
ಧಾರವಾಡ, ಜೂನ್ 22: ಇತ್ತೀಚಿನ ವರ್ಷಗಳಲ್ಲಿ ಸರಕಾರದ ಯಾವುದೇ ಯೋಜನೆಗಳನ್ನು ಪಡೆಯಬೇಕೆಂದರೆ ಅಥವಾ ಮಕ್ಕಳನ್ನು ಶಾಲೆಗೆ ದಾಖಲಿಸಲು ಅತೀ ಮುಖ್ಯವಾದದ್ದು ಜಾತಿ ಪ್ರಮಾಣ ಪತ್ರ (SC Caste Certificate). ಸರಕಾರದ ಮೀಸಲಾತಿಯನ್ನು ಪಡೆಯಲು ಈ ಪ್ರಮಾಣಪತ್ರ ಅವಶ್ಯಕ. ಆದರೆ ಧಾರವಾಡದ (dharwad) ಗ್ರಾಮವೊಂದರಲ್ಲಿ ದಲಿತರಿಗೆ ಮಾತ್ರ ಜಾತಿ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಕಾರಣ ಆ ಗ್ರಾಮದಲ್ಲಿರುವ ಮತ್ತೊಂದು ಜಾತಿ ಸಂಘಟನೆಯ ಸೂಚನೆ ಎನ್ನುವ ಅಚ್ಚರಿಯ ಸಂಗತಿ ಬಯಲಿಗೆ ಬಂದಿದೆ. ಇದರಿಂದಾಗಿ ಎಸ್ಸಿ ಜಾತಿ ಪ್ರಮಾಣ ಪತ್ರ ಸಿಗದೇ ಹಲವು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು. ಈ ಗ್ರಾಮದಲ್ಲಿ ಅನೇಕ ಹಿಂದೂ ಭೋವಿ ಸಮಾಜದ ಕುಟುಂಬಗಳಿವೆ. ಹಲವಾರು ವರ್ಷಗಳಿಂದ ಈ ಭೋವಿ ಜನಾಂಗದವರಿಗೆ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಪತ್ತಾರ್ ಏನೇನೋ ಕಾರಣ ನೀಡಿ ಪ್ರಮಾಣ ಪತ್ರ ನೀಡುತ್ತಿಲ್ಲ ಅನ್ನೋದು ಇವರ ಆರೋಪ. ಗ್ರಾಮದ ಸಿದ್ದರಾಮೇಶ್ವರ ವಡ್ಡರ ಕ್ಷೇಮಾಭಿವೃದ್ಧಿ ಸಂಘ ತಮಗೆ ಪತ್ರ ಬರೆದು, ಅದರಲ್ಲಿ ಇವರಿಗೆ ಎಸ್ಸಿ ಪ್ರಮಾಣಪತ್ರ ನೀಡಬೇಡಿ ಎಂದಿದೆ. ಹೀಗಾಗಿ ನಾನು ಎಸ್ಸಿ ಪ್ರಮಾಣಪತ್ರ ನೀಡುತ್ತಿಲ್ಲ ಅಂತಾ ಹಿಂಬರಹ ನೀಡಲಾಗಿದೆ. 1950ರಲ್ಲೇ ಭೋವಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಜಾತಿ ಪ್ರಮಾಣಪತ್ರ ನೀಡಲು ಅನಗತ್ಯವಾಗಿ ನಿರಾಕರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ ಬಾಡಿಗೆ ಹೆಚ್ಚು: ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಈ ಮುಂಚೆ ಗ್ರಾಮದ ಕೆಲವರು ಎಸ್ಸಿ ಪ್ರಮಾಣಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಇವರು ಎಸ್ಸಿ ವರ್ಗದಲ್ಲಿ ಬರುವುದಿಲ್ಲ ಅಂತಾ ಗ್ರಾಮದ ವಡ್ಡರ್ ಸಮಾಜದ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪ್ರಕರಣ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಬಂತು. ಈ ವೇಳೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಕೊನೆಗೆ ಇವರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡುವಂತೆ ಆದೇಶಿಸಿದರು. ಆದರೆ ಆ ಆದೇಶವನ್ನೇ ಇದೀಗ ಅಧಿಕಾರಿಗಳು ಉಲ್ಲಂಘಿಸುತ್ತಿದ್ಧಾರೆ.
ಭೋವಿ ಸಮುದಾಯದ ಅರ್ಜಿದಾರರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಿಸಬೇಕು. ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುವ ಹಾಗೂ ಸತಾಯಿಸುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ನಿಯಮಾವಳಿಗಳನ್ನು ಸರಳೀಕರಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆಯ ಸಮಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿದ ವ್ಯಕ್ತಿ ಪುಂಡಲೀಕ ಭೋವಿ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಪತ್ತಾರ್ ಅವರನ್ನು ಕೇಳಿದರೆ, ಈ ಪ್ರಕರಣ ಇದೀಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಅಲ್ಲದೇ ಸಿದ್ದರಾಮೇಶ್ವರ ವಡ್ಡರ ಸಂಘದವರು ವಿವಿಧ ಕೋರ್ಟ್ಗಳಲ್ಲಿ ಈ ವಿಚಾರವಾಗಿ ಕೇಸುಗಳನ್ನು ದಾಖಲಿಸಿದ್ದಾರೆ. ಅವೆಲ್ಲವೂ ವಿಚಾರಣಾ ಹಂತದಲ್ಲಿವೆ. ಹೀಗಾಗಿ ಕಳೆದ ಏಳೆಂಟು ವರ್ಷಗಳಿಂದ ಇವರಿಗೆ ಕಂದಾಯ ಇಲಾಖೆಯಿಂದ ಎಸ್ಸಿ ಪ್ರಮಾಣಪತ್ರವನ್ನು ನೀಡಿಲ್ಲ. ಅಂತಿಮವಾಗಿ ನ್ಯಾಯಾಲಯ ಏನು ಆದೇಶ ನೀಡುತ್ತೋ ಅದನ್ನು ಪಾಲಿಸಲಾಗುವುದು ಅಂತಾ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲಾ ಕೋರ್ಟ್ಗಳಿಗೆ ಬಾಂಬ್ ಬೆದರಿಕೆ ಕರೆ
ಒಟ್ಟಿನಲ್ಲಿ ಇದೀಗ ಈ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಆದಷ್ಟು ಬೇಗನೇ ಧಾರವಾಡ ಉಪವಿಭಾಗಾಧಿಕಾರಿಗಳು ಈ ಪ್ರಕರಣಕ್ಕೆ ಅಂತ್ಯ ಹಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.