ಚಿಗರಿ’ ಬಸ್‌ಗಳಿಂದ NWKRTCಗೆ ಭಾರಿ ಆರ್ಥಿಕ ಸಂಕಷ್ಟ: ನಿರ್ವಹಣೆ ಸಿಗದೆ ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿರುವ ಎಸಿ ಬಸ್‌ಗಳು

ದಕ್ಷಿಣ ಭಾರತದ ಮೊಟ್ಟಮೊದಲ ಬಿಆರ್‌ಟಿಎಸ್ ಯೋಜನೆಯಾದ ಹುಬ್ಬಳ್ಳಿ-ಧಾರವಾಡ ಚಿಗರಿ ಬಸ್‌ಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ದೊಡ್ಡ ಹೊರೆಯಾಗಿವೆ. ಪ್ರತಿನಿತ್ಯ 2.5 ಕೋಟಿ ರೂ. ನಷ್ಟ ಅನುಭವಿಸುತ್ತಿರುವ ಸಂಸ್ಥೆಗೆ, ನಗರ ಅಭಿವೃದ್ಧಿ ಇಲಾಖೆಯಿಂದ ಬರಬೇಕಿರುವ 150 ಕೋಟಿ ರೂ.ಗೂ ಹೆಚ್ಚು ಹಣ ಬಾಕಿಯಿದೆ. ನಿರ್ವಹಣಾ ವೆಚ್ಚ ಹೆಚ್ಚಳ ಮತ್ತು ಆದಾಯ ಕುಸಿತದಿಂದಾಗಿ ಸೇವೆ ಗುಣಮಟ್ಟವೂ ಕುಸಿಯುತ್ತಿದೆ.

ಚಿಗರಿ ಬಸ್‌ಗಳಿಂದ NWKRTCಗೆ ಭಾರಿ ಆರ್ಥಿಕ ಸಂಕಷ್ಟ: ನಿರ್ವಹಣೆ ಸಿಗದೆ ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿರುವ ಎಸಿ ಬಸ್‌ಗಳು
Financial Burden
Edited By:

Updated on: Aug 21, 2026 | 1:53 PM

ಹುಬ್ಬಳ್ಳಿ, ಆ.21: ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ವಿದ್ಯಾಕಾಶಿ ಧಾರವಾಡಗಳ ನಡುವೆ ಪ್ರತಿನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ರಾಜ್ಯದ ನಾನಾ ಭಾಗಗಳಿಂದ ಅವಳಿ ನಗರಗಳಿಗೆ ಬರುವ ಜನರ ಸಂಖ್ಯೆ ಹೆಚ್ಚಾದಂತೆ, ಸಂಚಾರ ದಟ್ಟಣೆಯೂ ಅಧಿಕವಾಗಿತ್ತು. ಈ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ, 2018ರಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಬಿಆರ್‌ಟಿಎಸ್ (ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್) ಯೋಜನೆಯನ್ನು ಜಾರಿಗೆ ತರಲಾಯಿತು. ದಕ್ಷಿಣ ಭಾರತದಲ್ಲೇ ಮೊದಲ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ಈ ಯೋಜನೆಯಡಿ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ 22.5 ಕಿಲೋಮೀಟರ್ ದೂರದ ಪ್ರತ್ಯೇಕ ಮಾರ್ಗವನ್ನು ನಿರ್ಮಿಸಲಾಗಿದ್ದು, ಚಿಗರಿ ಹೆಸರಿನ ನೂರು ಎಸಿ ಬಸ್‌ಗಳು ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುತ್ತವೆ. ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಈ ಯೋಜನೆ, ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಚಿಗರಿ ಬಸ್‌ಗಳ ಕಾರ್ಯಾಚರಣೆಯಿಂದಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿನಿತ್ಯ 2.5 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಈ ಬಸ್‌ಗಳ ಓಡಾಟದಿಂದ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವುದು ನಷ್ಟಕ್ಕೆ ಪ್ರಮುಖ ಕಾರಣ. ಸಂಸ್ಥೆಯ ಲೆಕ್ಕಾಚಾರದ ಪ್ರಕಾರ, ಪ್ರತಿ ಕಿಲೋಮೀಟರ್‌ಗೆ 80 ರೂಪಾಯಿ ಖರ್ಚಾದರೆ, ಕೇವಲ 50 ರೂಪಾಯಿ ಆದಾಯ ಬರುತ್ತಿದೆ. ಈ ಚಿಗರಿ ಬಸ್‌ಗಳು ಎಸಿ ವ್ಯವಸ್ಥೆ ಹೊಂದಿದ್ದು, ಇವುಗಳ ನಿರ್ವಹಣಾ ವೆಚ್ಚ ಮತ್ತು ಬಿಡಿಭಾಗಗಳ ಬೆಲೆ ಅತಿ ದುಬಾರಿಯಾಗಿದೆ. ಇದು ಸಂಸ್ಥೆಯ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಆರ್‌ಟಿಎಸ್ ನಿಗಮವು ರಸ್ತೆ ರಿಪೇರಿ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಆದರೆ, ಬಸ್‌ಗಳ ಕಾರ್ಯಾಚರಣೆ, ಚಾಲಕರು ಮತ್ತು ನಿರ್ವಾಹಕರ ನೇಮಕ, ಹಾಗೂ ಬಸ್‌ಗಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೇಲಿದೆ. 2018 ರಿಂದ ಇಲ್ಲಿಯವರೆಗೆ ಬಿಆರ್‌ಟಿಎಸ್‌ನಿಂದ ಸಂಸ್ಥೆಗೆ ಬರಬೇಕಾದ ಸರಿಸುಮಾರು 150 ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಕಿಯಿದೆ. ಈ ಹಣವನ್ನು ಬಿಡುಗಡೆ ಮಾಡುವಂತೆ ಸಂಸ್ಥೆಯ ಅಧಿಕಾರಿಗಳು ನಗರ ಅಭಿವೃದ್ಧಿ ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದರೂ, ಇದುವರೆಗೂ ಯಾವುದೇ ಮರುಪಾವತಿ ಆಗಿಲ್ಲ.

ಇಲ್ಲಿದೆ ನೋಡಿ ವಿಡಿಯೋ:

BRTS Chigari bus: ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಚಿಗರಿ ಬಸ್ ಅಸಲಿ ಕಥೆ ಏನು ಗೊತ್ತಾ? |#TV9D

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿದೆ. ಆದಾಯ ಮತ್ತು ಖರ್ಚಿನ ನಡುವೆ ದೊಡ್ಡ ವ್ಯತ್ಯಾಸವಿದ್ದು, ಶಕ್ತಿ ಯೋಜನೆಯಿಂದಲೂ ಸರ್ಕಾರದಿಂದ ಸಮರ್ಪಕವಾಗಿ ಹಣ ಬಾರದೆ ಇರುವುದು ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಇದರ ಜೊತೆಗೆ, ಬಿಆರ್‌ಟಿಎಸ್‌ನಿಂದಲೂ ನಷ್ಟವಾಗುತ್ತಿರುವುದು ಸಂಸ್ಥೆಯ ನಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಹಣಕಾಸಿನ ಕೊರತೆಯಿಂದಾಗಿ ಚಿಗರಿ ಬಸ್‌ಗಳ ನಿರ್ವಹಣೆ ಕಷ್ಟಕರವಾಗಿದೆ. ಅನೇಕ ಕಡೆ ಚಿಗರಿ ಬಸ್‌ಗಳು ಕೆಟ್ಟು ನಿಲ್ಲುವುದು, ಎಸಿ ವ್ಯವಸ್ಥೆ ಹಾಳಾಗುವಂತಹ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ.

ಇದನ್ನೂ ಓದಿ: ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು: ಕಾಫಿ ಬೆಳೆ ಹಾನಿ ಭೀತಿ

ನಿರ್ವಹಣೆಯ ಕೊರತೆಯಿಂದಾಗಿ ಸಮರ್ಪಕ ಸೇವೆ ಸಿಗದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ದಕ್ಷಿಣ ಭಾರತದ ಮೊದಲ ಯೋಜನೆ” ಎಂದು ಪ್ರಚಾರ ಪಡೆದ ಬಿಆರ್‌ಟಿಎಸ್‌ನಲ್ಲಿ ಸಾಕಷ್ಟು ನ್ಯೂನತೆಗಳು ಕಾಣಿಸುತ್ತಿವೆ. ಯೋಜನೆ ಜಾರಿಯಲ್ಲಿದ್ದರೂ, ಜನರಿಗೆ ನಿರೀಕ್ಷಿತ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ವಾಯುವ್ಯ ಸಾರಿಗೆ ಸಂಸ್ಥೆಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬಿಆರ್‌ಟಿಎಸ್ ಚಿಗರಿ ಬಸ್ ಯೋಜನೆ ಇದೀಗ ಅವಳಿ ನಗರಗಳ ಜನರಿಗೆ ಮತ್ತು ಸಂಸ್ಥೆಗೆ ದುಬಾರಿಯಾಗಿ, ಭಾರವಾಗಿ ಪರಿಣಮಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us