ಹುಬ್ಬಳ್ಳಿ ಗಲಭೆ: ಪೊಲೀಸ್ ವಶಕ್ಕೆ 40 ಮಂದಿ, ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 17, 2022 | 11:02 AM

ಅವಳಿ ನಗರಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ಹುಬ್ಬಳ್ಳಿ ಗಲಭೆ: ಪೊಲೀಸ್ ವಶಕ್ಕೆ 40 ಮಂದಿ, ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಣೆ
ಪೋಸ್ಟ್ ಹಂಚಿಕೊಂಡಿದ್ದ ಆರೋಪಿ ಅಭಿಷೇಕ್ ಹಿರೇಮಠ ಮತ್ತು ಕಲ್ಲು ತೂರಾಟದ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Follow us on

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸ್ಯಾಪ್ ಸ್ಟೇಟಸ್​ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕಲ್ಲುತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್​ ಲಾಭೂರಾಮ್​ ಹೇಳಿದರು. ಸೂಕ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಗಲಾಟೆಯಲ್ಲಿ 12 ಪೊಲೀಸ್​ ಸಿಬ್ಬಂದಿಗೆ ಗಾಯಗಳಾಗಿವೆ. ಪ್ರಕರಣ ಸಂಬಂಧ ಕೆಲ ಆರೋಪಿಗಳನ್ನೂ ಬಂಧಿಸಲಾಗಿದೆ. ಪೊಲೀಸರು ಎಷ್ಟು ಮನವಿ ಮಾಡಿದರೂ ಕಲ್ಲುತೂರಾಟ ಮುಂದುವರಿಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಎಚ್ಚರಿಸಿದರು.

ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ವಶದಲ್ಲಿರುವ ಯುವಕರ ಸಂಬಂಧಿಕರು ಪೊಲೀಸ್ ಠಾಣೆಗೆ ಬಂದು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ. ‘ನಮ್ಮ ಮನೆಯವರನ್ನ ಸುಖಾಸುಮ್ಮನೇ ಠಾಣೆಗೆ ಕರೆತಂದಿದ್ದಾರೆ’ ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಅಘೋಷಿತ ಬಂದ್​ನಂಥ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹಳೇ ಹುಬ್ಬಳ್ಳಿ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ಗಲಭೆ ಕಂಡು ಹೆದರಿರುವ ಜನರು ಅಂಗಡಿ ಮುಂಗಟ್ಟು ತೆಗೆಯುತ್ತಿಲ್ಲ.

ಈ ನಡುವೆ ಇಡೀ ಘಟನೆ ಪೂರ್ವನಿಯೋಜಿತ ಎನ್ನುವ ಅಭಿಪ್ರಾಯವನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಕಲ್ಲುತೂರಾಟದಲ್ಲಿ ತೊಡಗಿದ್ದ ಪುಂಡರಿಗೆ ಕಲ್ಲು ಸಿಕ್ಕಿದ್ದಾದರೂ ಎಲ್ಲಿಂದ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಏಕಾಏಕಿ ಈ ಪ್ರಮಾಣದ ಕಲ್ಲು ಸಿಗಲು ಸಾಧ್ಯವಿಲ್ಲ, ಗಲಭೆ ಪೂರ್ವ ನಿಯೋಜಿತ ಇರಬಹುದು ಎಂದು ಪೊಲೀಸರು ಅನುಮಾನಿಡಿದ್ದಾರೆ. ಮೂರು ದಶಕಗಳ ಬಳಿಕ ಹುಬ್ಬಳ್ಳಿಯಲ್ಲಿ ಕೋಮುದ್ವೇಷಕ್ಕೆ ಇಂಬುಕೊಡುವ ಘಟನೆ ನಡೆದಿದ್ದು, ಭಾವೈಕ್ಯತೆಗೆ ಬೆಂಕಿ ಹಚ್ಚಲು ಹೊರಟಿರುವವರ ಬಂಧನಕ್ಕೆ ಒತ್ತಡ ಹೆಚ್ಚಾಗಿದೆ. ನಗರದ ದಡ್ಡಿ ಓಣಿ, ಕೃಷ್ಣಾಪುರ ಓಣಿಯ ಆತಂಕ ಹೆಚ್ಚಾಗಿದೆ.

ಹೇಗೆ ಹರಡಿತು ಗಲಭೆ?
ಯುವಕನೊಬ್ಬ ಹಂಚಿಕೊಂಡಿದ್ದ ಆಕ್ಷೇಪಾರ್ಹ ಪೋಸ್ಟ್​ ನೋಡಿದ ಕೆಲವರು ತಮ್ಮ ಸಮುದಾಯದ ಗ್ರೂಪ್​ಗಳಿಗೆ ಹಂಚಿಕೊಂಡಿದ್ದರು. ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಯಿತು. ಕೆರಳಿದ ಜನರು ಠಾಣೆಯೆದುರು ಜಮಾಯಿಸಿ, ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಯುವಕನನ್ನು ಅಷ್ಟರಲ್ಲಿ ಠಾಣೆಗೆ ಕರೆದುಕೊಂಡು ಬಂದಿದ್ದರು. ಆದರೆ ಯುವಕರ ಆಕ್ರೋಶ ಮಾತ್ರ ತಣ್ಣಗಾಗಿರಲಿಲ್ಲ. ಏಕಾಏಕಿ ಗಲಾಟೆ ಆರಂಭವಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಧರ್ಮದ ಕಾರಣಕ್ಕೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿತ್ತಾದರೂ, ಹುಬ್ಬಳ್ಳಿ ಬಹುತೇಕ ಶಾಂತಿಯುತವಾಗಿಯೇ ಇತ್ತು. ಎರಡೂ ಸಮುದಾಯಗಳ ಜನರು ಶಾಂತಿ ಕಾಪಾಡಿದ್ದರು. ಆದರೆ ಒಂದೇ ಒಂದು ಪೋಸ್ಟ್​ನಿಂದಾಗಿ ಕಿಡಗೇಡಿಗಳ ಅಟ್ಟಹಾಸ‌ ಹೊರಗೆ ಬಂತು. ಕೆಲವರು ಪೊಲೀಸರು ಮನವಿಗೂ ಜಗ್ಗದೆ ಕಲ್ಲುತೂರಾಟ ನಡೆಸಿದರು. ಪೊಲೀಸರ ಜೀಪ್​ಗಳನ್ನೂ ಜಖಂಗೊಳಿಸಿದರು. ಕಲ್ಲುತೂರಾಟದಲ್ಲಿ ಪಾಲ್ಗೊಂಡವರನ್ನು ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸುವ ಪ್ರಕ್ರಿಯೆ ಶುರು ಮಾಡಿದರು.

ಇದನ್ನೂ ಓದಿ: ವಿವಾದಿತ ಪೋಸ್ಟ್​ನಿಂದ ಹಳೇ ಹುಬ್ಬಳ್ಳಿ ಉದ್ವಿಗ್ನ: 30 ಜನರ ಬಂಧನ, ನಿಷೇಧಾಜ್ಞೆ ಜಾರಿ

ಇದನ್ನೂ ಓದಿ: ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ: ಹೆಚ್​ಡಿ ಕುಮಾರಸ್ವಾಮಿ

Published On - 10:59 am, Sun, 17 April 22