ವಿವಾದಿತ ಪೋಸ್ಟ್​ನಿಂದ ಹಳೇ ಹುಬ್ಬಳ್ಳಿ ಉದ್ವಿಗ್ನ: 30 ಜನರ ಬಂಧನ, ನಿಷೇಧಾಜ್ಞೆ ಜಾರಿ

ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್‌ ಕಂಡುಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. 30ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿವಾದಿತ ಪೋಸ್ಟ್​ನಿಂದ ಹಳೇ ಹುಬ್ಬಳ್ಳಿ ಉದ್ವಿಗ್ನ: 30 ಜನರ ಬಂಧನ, ನಿಷೇಧಾಜ್ಞೆ ಜಾರಿ
ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ದೃಶ್ಯಗಳು
Edited By:

Updated on: Apr 17, 2022 | 8:39 AM

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್‌ ಕಂಡುಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ. ಕಿಡಿಗೇಡಿಗಳು ಕಲ್ಲು ತೂರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ದೃಶ್ಯ ಆಧರಿಸಿ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ಬಿಗಿ ಬಂದೋಬಸ್ತ್ ಹಾಕಲಾಗಿದೆ. ಗಲಭೆಯಿಂದ ರಸ್ತೆಯ ಮೇಲೆ ಬಿದ್ದಿದ್ದ ಗಾಜಿನ ಚೂರುಗಳನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸಿದರು. ಹುಬ್ಬಳ್ಳಿ-ಧಾರವಾಡದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಠಾಣೆಯಲ್ಲಿಯೇ ಉಪಸ್ಥಿತರಿದ್ದಾರೆ. ನೂರಾರು ಜನರು ಠಾಣೆಯ ಎದುರು ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡುಹಾರಿಸಿದ್ದರು.

ಸದ್ಯದ ಮಟ್ಟಿಗೆ ಹುಬ್ಬಳ್ಳಿ ನಗರ ಬೂದಿಮುಚ್ಚಿದ ಕೆಂಡದಂತಿದೆ. ಹಿಂಸಾಚಾರದಲ್ಲಿ ಇನ್​ಸ್ಪೆಕ್ಟರ್ ಸೇರಿದಂತೆ ಏಳೆಂಟು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಕಿಡಿಗೇಡಿಗಳು ಪೊಲೀಸರನ್ನೇ ಗುರಿಯಾಗಿಸಿ ದಾಳಿ ಮಾಡಿದ್ದರು. ಈ ವೇಳೆ 10ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದವು. ಫೋಟೊವೊಂದನ್ನು ಎಡಿಟ್ ಮಾಡಿ ಧಾರ್ಮಿಕ ಕೇಂದ್ರಕ್ಕೆ ಅವಮಾನ ಉಂಟು ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಗಲಭೆಗೆ ಕಾರಣವಾಗಿತ್ತು.

ಹುಬ್ಬಳ್ಳಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಗೊಂಡಿರುವ ಹಿನ್ನೆಲೆಯಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಲಾಬೂರಾಮ್​ ಆದೇಶ ಹೊರಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಏನಿದು ವಿವಾದ?
ಮೆಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಮಾದರಿಯ ಚಿತ್ರವೊಂದನ್ನು ‘ತಲೆ ಕೆಟ್ಟರೆ ಅಲ್ಲೂ ಕೇಸರಿ ಧ್ವಜ ಹಾರಿಸುತ್ತೇವೆ’ ಎಂದು ವ್ಯಕ್ತಿಯೊಬ್ಬ ಹಂಚಿಕೊಂಡಿದ್ದ. ಇದನ್ನು ಖಂಡಿಸಿ ಹಳೇ ಹುಬ್ಬಳ್ಳಿ ಠಾಣೆ ಬಳಿ ಮುಸ್ಲಿಂ ಸಮುದಾಯದವರು ಜಮಾಯಿಸಿ, ಬಸ್​ಗಳ ಮೇಲೆ ಕಲ್ಲುತೂರಿದರು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು. ಈ ವೇಳೆ ಪೊಲೀಸರ ವಾಹನ ಜಖಂಗೊಳಿಸಿದ ಕಿಡಿಗೇಡಿಗಳ ಗುಂಪು, ಕಲ್ಲುತೂರಾಟ ನಡೆಸಿತು. ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು. ಹುಬ್ಬಳ್ಳಿ ಉಪನಗರ ಠಾಣೆ ಇನ್ಸ್​ಪೆಕ್ಟರ್​ ವಾಹನ ಜಖಂಗೊಂಡಿತು. ಕೆಲವರು ದಿಡ್ಡಿ ಓಣಿಯ ಗುರುವ ಆಸ್ಪತ್ರೆಯೊಳಗೆ ನುಗ್ಗಿ ದಾಂದಲೆ ನಡೆಸಿದರು. ಈ ವೇಳೆ ಪೂರ್ವ ಸಂಚಾರಿ ಠಾಣೆ ಪಿಐ ಕಾಡದೇವರ ಮಠಗೆ ಗಾಯವಾಯಿತು. ಹು-ಧಾ ಪೊಲೀಸ್ ಆಯುಕ್ತರ ಕಾರಿನ ಮೇಲೆಯೂ ಉದ್ರಿಕ್ತ ಗುಂಪು ಕಲ್ಲು ತೂರಿತು. ಪೊಲೀಸ್ ಆಯುಕ್ತರ ಕಾರಿನ ಗಾಜು ಪುಡಿಯಾಯಿತು.

ಭಯದಲ್ಲಿಯೇ ಕಾಲ ಕಳೆದೆವು

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಹುಬ್ಬಳ್ಳಿಯಲ್ಲಿ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ 30ಕ್ಕೂ ಹೆಚ್ಚು ಅರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ ನಂತರದ ಗಲಾಟೆಯಲ್ಲಿ ಹಳೇ ಹುಬ್ಬಳ್ಳಿಯ ದಿಡ್ಡಿ ದಿಡ್ಡಿ ಹನುಮಂತ ದೇಗುಲದ ಮೇಲೂ ಕಲ್ಲು ತೂರಾಟ ನಡೆದಿದ್ದು, ಗಾಜು ಪುಡಿಯಾಗಿದೆ.

ಗಲಭೆಯ ಸಂದರ್ಭ ನೆನಪಿಸಿಕೊಂಡು ನಂದಿನಿ ಮಿಲ್ಕ್ ಪಾರ್ಲರ್ ಮಾಲೀಕ ಶ್ರೀಕಾಂತ್, ನಿನ್ನೆ ರಾತ್ರಿಯಿಡೀ ನಾವು ಭಯದಲ್ಲಿಯೇ ಕಾಲ ಕಳೆದಿದ್ದೇವೆ. ಹಳೇ ಹುಬ್ಬಳ್ಳಿಯಲ್ಲಿ ಹಿಂದೂ-ಮುಸ್ಲಿಮರು ಬಹಳ ಸೌಹಾರ್ದತೆಯಿಂದ ಇದ್ದೆವು. ಯಾರೋ ಕಿಡಿಗೇಡಿಗಳು ಇಂತಹ ಆತಂಕವನ್ನು ಸೃಷ್ಟಿಸಿದ್ದಾರೆ. ನಿನ್ನೆ ರಾತ್ರಿ ಏಕಾಏಕಿ ಸಾವಿರಾರು ಜನರು ರಸ್ತೆಗಿಳಿದಿದ್ದರು. ಮನೆಗಳು, ಅಂಗಡಿ, ದೇಗುಲದ ಮೇಲೆ ಕಲ್ಲು ತೂರಿದರು ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ಟ್ರಾಫಿಕ್ ಜಾಮ್, ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಹುಬ್ಬಳ್ಳಿಯಲ್ಲಿ ಶೀಘ್ರವೇ ತಲೆ ಎತ್ತಲಿದೆ ಟಿಎಂಸಿ

ಇದನ್ನೂ ಓದಿ: ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ ಕುರಿತು ವಿವಾದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡದಲ್ಲಿ 268 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್

Published On - 7:59 am, Sun, 17 April 22

Web contact

TV9 Kannada

Read More
Follow Us