ಧಾರವಾಡ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ‌: ಹೋಟೆಲ್, ಕಟಿಂಗ್ ಶಾಪ್​ಗೆ ದಲಿತರಿಗಿಲ್ಲ ಪ್ರವೇಶ!

| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2023 | 3:49 PM

ವಿದ್ಯಾಕಾಶಿ ಧಾರವಾಡ ಜಿಲ್ಲೆಯ ರೊಟ್ಟಿಗವಾಡ ಗ್ರಾಮವೊಂದರಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಗ್ರಾಮದ ದಲಿತರಿಗೆ ಅಘೋಷಿತ‌ ಬಹಿಷ್ಕಾರ ಹಾಕಲಾಗಿದೆ. ಜೊತೆಗೆ ಹೋಟೆಲ್, ಕಟಿಂಗ್, ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿಲ್ಲ. ಅನಿಷ್ಟ ಪದ್ದತಿಯ ವಿರುದ್ದ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೂ ಪ್ರಯೋಜನವಾಗಿಲ್ಲವಂತೆ. ಇದು ಆ ಗ್ರಾಮದ ಯುವಕರನ್ನ ಕೆರಳಿಸಿದ್ದು, ನಮಗೂ ಸಮಾನತೆ ಬೇಕು ಎನ್ನುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ‌: ಹೋಟೆಲ್, ಕಟಿಂಗ್ ಶಾಪ್​ಗೆ ದಲಿತರಿಗಿಲ್ಲ ಪ್ರವೇಶ!
ಅಸ್ಪೃಶ್ಯತೆ ಇನ್ನೂ ಜೀವಂತ‌
Follow us on

ಧಾರವಾಡ, ಡಿಸೆಂಬರ್​​ 14: ದೇಶದ ಬಹುತೇಕ ಕಡೆ ಅಸ್ಪೃಶ್ಯತೆ (Untouchability) ಇನ್ನೂ ಜೀವಂತವಾಗಿದೆ. ಕೆಳಜಾತಿ ಮೇಲ್ಜಾತಿ ಎನ್ನುವ ಪೆಂಡಭೂತ ನಮ್ಮ ಸಮಾಜದಲ್ಲಿದೆ. ಸದ್ಯ ಇದಕ್ಕೆ ತಾಜಾ ಉದಾಹರಣೆ ಎನ್ನುವಂತಹ ಘಟನೆಯೊಂದು ನಡೆದಿದೆ. ವಿದ್ಯಾಕಾಶಿ ಧಾರವಾಡ ಜಿಲ್ಲೆಯ ರೊಟ್ಟಿಗವಾಡ ಗ್ರಾಮವೊಂದರಲ್ಲಿ ದಲಿತರಿಗೆ ಅಘೋಷಿತ‌ ಬಹಿಷ್ಕಾರ ಹಾಕಲಾಗಿದೆ. ಗ್ರಾಮದ ಹೋಟೆಲ್, ಕಟಿಂಗ್, ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇಲ್ಲ. ಇದು ಆ ಗ್ರಾಮದ ಯುವಕರನ್ನ ಕೆರಳಿಸಿದ್ದು, ನಮಗೂ ಸಮಾನತೆ ಬೇಕು ಎನ್ನುತ್ತಿದ್ದಾರೆ.

ಕಟಿಂಗ್ ಶಾಪ್​ಗೆ ನೋ ಎಂಟ್ರಿ

ರೊಟ್ಟಿಗವಾಡ ಗ್ರಾಮದ ಹೋಟೆಲ್, ದೇವಸ್ಥಾನ, ಕಟಿಂಗ್ ಶಾಪ್​ಗಳಿಗೆ ಪ್ರವೇಶ ಇಲ್ಲ. ಅದರಲ್ಲೂ ಹೋಟೆಲ್ ನಲ್ಲಿ ದಲಿತರಿಗೆ ಪ್ಲಾಸ್ಟಿಕ್ ಪ್ಲೇಟ್​ನಲ್ಲಿ ಉಪಹಾರ ಕೊಡಲಾಗುತ್ತಿದೆ. ನೀರು ಎತ್ತಿ ಹಾಕುವ ಪದ್ದತಿ
ಇನ್ನು ಇದೆ ಅಂತೆ. ಕಟಿಂಗ್ ಶಾಪ್​ಗಳಿಗೆ ಹೋದರೆ ಕಟಿಂಗ್ ಮಾಡುವುದಿಲ್ಲ. ಪಂಚಾಯತ್​ಗೆ ಹೋಗಿ ಕೇಳಕೊಂಡ ಬನ್ನಿ ಅನ್ನೋದ ಮಾಲೀಕರ ಉತ್ತರವಾಗಿದೆ.

ಇದನ್ನೂ ಓದಿ: ಕನಕದಾಸರ ತವರೂರಲ್ಲೇ ಅಸ್ಪೃಶ್ಯತೆ ಜೀವಂತ; ದೇವಸ್ಥಾನ ಪ್ರವೇಶಿಸಿದ ತಾಯಿ, ಮಗನ ಮೇಲೆ ಸವರ್ಣೀಯರಿಂದ ಹಲ್ಲೆ!

ದಲಿತ ಸಮುದಾಯದ ಜನರಿಗೆ ಗ್ರಾಮದ ಯಾವುದೇ ಕಟಿಂಗ್ ಶಾಪ್​ನಲ್ಲಿ ಕಟಿಂಗ್​ ಮಾಡುವುದಿಲ್ಲವಂತೆ. ಒಂದು ವೇಳೆ ಕಟಿಂಗ್ ಮಾಡಿದ್ದೆ ಆದರೆ 500 ಸಾವಿರ ರೂಪಾಯಿವರೆಗೂ ಹಣ ಕೇಳುತ್ತಾರೆ. ಹೀಗಾಗಿ ಇಲ್ಲಿನ ದಲಿತ ಸಮುದಾಯದ ಜನ‌ ಮತ್ತೊಂದು ಹಳ್ಳಿಗೆ ಹೋಗಿ ಕಟಿಂಗ್ ಮಾಡಿಸಿಕೊಂಡು‌ ಬರುತ್ತಾರೆ. ದಲಿತ ಸಮುದಾಯ ಜನರನ್ನು ಇನ್ನು ಕೆಳಗಿನವರಾಗಿ ಕಾಣ್ಣುವ ಪದ್ದತಿ ರೊಟ್ಟಿಗವಾಡ ಗ್ರಾಮದಲ್ಲಿ ಇನ್ನು ಜೀವಂತ ಇದೆ ಅನ್ನೋದು ಗ್ರಾಮದ ದಲಿತ ಯುವಕರ ಮಾತು.

ಅನಾದಿಕಾಲದಿಂದಲೂ ಇದೇ ಪದ್ದತಿ ಜಾರಿ

ರೊಟ್ಟಿಗವಾಡ ಗ್ರಾಮದಲ್ಲಿ ಇದು ಇಂದಿನ ಪದ್ದತಿ ಅಲ್ಲ. ಅನಾದಿಕಾಲದಿಂದಲೂ ಇದೇ ಪದ್ದತಿ ಜಾರಿಯಲ್ಲಿದೆ ಅಂತೆ‌. ಅಕಸ್ಮಾತ್ ದಲಿತರು ದೇವಸ್ಥಾನಕ್ಕೆ ಹೋದರೆ ಏನಾದರೂ ಅವಘಡ ಸಂಭವಿಸಿದರೆ
ದಲಿತರೇ ಕಾರಣ ಎಂದು ಗ್ರಾಮದ ಸವರ್ಣೀಯರು ಹಿಯಾಳಿಸುತ್ತಾರಂತೆ. ರೊಟ್ಟಿಗವಾಡ ಗ್ರಾಮದಲ್ಲಿ ದಲಿತರು ಒಂದು ಕಡೆ, ಉಳಿದ ಎಲ್ಲ ಸುವರ್ಣೀಯರು ಒಂದು ಕಡೆ. ಒಂದು ರೀತಿ ದಲಿತ ಸಮುದಾಯದ ಜನರಿಗೆ ಅಲ್ಲಿ ಅಘೋಷಿತ ಬಹಿಷ್ಕಾರ ಹಾಕಲಾಗಿದೆ.

ಇದನ್ನೂ ಓದಿ: ಧಾರವಾಡದಲ್ಲಿ ಮತ್ತೆ ಮುನ್ನೆಲೆಗೆ ಬಂದ ಧರ್ಮ ದಂಗಲ್; ದೇವಸ್ಥಾನಗಳಲ್ಲಿ ಅನ್ಯ ಧರ್ಮದವರ ವ್ಯಾಪಾರ ನಿಷೇಧಕ್ಕೆ ಆಗ್ರಹ

ಗ್ರಾಮದಲ್ಲಿ ಸುಮಾರು 40 ದಲಿತ ಕುಟುಂಬಗಳಿದ್ದು ಯಾರೂ ಕೂಡ ಸಾರ್ವಜನಿಕ ಪ್ರದೇಶದಲ್ಲಿ ಬರುವ ಹಾಗಿಲ್ಲ ಅನ್ನೋ ಅಲಿಖಿತ ನಿಯಮ ಜಾರಿ ಮಾಡಲಾಗಿದೆ. ಏನೇ ಕೆಲಸ ಇದ್ದರೆ, ಎಲ್ಲದರಲ್ಲೂ ಪ್ರತ್ಯೇಕವಾಗಿ‌ ದಲಿತರನ್ನು ಕಾಣಲಾಗ್ತಿದೆಯಂತೆ. ಗ್ರಾಮದಲ್ಲಿ ಸುವರ್ಣೀಯರು, ದಲಿತರ ನಡುವೆ ದೊಡ್ಡ ಕಂದಕವಿದ್ದು, ಮೂಲಭೂತ ಸೌಲಭ್ಯವು ದಲಿತರಿಗೆ ಸಿಗುತ್ತಿಲ್ಲ.

ದಲಿತರಿಗೆ ಸಿಗಬೇಕಾಗಿರುವ ಅಂಗನವಾಡಿಯೂ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ. ಅಕಸ್ಮಾತ್ ಗ್ರಾಮದಲ್ಲಿ ದಲಿತ ಸಮದಾಯದ ಜನ ತೀರಿ ಹೋದರೆ ಗ್ರಾಮದ ಬಹುತೇಕ ಅಂಗಡಿಗಳು ಅವತ್ತು ಬಂದ್ ಆಗತ್ತೆ. ಇಂತಹ ಅಲಿಖಿತ ನಿಯಮವನ್ನು ಗ್ರಾಮಸ್ಥರು ಜಾರಿ ಮಾಡಿದ್ದಾರೆ. ಕೇವಲ ಹೋಟೆಲ್, ದೇವಸ್ಥಾನ, ಕಟಿಂಗ್ ಶಾಪ್ ಅಲ್ಲ ಸಾರ್ವಜನಿಕ ಪ್ರದೇಶದಲ್ಲೂ ದಲಿತರು ಬರುವ ಹಾಗಿಲ್ಲವಂತೆ. ಅಂಬೇಡ್ಕರ್ ಹೇಳಿದಂತೆ ನಮಗೆ ಸಮಾನತೆ ಬೇಕು. ಸ್ವಾತಂತ್ರ್ಯ ಸಿಕ್ಕು 75 ವರ್ಷ ಆದರೂ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವುದು ದಲಿತ ಮುಖಂಡರ ಮಾತಾಗಿದೆ.

ರೊಟ್ಟಿಗವಾಡದ ಅನಿಷ್ಟ ಪದ್ದತಿಯ ವಿರುದ್ದ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೂ ಪ್ರಯೋಜನವಾಗಿಲ್ಲವಂತೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಅಘೋಷಿತ ಬಹಿಷ್ಕಾರಕ್ಕೆ ಒಳಗಾದ ದಲಿತ ಸಮುದಾಯಕ್ಕೆ ಸಮಾನತೆ ಸಿಗುವ ಹಾಗೆ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.