ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಹುಬ್ಬಳ್ಳಿ ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು..!

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2024 | 5:59 PM

ಅದು ದಶಕಗಳ ಹೋರಾಟದ ಪ್ರತೀಕದ ಮೈದಾನ. ಆ ಐತಿಹಾಸಿಕ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ಸಾಕಷ್ಟು ವಿವಾದ ಸೃಷ್ಠಿಯಾಗಿತ್ತು.‌ ಆದ್ರೆ, ಈ ಬಾರಿ ಯಾವುದೇ ಸದ್ದು ಗದ್ದಲವಿಲ್ಲದೇ ಆ ಮೈದಾನದಲ್ಲಿ‌ ಪ್ರತಿವರ್ಷದಂತೆಯೇ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ದೊರೆತಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಹುಬ್ಬಳ್ಳಿ ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು..!
ಹುಬ್ಬಳ್ಳಿ ಈದ್ಗಾ ಮೈದಾನದ ಸುತ್ತ ಪೊಲೀಸ್​ ಬಂದೋಬಸ್ತ್
Follow us on

ಹುಬ್ಬಳ್ಳಿ, ಸೆ.05: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯಭಾಗ ಚೆನ್ನಮ್ಮ ವರ್ತುಲದ ಪಕ್ಕದಲ್ಲಿರುವ ಈದ್ಗಾ ಮೈದಾನ(Eidgah Maidan)ದಲ್ಲಿ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ- ಧಾರವಾಡ ಪಾಲಿಕೆ ಅಧಿಕೃತವಾಗಿ ಅನುಮತಿ ನೀಡಿದೆ. ಜೊತೆಗೆ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾ ಮಂಡಳಿಗೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅನುಮತಿ ಪತ್ರ ನೀಡಿದ್ದಾರೆ. ಕಳೆದ ಎರಡೂ ವರ್ಷ ಅನುಮತಿ ವಿಚಾರದಲ್ಲಿ ಸಾಕಷ್ಟು ಹೋರಾಟ ನಡೆದಿದ್ದು, ಮಾತ್ರವಲ್ಲದೆ ರಾಷ್ಟ್ರದಾದ್ಯಂತ ಗಮನ ಸೆಳೆದಿತ್ತು. ಅಲ್ಲದೇ ಈದ್ಗಾ ಮೈದಾನದ ಗಣಪತಿ ವರ್ಚಸ್ಸು ದೇಶಾದ್ಯಂತ ಹಬ್ಬಿತ್ತು. ಈ ವರ್ಷ ಪ್ರತಿಷ್ಠಾಪನೆಗೆ 4 ರಿಂದ 5 ಸಂಘಟನೆಗಳು ಅರ್ಜಿ ಸಲ್ಲಿಸಿದ್ದರೂ ಈಗಾಗಲೇ ಎರಡು ಅವಧಿ ಪ್ರತಿಷ್ಠಾಪಿಸಿರುವ ನ್ಯಾಯವಾದಿ ಸಂಜಯ ಬಡಸ್ಕರ ಅಧ್ಯಕ್ಷರಾಗಿರುವ ಮಹಾಮಂಡಳಿಗೆ ಷರತ್ತು ವಿಧಿಸಿ ಅನುಮತಿ ದೊರೆತಿದೆ.

ಪ್ರಮುಖವಾಗಿ ಕಳೆದ ಎರಡು ವರ್ಷಗಳಿಂದ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನಾ ವಿಚಾರವಾಗಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಗಲು ರಾತ್ರಿ ಪಾಲಿಕೆ ಆವರಣದಲ್ಲಿ ಹೋರಾಟ ಕೈಗೊಂಡಿದ್ದರು. ಅಲ್ಲದೆ ಈ ವಿಚಾರವಾಗಿ ಅಂಜುಮನ್ ಸಂಸ್ಥೆಯಿಂದ ಅಪಸ್ವರವೂ ಕೇಳಿ ಬರುವ ಮೂಲಕ ಅಂಜುಮನ್ ಸಂಸ್ಥೆಯ ಸದಸ್ಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದ್ರೆ, ಸುಪ್ರೀಂ‌ ಕೋರ್ಟ್ ಅಂಜುಮನ್ ಸಂಸ್ಥೆಯ ಅರ್ಜಿ ವಜಾ ಮಾಡುವ ಮೂಲಕ ಪಾಲಿಕೆ ಒಡೆತನದಲ್ಲಿರುವ ಈದ್ಗಾ ಮೈದಾನದ ಸರ್ವಾಧಿಕಾರವನ್ನ ಪಾಲಿಕೆಯ ಆಯುಕ್ತರಿಗೆ ಆದೇಶ ನೀಡುವ ಮೂಲಕ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗಿತ್ತು.‌

ಇದನ್ನೂ ಓದಿ:ಇಷ್ಟೇ ಎತ್ತರದ ಗಣೇಶ ಕೂರಿಸಬೇಕು, ಇದೇ ಸಮಯಕ್ಕೆ ವಿಸರ್ಜನೆ ಮಾಡ್ಬೇಕು: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ವಿಧಿಸಿರುವ 19 ಷರತ್ತುಗಳು

ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು

ಈ ಹಿನ್ನೆಲೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಗಜಾನನ ಮಹಾಮಂಡಳಿಗೆ ಪಾಲಿಕೆ ಆಯುಕ್ತ ಡಾ‌.ಈಶ್ವರ ಉಳ್ಳಾಗಡ್ಡಿ ಅನುಮತಿ ನೀಡಿದ್ದು, ಗಣೇಶ ಪ್ರತಿಷ್ಠಾಪನೆಗೆ ಸಕಲ‌ ಸಿದ್ಧತೆಗಳು ನಡೆಯುತ್ತಿವೆ.‌ ಇನ್ನು ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ಈದ್ಗಾ ಮೈದಾನ ಸುತ್ತಲೂ ಈಗಾಗಲೇ ಹು-ಧಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಎಸಿಪಿ, ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಸಿಬ್ಬಂಧಿಗಳನ್ನ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿರಿಸಿದೆ.

ಒಟ್ಟಿನಲ್ಲಿ ಸಾಕಷ್ಟು ವಿವಾದದ ನಡುವೆಯೂ ಕಳೆದ ಎರಡು ವರ್ಷಗಳಿಂದ ಹೋರಾಟದ ಮೂಲಕವೇ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದ್ರೆ, ಈ ಬಾರಿ ಯಾವುದೇ ಸದ್ದು ಗದ್ದಲವಿಲ್ಲದೇ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ದೊರೆತಿದ್ದು, ಅವಳಿನಗರದ ಸಾರ್ವಜನಿಕರಿಗೆ ಸಂತಸವನ್ನುಂಟು ಮಾಡಿದ್ದಂತೂ ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ