ಏನೇ ಆಗಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೇವೆ: ಶಾಸಕ ಅರವಿಂದ್ ಬೆಲ್ಲದ್

| Updated By: ಆಯೇಷಾ ಬಾನು

Updated on: Sep 13, 2023 | 2:06 PM

ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಸುದ್ದಿಗೋಷ್ಠಿ ನಡೆಸಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕಳೆದ ಬಾರಿ ಸುಪ್ರೀಂ ಕೋರ್ಟ್ ನಮಗೆ ಅವಕಾಶ ನೀಡಿತ್ತು. ಈ ಬಾರಿಯೂ ನಾವು ಈದ್ಗಾ ಮೈದಾನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಏನೇ ಆಗಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೇವೆ: ಶಾಸಕ ಅರವಿಂದ್ ಬೆಲ್ಲದ್
ಅರವಿಂದ್ ಬೆಲ್ಲದ್
Follow us on

ಹುಬ್ಬಳ್ಳಿ, ಸೆ.13: ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ(Ganesh Chaturthi). ನಾಡಿನಲ್ಲೆಡೆ ಭರ್ಜರಿ ಗಣೇಶೋತ್ಸವಕ್ಕೆ ಸಿದ್ದತೆಗಳು ಆರಂಭವಾಗಿವೆ. ವಿಘ್ನ ನಿವಾರರಕನ್ನ ಬರ ಮಾಡಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ(Hubli Idgah Maidan) ಗಣೇಶ ಪ್ರತಿಷ್ಠಾಪನೆ ವಿಚಾರ ಗದ್ದಲ-ಗೊಂದಲ ಸೃಷ್ಟಿಸಿದೆ. ಸದ್ಯ ಈ ಬಗ್ಗೆ ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್(Arvind Bellad) ಅವರು ಸುದ್ದಿಗೋಷ್ಠಿ ನಡೆಸಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕಳೆದ ಬಾರಿ ಸುಪ್ರೀಂ ಕೋರ್ಟ್ ನಮಗೆ ಅವಕಾಶ ನೀಡಿತ್ತು. ಈ ಬಾರಿಯೂ ನಾವು ಈದ್ಗಾ ಮೈದಾನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಗಣೇಶ ಮೂರ್ತಿ ಕೂರಿಸಲು ಕಳೆದ ಬಾರಿ ‘ಸುಪ್ರೀಂ’ ಅವಕಾಶ ನೀಡಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ವಿನಾಕಾರಣ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಅವಕಾಶ ಕೊಡ್ತಿಲ್ಲ‌. ಸಿದ್ದರಾಮಯ್ಯನವರ ಸರ್ಕಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡ್ತಿಲ್ಲ. ಸಿದ್ದರಾಮಯ್ಯನವರು ಜಗತ್ತಿಗೆ ಬೇಡವಾದ ಟಿಪ್ಪು ಜಯಂತಿ ಮಾಡಿದ್ದಾರೆ. ಮುಸ್ಲಿಮರ ಜೊತೆ ಸೇರಿ ನಮಾಜ್ ಕೂಡ ಮಾಡಿದ್ದಾರೆ. ಆದರೆ ನಾವು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮನವಿ ಮಾಡಿದ್ರೆ ಅವಕಾಶ ಕೊಡುತ್ತಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ; ಕೋರ್ಟ್​ ಮೆಟ್ಟಿಲೇರಲು ವಿಪಕ್ಷ ನಾಯಕಿ ಸಿದ್ಧತೆ, ಕಾರಣ ಇಲ್ಲಿದೆ

ನಾವು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು 1 ತಿಂಗಳ ಹಿಂದೆಯೇ ಸರ್ಕಾರಕ್ಕೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈದ್ಗಾ ಮೈದಾನ ಪಾಲಿಕೆ ಜಾಗ, ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಬರಲ್ಲ. ಅನುಮತಿ ಕೊಡಲಿ ಬಿಡಲಿ, ನಾವು ಗಣೇಶ ಪ್ರತಿಷ್ಠಾಪನೆ ಮಾಡ್ತೀವಿ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟು ನಾವು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವುದು ಕೂಡ ಸತ್ಯ. ಗಣಪತಿ ಪ್ರಿಯರ ಪರವಾಗಿ ನಾನು ಮಾತಾಡ್ತೀದಿನಿ. ಜನರ ಭಾವನೆ ನಾನು ಸರ್ಕಾರಕ್ಕೆ ಮುಟ್ಟಿಸ್ತೀನಿ ಎಂದರು.

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬಾರದು

ಇನ್ನು ಮತ್ತೊಂದೆಡೆ ವಿವಿಧ ದಲಿತ ಸಂಘಸಂಸ್ಥೆಗಳ ಮಹಾಮಂಡಳ ಸುದ್ದಿಗೋಷ್ಠಿ ನಡೆಸಿದ್ದು ಸುದ್ದಿಗೊಷ್ಠಿಯಲ್ಲಿ ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ ಅವರು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದ್ದಾರೆ. ಕಳೆದ ಸರ್ಕಾರದ ಅವಧಿಯಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗಿತ್ತು. ಅಂತಹ ಸಂಘರ್ಷದ, ಆತಂಕದ ವಾತಾವರಣವನ್ನ ಈ ಸರ್ಕಾರ ನಿರ್ಮಿಸಬಾರದು. ಈ ಸರ್ಕಾರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬಾರದು. ಯಾವುದೇ ಧರ್ಮದವರು ಇನ್ನೊಂದು ಧರ್ಮಕ್ಕೆ ಅಪಮಾನ ಮಾಡುವ ನಿಟ್ಟಿನಲ್ಲಿ ಧರ್ಮಕ್ಕೆ ವಿರೋಧ ಆಗುವ ಆಚರಣೆಗಳಿಗೆ ಸರ್ಕಾರ ಅವಕಾಶ ಕೊಡಬಾರದು. ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡದಂತೆ ಸ್ಥಳೀಯ ಸಂಸ್ಥೆಗಳಿಗೆ, ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರಕ್ಕೆ ನಾವು ಇವತ್ತು ಆಗ್ರಹ ಮಾಡ್ತಾ ಇದ್ದೇವೆ. ಕೆಲವು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಮನವಿ ಮಾಡಿವೆ. ಅಂತಹ ಸಂಘಟನೆಗಳಿಗೂ ನಾವು ಮನವಿ ಮಾಡುತ್ತೇವೆ. ಸಂಘರ್ಷ ಮೂಡುವಂತ ಆಚರಣೆಗಳಿಗೆ ತಾವು ಮುಂದಾಗಬಾರದೆಂದು ಮನವಿ ಮಾಡುತ್ತೆವೆ ಎಂದರು.

ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನೂ ಅನೇಕ ಕಡೆ ಗಣೇಶ ಪ್ರತಿಷ್ಠಾಪನೆಗೆ ಸ್ಥಳ ಇವೆ. ಅಂತಹ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ, ಅದರ ಖರ್ಚು ವೆಚ್ಚವನ್ನ ನಾವೇ ನೀಡುತ್ತೇವೆ. ಬರುವ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಈದ್ಗಾ ಮೈದಾನದ ಮೇಲೆ ರಾಜಕಾರಣ ಮಾಡಬೇಡಿ. ಸಾರ್ವಜನಿಕರು, ನೈಜ ಹಿಂದುಗಳು ಇಂತಹ ವಿಚಾರಕ್ಕೆ ಬೆಂಬಲ ನೀಡಬಾರದು. ಸರ್ಕಾರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:03 pm, Wed, 13 September 23