ಈ ಬಾರಿಯೂ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ: ಮೇಯರ್ ವೀಣಾ ಬರದ್ವಾಡ ಸ್ಪಷ್ಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 01, 2023 | 2:10 PM

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ನಿನ್ನೆ ಹುಬ್ಬಳ್ಳಿಯಲ್ಲಿ ಸಾಮಾನ್ಯ ಸಭೆ ಮಾಡಿದ್ದು, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಠರಾವು ನೀಡಲಾಗಿದೆ ಕಳೆದ ಬಾರಿ ಮೂರು ದಿನ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿದ್ದು, ಈ ಬಾರಿಯೂ ಮೂರು ದಿನ ಪ್ರತಿಷ್ಠಾಪನೆ ಮಾಡಬಹುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿಯೂ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ: ಮೇಯರ್ ವೀಣಾ ಬರದ್ವಾಡ ಸ್ಪಷ್ಟನೆ
ಹುಬ್ಬಳ್ಳಿ ಈದ್ಗಾ ಮೈದಾನ
Follow us on

ಹುಬ್ಬಳ್ಳಿ, ಸೆಪ್ಟೆಂಬರ್ 1: ಕಳೆದ ಬಾರಿ ಮೂರು ದಿನ ಈದ್ಗಾ ಮೈದಾನದಲ್ಲಿ (Idgah maidan) ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿತ್ತು. ಈ ಬಾರಿಯೂ ಮೂರು ದಿನ ಗಣೇಶ ಪ್ರತಿಷ್ಠಾಪನೆ ಮಾಡಬಹುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಠರಾವು ಮಾಡಲಾಗಿದೆ. ಕೆಲ ಪಕ್ಷದವರು ವಿರೋಧ ಮಾಡಿದರು. ವಿರೋಧ ಪಕ್ಷದ ಸದಸ್ಯರದು ವಿರೋಧ ಮಾಡುವುದೇ ಕೆಲಸವಾಗಿದೆ ಎಂದು ಹೇಳಿದರು.

ಮೂರು ದಿನಗಳ ಕಾಲ ನಾವು ಗಣೇಶ ಹಬ್ಬ ಆಚರಣೆ ಮಾಡುತ್ತೇವೆ. ಅದು ಪಾಲಿಕೆ ಜಾಗ, ಗಣೇಶ ಉತ್ಸವಕ್ಕೆ ಬೇಡ ಅನ್ನುವುದಕ್ಕೆ ಆಗಲ್ಲ. ಕಳೆದ ಬಾರಿಯೇ ಆಚರಣೆ ಮಾಡಿದ್ದೇವೆ, ಅದರಂತೆ ನಾವು ಈ ಬಾರಿ ಗಣೇಶ ಉತ್ಸವ ಆಚರಣೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ಸಲಹೆ

ರಾಣಿ ಚೆನ್ನಮ್ಮ ಗಜಾನನ ಮಂಡಳಿಗೆ ಕಳೆದ ಬಾರಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿತ್ತು. ಈ ಬಾರಿಯೂ ಅವರಿಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿದೆ. ಗಣೇಶ ಪ್ರತಿಷ್ಠಾಪನೆ ವಿರೋಧ ಮಾಡುವ ಕೆಲಸ ಅಲ್ಲ. ಇದು ಪಾಲಿಕೆ ಜಾಗ, ಅಲ್ಲಿ ನಮಾಜ್ ಮಾಡುವುದಕ್ಕೆ ಅವಕಾಶ ಇದೆ. ಅದೇ ರೀತಿ ಗಣೇಶ ಹಬ್ಬ ಆಚರಣೆ ಮಾಡುತ್ತೇವೆ ಅಂತಾ ಹೇಳಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಬೇಡ, ನಮ್ಮ ವಿರೋಧವಿದೆ: ಎಐಎಂಐಎಂ ಜಿಲ್ಲಾಧ್ಯಕ್ಷ

ಇತ್ತೀಚೆಗೆ ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸುತ್ತೇವೆ. ಯಾರು ವಿರೋಧ ಮಾಡುತ್ತಾರೆ ನೋಡುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ ಕಿಡಿಕಾರಿದ್ದರು. ಬಳಿಕ ಎಐಎಂಐಎಂ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಹೊನ್ಯಾಳ್​ ಹೇಳಿಕೆ ನೀಡಿದ್ದು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ  ಮೊದಲಿನಿಂದಲೂ ವಿರೋಧ ಇದೆ.

ಹೀಗಾಗಿ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ನೀಡುವುದು ಬೇಡ. ನಮ್ಮ ಪಕ್ಷ ಈದ್ಗಾ ಮೈದಾನದಲ್ಲಿ ಗಣೇಶ ಆಚರಣೆಗೆ ವಿರೋಧ ಮಾಡತ್ತದೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:58 pm, Fri, 1 September 23