
ಧಾರವಾಡ, ಜುಲೈ 25: ಧಾರವಾಡ (dharwad) ತಾಲೂಕಿನ ಶಿವಳ್ಳಿ ಹಾಗೂ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಅನೇಕ ದಿನಗಳಿಂದ ಆತಂಕದಲ್ಲಿದ್ದಾರೆ. ನಾಳೆ ತಮ್ಮ ಹಾಗೂ ಮಕ್ಕಳ ಭವಿಷ್ಯ ಏನಾಗುತ್ತೆ ಅನ್ನೋ ಚಿಂತೆಯಲ್ಲಿದ್ದಾರೆ. ತಮ್ಮ ಹೊಲಗಳಲ್ಲಿನ ನೀರಿಗೂ ಸಮಸ್ಯೆಯಾದರೆ, ಕೃಷಿ ಮಾಡುವುದಾದರೂ ಹೇಗೆ ಅನ್ನೋ ದುಗುಡದಲ್ಲಿದ್ದಾರೆ. ಇದೇ ಕಾರಣಕ್ಕೆ ಇದೀಗ ಹೋರಾಟದ ಹಾದಿ ತುಳಿದಿದ್ದಾರೆ. ತಮ್ಮೂರಿನಲ್ಲಿ ಪಕ್ಕದೂರಿನ ಕಸವನ್ನು ತಂದು ಹಾಕಿ, ಬಯೋಗ್ಯಾಸ್ (bio-gas) ಉತ್ಪಾದನಾ ಘಟಕವೇ ಅವರೆಲ್ಲರ ಆತಂಕಕ್ಕೆ ಮೂಲ ಕಾರಣವಾಗಿದೆ.
ಧಾರವಾಡ ತಾಲೂಕಿನ ಶಿವಳ್ಳಿ ಸಮೀಪದ ಮಡ್ಡಿಗುಡ್ಡದಲ್ಲಿ ಘನ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನಾ ಘಟಕ ನಿರ್ಮಾಣವಾಗುತ್ತಿದೆ. ಸುಮಾರು 450 ಟನ್ ಸಾಮರ್ಥ್ಯದ ಈ ಘಟಕ ಇಲ್ಲಿ ಸ್ಥಾಪನೆಯಾಗುವುದು ಬೇಡ ಅಂತಾ ಹಲವಾರು ವರ್ಷಗಳಿಂದ ಶಿವಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಈ ಘಟಕದಲ್ಲಿ ಬಯೋಗ್ಯಾಸ್ ಉತ್ಪಾದನೆಯಾಗುವುದು ಈ ಗ್ರಾಮಗಳ ಜನರು ಬೀಸಾಕಿದ ಘನ ತ್ಯಾಜ್ಯದಿಂದಲ್ಲ. ಬದಲಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಗ್ರಹವಾದ ಕಸದಿಂದ.
ಇದನ್ನೂ ಓದಿ: ಉಳಿತಾಯ ಖಾತೆಯ ಹಣ ನೀಡದ ಸೊಸೈಟಿಗೆ ದಂಡ: ಹುಬ್ಬಳ್ಳಿ ಮಹಿಳೆಗೆ ಸಿಕ್ತು ನ್ಯಾಯ!
ಯಾವುದೋ ದೊಡ್ಡ ನಗರದಲ್ಲಿನ ಕಸ ನಮ್ಮೂರಲ್ಲಿ ಏಕೆ ತಂದು ಹಾಕಿ, ಇಲ್ಲಿ ಬಯೋಗ್ಯಾಸ್ ಉತ್ಪಾದನೆ ಮಾಡಬೇಕು ಅನ್ನೋದು ಈ ಗ್ರಾಮಗಳ ಜನರ ಪ್ರಶ್ನೆ. ಈ ಗ್ರಾಮದ ಸುತ್ತಮುತ್ತಲಿನ ಹೆಬ್ಬಳ್ಳಿ, ಮಾರಡಗಿ, ಶಿವಳ್ಳಿ, ಸುಳ್ಳ ಮತ್ತು ಸೋಮಾಪುರ ಹಳ್ಳಿಗಳ ಜನರು ಸೇರಿ ಪರಿಸರ ರಕ್ಷಣೆ ಜನಾಂದೋಲನ ಸಮಿತಿ ಮಾಡಿಕೊಂಡಿದ್ದು, ಈ ಸಮಿತಿ ವತಿಯಿಂದ ಇದೀಗ ಹೋರಾಟ ಶುರು ಮಾಡಿದ್ದಾರೆ. ಶುಕ್ರವಾರವಷ್ಟೇ ಈ ಎಲ್ಲಾ ಗ್ರಾಮಗಳ ನೂರಾರು ಜನರು ತಮ್ಮೂರಿನಿಂದ ಪಾದಯಾತ್ರೆ ಮೂಲಕ ಧಾರವಾಡಕ್ಕೆ ಬಂದು, ಪಾಲಿಕೆ ಕಚೇರಿ ಮುಂದೆ ಪ್ರತಿಭಟಿಸಿದರು. ‘ಯಾವುದೇ ಕಾರಣಕ್ಕೂ ಘಟಕವನ್ನು ತಮ್ಮೂರ ಬಳಿ ನಿರ್ಮಿಸಲು ಬಿಡುವುದಿಲ್ಲ’ ಎಂದು ಸ್ಥಳೀಯರಾದ ಚೆನ್ನಯ್ಯ ವಸ್ತ್ರದ ಎಚ್ಚರಿಕೆ ನೀಡಿದ್ದಾರೆ.
ಈ ಯೋಜನೆಯನ್ನು ಒಟ್ಟು 67 ಎಕರೆ ಪ್ರದೇಶದಲ್ಲಿ ಮಾಡಲಾಗುತ್ತಿದೆ. ಒಂದು ವೇಳೆ ಈ ಯೋಜನೆ ಶುರುವಾದರೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ದುರ್ನಾತ ಹರಡುವುದರ ಜೊತೆಗೆ ಸೊಳ್ಳೆ, ನೊಣಗಳ ಹಾವಳಿಯೂ ಹೆಚ್ಚುತ್ತೆ ಎಂಬ ಆತಂಕ ಜನರದ್ದು. ಇದರೊಂದಿಗೆ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಅಂತರ್ಜಲವೂ ಕಲುಷಿತಗೊಳ್ಳುತ್ತೆ. ಒಂದು ವೇಳೆ ಅಂತರ್ಜಲವೇ ಕಲುಷಿತಗೊಂಡರೆ ಜನರ ಆರೋಗ್ಯದ ಗತಿ ಏನು ಅನ್ನೋ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಇದರೊಂದಿಗೆ ಕೃಷಿಗೂ ಕೂಡ ಕಲುಷಿತ ಅಂತರ್ಜಲದಿಂದ ದೊಡ್ಡ ತೊಂದರೆಯಾಗುತ್ತೆ.
ಘಟಕದ ವಿಷಕಾರಿ ತ್ಯಾಜ್ಯ ದ್ರವವು (ಸ್ಲರಿ) ಭೂಮಿಯಲ್ಲಿ ಇಂಗೋದ್ರಿಂದಾಗಿ ಮಣ್ಣಿನ ಫಲವತ್ತತೆ ಕೂಡ ಹಾಳಾಗಲಿದೆ. ಇದಲ್ಲದೇ ಕಸ ಘಟಕಗಳಲ್ಲಿ ಬೆಂಕಿ ಅವಘಡಗಳು ಸಂಭವಿಸುವ ಅಪಾಯವಿದ್ದು, ಅಪಾಯಕಾರಿ ಅನಿಲ ತಮ್ಮೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸೇರಿಕೊಂಡು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಅನ್ನೋ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ‘ಯಾವುದೇ ಕಾರಣಕ್ಕೂ ಈ ಘಟಕವನ್ನು ನಿರ್ಮಿಸಲು ಅವಕಾಶ ಕೊಡುವುದಿಲ್ಲ’ ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದರೊಂದಿಗೆ ‘ನಮ್ಮ ಗ್ರಾಮ, ನಮ್ಮ ಹಕ್ಕು’, ‘ನಮ್ಮ ಆರೋಗ್ಯ ನಮ್ಮ ಹಕ್ಕು’ ಅನ್ನೋ ಘೋಷಣೆ ಮೂಲಕ ಹೋರಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: ಧಾರವಾಡ: ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಗ್ರಾಮಸ್ಥರ ಒತ್ತಡ ಹೆಚ್ಚಾಗಿದ್ದರಿಂದ ಇದೀಗ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಕೆಲಸವನ್ನು ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ. ಆದರೆ ಇಂದಲ್ಲ ನಾಳೆ ಮತ್ತೆ ನಿರ್ಮಾಣ ಕಾರ್ಯವನ್ನು ಆರಂಭಸಲಾಗುತ್ತೆ ಅನ್ನೋ ಆತಂಕ ಜನರದ್ದು. ಹೀಗಾಗಿ ಇಲ್ಲಿಂದ ಘಟಕ ಬೇರೆಡೆ ಸ್ಥಳಾಂತರವಾಗುವವರೆಗೆ ಹೋರಾಟ ಮುಂದುವರೆಸುವುದಾಗಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.