊತೆ ನಿತ್ಯ ಕಿತ್ತಾಟಗಳು ಸಹ ನಡೆಯುತ್ತಿವೆ. ಅವಧಿ ಮುಗಿದೆ ನಾವು ಟೋಲ್ ಕಟ್ಟಲ್ಲ ಎನ್ನುತ್ತಿದ್ದರೆ, ಟೋಲ್ ಸಿಬ್ಬಂದಿ ಟೋಲ್ ಕಟ್ಟಬೇಡಿ ಎನ್ನುವುದು ಕೋರ್ಟ್ ಆರ್ಡರ್ನಲ್ಲಿ ಇದ್ಯಾ ಎನ್ನುವ ವಾದ. ಹೀಗಾಗಿ ಇಬ್ಬರ ನಡುವೆ ಗಲಾಟೆಗಳು ನಡೆಯುತ್ತಿದ್ದು, ಈ ಸಂಬಂಧ ಟೋಲ್ ಕಟ್ಟದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಟೋಲ್ ಎಚ್ಚರಿಕೆ ನೀಡಿದೆ.
ಹೌದು.. ನೈಸ್ ರಸ್ತೆಯ ಟೋಲ್ ವಿವಾದ ಮತ್ತೆ ಭುಗಿಲೆದ್ದಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೋಲ್ ಕಟ್ಟಬೇಡಿ ಎಂದು ಹೇಳಿಕೆ ನೀಡಿದ ಬಳಿಕ ಕೆಲ ವಾಹನ ಸವಾರರು ಟೋಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಕಳೆದ ಕೆಲ ದಿನಗಳಿಂದ ಟೋಲ್ ಪ್ಲಾಜಾಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇನ್ನೊಂದೆಡೆ ರೈತ ಸಂಘದ ರಾಜ್ಯಾಧ್ಯಕ್ಷ ನದೀಮ್ ಪಾಪ, ಕುಮಾರಸ್ವಾಮಿ ವೈಯಕ್ತಿಕ ಅಭಿಪ್ರಾಯ ಹೇಳಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ನ್ಯಾಯಾಲಯವೇ ಅಕ್ರಮವಾಗಿ ಟೋಲ್ ಸಂಗ್ರಹವಾಗುತ್ತಿದೆ ಎಂದು ಹೇಳಿರುವಾಗ ನಾವು ಯಾಕೆ ಟೋಲ್ ಕಟ್ಟಬೇಕು ಎಂದು ಪ್ರಶ್ನಿಸಿದ್ದಾರೆ. ಹೈಕೋರ್ಟ್ ಟೋಲ್ ಕಟ್ಟಬೇಡಿ ಎಂದು ಹೇಳದಿದ್ದರೂ ಅಕ್ರಮ ನಡೆದಿದೆ ಎಂದು ಹೇಳಿರುವ ಕಾರಣ ಟೋಲ್ ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ ಸಿಎಂ ಡಿ.ಕೆ. ಶಿವಕುಮಾರ್ಗೆ ಹೆಚ್.ಡಿ. ಕುಮಾರಸ್ವಾಮಿ ಪತ್ರ
ಈ ಮಧ್ಯೆ ನೈಸ್ ರಸ್ತೆಗೆ ಜಮೀನು ನೀಡಿರುವ ರೈತ ಹಾಗೂ ಬಿಜೆಪಿ ಮುಖಂಡ ರುದ್ರೇಶ್ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಟೋಲ್ ಕಟ್ಟಬೇಕೋ ಬೇಡವೋ ಎಂಬ ಗೊಂದಲವಿದ್ದರೂ, ಜಮೀನು ಕಳೆದುಕೊಂಡ ರೈತರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಮೀನು ನೀಡಿದ ರೈತರಿಗೆ ಇನ್ನೂ ನಿವೇಶನ ಸಿಕ್ಕಿಲ್ಲ. ನಾವೇ ಟೋಲ್ ಕಟ್ಟಿ ಓಡಾಡುವ ಸ್ಥಿತಿ ಬಂದಿದೆ. 2003ರಿಂದ ಹೋರಾಟ ಮಾಡುತ್ತಿದ್ದೇವೆ, ಸರ್ಕಾರ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಎಚ್ಚರಿಕೆ ನೀಡಿದ ನೈಸ್ ಆಡಳಿತ
ಈ ಎಲ್ಲ ಬೆಳವಣಿಗೆಗಳ ನಡುವೆ ನೈಸ್ ಆಡಳಿತ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಹೈಕೋರ್ಟ್ ಟೋಲ್ ಸಂಗ್ರಹ ಕಾನೂನುಬಾಹಿರ ಎಂದು ಯಾವುದೇ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಸುಳ್ಳು ಮಾಹಿತಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಟೋಲ್ ಸಿಬ್ಬಂದಿಗೆ ಕಿರುಕುಳ ನೀಡುವುದು ಹಾಗೂ ಟೋಲ್ ಪಾವತಿಸದೇ ಪ್ರಯಾಣಿಸುವುದು ಕಾನೂನುಬಾಹಿರ ಕೃತ್ಯವಾಗಿದ್ದು, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗೊಂದಲ ಬಗೆಹರಿಸುವವರು ಯಾರು?
ಕುಮಾರಸ್ವಾಮಿ ಏನೋ ಹೇಳಿಕೆ ನೀಡಿ ಸೈಲೆಂಟ್ ಆಗಿದ್ದಾರೆ. ಆದ್ರೆ, ಇಲ್ಲಿ ಜನರು ಟೋಲ್ ಸಿಬ್ಬಂದಿ ಜೊತೆ ಗಲಾಟೆಗಿಳಿಯುತ್ತಿದ್ದಾರೆ. ಒಂದು ರೀತಿ ಇಬ್ಬರ ನಡುವೆ ಜಗಳ ಇಟ್ಟು ಸೈಡಿಗೆ ಸರಿದಂತಾಗಿದೆ. ಹೀಗಾಗಿ ಇದಕ್ಕೊಂದು ಸುಖಾಂತ್ಯ ಹಾಡಬೇಕಿದೆ. ಪ್ರತಿಪಕ್ಷಗಳು ಒಗ್ಗೂಡಿ ನಿಜವಾಗಿ ಸಾರ್ವಜನಿಕರು ಟೋಲ್ ಕಟ್ಟಬೇಕಾ? ಬೇಡ್ವಾ? ಎನ್ನುವುದನ್ನು ಸತ್ಯಾಸತ್ಯತೆ ಬಯಲಿಗೆಳೆದು ಗೊಂದಲ ನಿವಾರಸಬೇಕಿದೆ. ಒಂದು ವೇಳೆ ಟೋಲ್ ಕಾನೂನು ಬಾಹಿರವಾಗಿದ್ರೆ ಸ್ಥಗಿಗೊಳಿಸಬೇಕು? ಸುಮ್ನೆ ಜನರಲ್ಲಿ ಗೊಂದಲ ಮೂಡಿಸುವ ಹೇಳಿಕೆಯನ್ನು ನೀಡಬಾರದು.
ಒಟ್ಟಾರೆ ಒಂದೆಡೆ ಕೇಂದ್ರ ಸಚಿವರ ಹೇಳಿಕೆ, ಮತ್ತೊಂದೆಡೆ ರೈತ ಸಂಘಗಳ ಬೆಂಬಲ, ಜಮೀನು ಕಳೆದುಕೊಂಡ ರೈತರ ಆಕ್ರೋಶ ಹಾಗೂ ನೈಸ್ ಆಡಳಿತದ ಕಾನೂನು ಎಚ್ಚರಿಕೆ. ಈ ಬೆಳವಣಿಗೆಗಳ ನಡುವೆ ನೈಸ್ ರಸ್ತೆ ಟೋಲ್ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಇದು ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಕಾದು ನೋಡಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:18 pm, Thu, 20 August 26




