ಮದುವೆ ಫೋಟೋ ಕೊಡದ ಫೋಟೊಗ್ರಾಫರ್​ಗೆ​ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ

ಫೋಟೊಗ್ರಾಫರ್‌ ಮದುವೆಯ ಫೋಟೋಗಳನ್ನೇ ನೀಡದೇ ಇದ್ದಿದ್ದಕ್ಕೆ ಮದುವೆ ಮನೆ ಕಡೆಯವರು ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಫೋಟೋಗ್ರಾಫರ್ಗೆ ಬರೋಬ್ಬರಿ ಬಿಸಿ ಮುಟ್ಟಿಸಿದೆ.

ಮದುವೆ ಫೋಟೋ ಕೊಡದ ಫೋಟೊಗ್ರಾಫರ್​ಗೆ​ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ
ಪ್ರಾತಿನಿಧಿಕ ಚಿತ್ರ
Edited By:

Updated on: Jul 19, 2023 | 7:47 PM

ಧಾರವಾಡ, ಜುಲೈ 19: ಕಳೆದು ಹೋದ ಕ್ಷಣಗಳು ಮತ್ತೆ ಬಾರವು ಎನ್ನುವ ಮಾತೊಂದಿದೆ. ಮದುವೆಯಂಥ ಕಾರ್ಯಕ್ರಮಗಳು ಜೀವನದಲ್ಲಿ ಒಂದೇ ಬಾರಿ ನಡೆಯುತ್ತವೆ. ಈ ಸಂದರ್ಭದಲ್ಲಿನ ಮಧುರ ಕ್ಷಣಗಳನ್ನು ಮೆಲುಕು ಹಾಕಲು ಫೋಟೋ, ವೀಡಿಯೋಗಳೊಂದೇ ಸಾಧನ. ಹೀಗಾಗಿ ಇಂಥ ಕಾರ್ಯಕ್ರಮಗಳಲ್ಲಿ ಫೋಟೊಗ್ರಾಫರ್‌ (photographer) ಮತ್ತು ವೀಡಿಯೋಗ್ರಾಫರ್ಗೆ ವಿಶೇಷ ಆದರವಿರುತ್ತೆ. ಆದರೆ ಧಾರವಾಡದ ಓರ್ವ ಫೋಟೊಗ್ರಾಫರ್‌ ಮದುವೆಯ ಫೋಟೋಗಳನ್ನೇ ನೀಡದೇ ಇದ್ದಿದ್ದಕ್ಕೆ ಮದುವೆ ಮನೆ ಕಡೆಯವರು ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಫೋಟೋಗ್ರಾಫರ್ಗೆ ಬರೋಬ್ಬರಿ ಬಿಸಿ ಮುಟ್ಟಿಸಿದೆ.

ಧಾರವಾಡ ನಗರದ ಆಕಾಶವಾಣಿ ಹತ್ತಿರದ ಶೇಕ್ ಕಂಪೌಂಡ್ ನಿವಾಸಿ ಶಹಬಾಜ ಹೆಬಸೂರ ಎಂಬುವವರು ತನ್ನ ಮದುವೆಗೆ ಫೋಟೋ ತೆಗೆಯಲು ಸತ್ತೂರು ಬಡಾವಣೆಯ ಕೆ.ಎಚ್.ಬಿ. ಲೇಔಟ್‌ನಲ್ಲಿರುವ ರವಿ ದೊಡ್ಡಮನಿ ಎಬುವರಿಗೆ ರೂ. 25 ಸಾವಿರಕ್ಕೆ ಗುತ್ತಿಗೆ ಕೊಟ್ಟಿದ್ದರು. ಆ ಪೈಕಿ ಶಹಬಾಜ ಅವರು ರೂ. 15 ಸಾವಿರ ಮುಂಗಡ ಹಣ ಸಹ ಕೊಟ್ಟಿದ್ದರು.

ಇದನ್ನೂ ಓದಿ: ಸಂವಿಧಾನದ 371 ಜೆ ವಿಧಿಯಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ

2022 ರ ಡಿಸೆಂಬರ್ ನಲ್ಲಿ ಶಹಬಾಜ್ ಅವರ ಮದುವೆಯಾಗಿತ್ತು. ಮದುವೆಯಾಗಿ ಬಹಳ ದಿನಗಳಾದರೂ ರವಿ ದೊಡ್ಡಮನಿ ಫೋಟೋಗಳನ್ನು ನೀಡಿರಲಿಲ್ಲ. ಇದರಿಂದ ಬೇಸತ್ತ ಶಹಬಾಜ್ ಹೆಬಸೂರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಮದುವೆಯ ಸವಿನೆನಪಿಗಾಗಿ ಮದುವೆ ಸಮಾರಂಭದಲ್ಲಿ ತೆಗೆದ ಫೋಟೋಗಳನ್ನು ನೀಡದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ.

ಇದನ್ನೂ ಓದಿ: Yatnal rushed to hospital: ವಿಧಾನ ಸಭೆಯಲ್ಲಿ ಕುಸಿದು ಬಿದ್ದ ಶಾಸಕ ಬಸನಗೌಡ ಯತ್ನಾಳ್, ಬಿಪಿ ಹೊರತು ಯಾವುದೇ ಸಮಸ್ಯೆಯಿಲ್ಲ ಎಂದ ವೈದ್ಯರು

ಸಂದಾಯ ಮಾಡಿದ ಮುಂಗಡ ಹಣ ರೂ. 15 ಸಾವಿರ ಜೊತೆಗೆ ದೂರುದಾರ ಅನುಭವಿಸಿದ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 10 ಸಾವಿರ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚವೆಂದು ರೂ. 5 ಸಾವಿರ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಫೋಟೊಗ್ರಾಫರ್‌ ರವಿ ದೊಡ್ಡಮನಿಗೆ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us