ಪ್ರದೀಪ್ ಶೆಟ್ಟರ್ ಅಸಮಾಧಾನ ಬೆನ್ನಲ್ಲೇ ಬಿಜೆಪಿ ಅಲರ್ಟ್; ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಮಹತ್ವದ ಸಭೆ

| Updated By: ಗಣಪತಿ ಶರ್ಮ

Updated on: Sep 11, 2023 | 4:56 PM

ಕಳೆದ ವಾರವಷ್ಟೇ ಪ್ರದೀಪ್ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅದಕ್ಕೂ ಮುನ್ನ ಶಂಕರ ಪಾಟೀಲ ಮುನೇನಕೊಪ್ಪ ಕೂಡ ಅಸಮಾಧಾನ ಹೊರಹಾಕಿದ್ದರು. ಪಕ್ಷದಲ್ಲಿ ಹಿರಿಯರು ಇಲ್ಲದಂತಾಗಿದೆ ಎಂದಿದ್ದರು. ಇದೀಗ ಬಿಜೆಪಿ ನಾಯಕತ್ವ ಅಲರ್ಟ್ ಆಗಿದ್ದು, ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ಕರೆದಿದೆ.

ಪ್ರದೀಪ್ ಶೆಟ್ಟರ್ ಅಸಮಾಧಾನ ಬೆನ್ನಲ್ಲೇ ಬಿಜೆಪಿ ಅಲರ್ಟ್; ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಮಹತ್ವದ ಸಭೆ
ಸಾಂದರ್ಭಿಕ ಚಿತ್ರ
Follow us on

ಹುಬ್ಬಳ್ಳಿ, ಸೆಪ್ಟೆಂಬರ್ 11: ಎಂಎಲ್​ಸಿ ಪ್ರದೀಪ್ ಶೆಟ್ಟರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ (BJP) ನಾಯಕರು ಅಲರ್ಟ್ ಆಗಿದ್ದು, ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಮಹತ್ವದ ಕೋರ್ ಕಮಿಟಿ ಸಭೆ (Core Committee Meeting) ಕರೆದಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಇದಕ್ಕೂ ಪ್ರದೀಪ್ ಶೆಟ್ಟರ್ ಗೈರಾಗುತ್ತಿದ್ದಾರೆ. ಕೋರ್ ಕಮಿಟಿ ಸಭೆಗೆ ಅಹ್ವಾನವಿದ್ದರೂ ಅವರು ಬೇರೆಡೆ ಪ್ರವಾಸಕ್ಕೆ ತೆರಳಿದ್ದಾರೆ.

ಕಳೆದ ವಾರವಷ್ಟೇ ಪ್ರದೀಪ್ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅದಕ್ಕೂ ಮುನ್ನ ಶಂಕರ ಪಾಟೀಲ ಮುನೇನಕೊಪ್ಪ ಕೂಡ ಅಸಮಾಧಾನ ಹೊರಹಾಕಿದ್ದರು. ಪಕ್ಷದಲ್ಲಿ ಹಿರಿಯರು ಇಲ್ಲದಂತಾಗಿದೆ ಎಂದಿದ್ದರು. ಮುನೇನಕೊಪ್ಪ, ಪ್ರದೀಪ್ ಅಸಮಾಧಾನದ ಬೆನ್ನಲ್ಲೇ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಸಭೆಗೆ ಶಾಸಕರು, ಮಾಜಿ ಶಾಸಕರು, ಬಿಜೆಪಿ ಕಾರ್ಯಕರ್ತರಿಗೆ ಅಹ್ವಾನ ನೀಡಲಾಗಿದೆ.

ಇತ್ತೀಚೆಗೆ ವರದಿಗಾರರೊಂದಿಗೆ ಮಾತನಾಡಿದ್ದ ಪ್ರದೀಪ್, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರಿಂದ ಬೇಸತ್ತು ಸಮುದಾಯದ ಅನೇಕ ನಾಯಕರು ಬಿಜೆಪಿ ಪಕ್ಷದಿಂದ ಹೆಜ್ಜೆ ಹೊರಗಿಡುತ್ತಿದ್ದಾರೆ. ಪಕ್ಷದಲ್ಲಿ ನಾಯಕತ್ವದ ಕೊರತೆ ಇದ್ದಂತಿದೆ. ವಿರೋಧ ಪಕ್ಷದ ನಾಯಕನನ್ನು ಇನ್ನು ಆಯ್ಕೆ ಮಾಡಿಲ್ಲ. ಹೀಗಿದ್ದಾಗ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಬೇಸರ ಹೊರ ಹಾಕಿದ್ದರು.

ಅದಾದ ನಂತರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಕಾರ್ಯಾಲಯ ಉದ್ಘಾಟನೆ ಪೋಸ್ಟರ್​ನಲ್ಲಿ ಪ್ರದೀಪ್ ಶೆಟ್ಟರ್​ ಅವರ ಫೋಟೋ‌ ಕೈಬಿಟ್ಟಿದ್ದು ಕೂಡ ಊಹಾಪೋಹಕ್ಕೆ ಕಾರಣವಾಗಿತ್ತು.

ನಾನು ಪ್ರದೀಪ್ ಶೆಟ್ಟರ್ ಕಡೆಗಣನೆ ಮಾಡಿಲ್ಲ; ಟೆಂಗಿನಕಾಯಿ

ಜನಸಂಪರ್ಕ ಕಾರ್ಯಾಲಯ ಉದ್ಘಾಟನೆಗೆ ಪ್ರದೀಪ್ ಶೆಟ್ಟರ್ ಅವರನ್ನು ಕಡೆಗಣನೆ ಮಾಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ. ಎಂಎಲ್​ಸಿ ಪ್ರದೀಪ್ ಶೆಟ್ಟರ್​ ಜೊತೆ ನಾನೇ ಮಾತನಾಡಿದ್ದೇನೆ. ಪ್ರದೀಪ್ ಶೆಟ್ಟರ್ ಪ್ರವಾಸದಲ್ಲಿದ್ದಾರೆ ಎಂದು ಟೆಂಗಿನಕಾಯಿ ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಮತ್ತೆ ಬಿಜೆಪಿ​ ಎಂಎಲ್​ಸಿ ಪ್ರದೀಪ್ ಶೆಟ್ಟರ್ ಕಡೆಗಣನೆ; ಶಾಸಕರ ಕಾರ್ಯಾಲಯ ಉದ್ಘಾಟನಾ ಪೋಸ್ಟರ್​ನಲ್ಲಿ ಫೋಟೋ ಮಿಸ್

ಕಾರ್ಯಾಲಯ ಉದ್ಘಾಟನೆಗೆ ಬ್ಯಾನರ್​, ಪೋಸ್ಟರ್​ಗಳನ್ನು ಹಾಕಿಲ್ಲ. ನನ್ನ ಅಧಿಕೃತ ಪೇಜ್​ನಲ್ಲಿ ಪ್ರದೀಪ್​ ಶೆಟ್ಟರ್​ ಫೋಟೋ ಇದೆ. ಇದರಲ್ಲೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಆಗಬಾರದು. ಪ್ರದೀಪ್ ಶೆಟ್ಟರ್ ಹಾಗೂ ನಾನು ಸಹೋದರರಿದ್ದಂತೆ ಎಂದು ಟೆಂಗಿನಕಾಯಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ