ಮೊದಲ ಬಾರಿ ಗೆದ್ದ ಕಾಂಗ್ರೆಸ್ ಶಾಸಕರಿಗೆ ಡಿಕೆ ಶಿವಕುಮಾರ್ ಆಪ್ತರಿಂದ ಡಿನ್ನರ್ ಪಾರ್ಟಿ

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಇತ್ಯಾದಿ ಆಂತರಿಕ ಸಂಘರ್ಷಗಳ ಬಲೆಯಿಂದ ಹೊರಬರುತ್ತಿದೆ ಎನ್ನುವಾಗಲೇ ಕಾಂಗ್ರೆಸ್​​ನಲ್ಲಿ ಮತ್ತೊಂದು ವಿದ್ಯಮಾನ ನಡೆದಿದೆ. ಶಾಸಕರ ಅಸಮಾಧಾನ ತಣಿಸುವ ನೆಪದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಪ್ತರು ಮೊದಲ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ.

ಮೊದಲ ಬಾರಿ ಗೆದ್ದ ಕಾಂಗ್ರೆಸ್ ಶಾಸಕರಿಗೆ ಡಿಕೆ ಶಿವಕುಮಾರ್ ಆಪ್ತರಿಂದ ಡಿನ್ನರ್ ಪಾರ್ಟಿ
ಡಿಕೆ ಶಿವಕುಮಾರ್ & ರವಿಕುಮಾರ್ ಗಣಿಗ
Follow us
| Updated By: ಗಣಪತಿ ಶರ್ಮ

Updated on: Jul 17, 2024 | 9:04 AM

ಬೆಂಗಳೂರು, ಜುಲೈ 17: ಕಾಂಗ್ರೆಸ್ ಆಂತರಿಕ ಸಂಘರ್ಷ ತಣ್ಣಗಾಗುತ್ತಿದೆ ಎನ್ನುತ್ತಿರುವಂತೆಯೇ ಮೊದಲ ಬಾರಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು, ಶಾಸಕರ ಮುನಿಸು ತಣಿಸುವುದಕ್ಕೆಂದು ಡಿಸಿಎಂ ಡಿಕೆ ಶಿವಕುಮಾರ್ ಆಪ್ತರು ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಮಂಗಳವಾರ ರಾತ್ರಿ ಮೊದಲ ಬಾರಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ತಡರಾತ್ರಿ ವರೆಗೂ ಡಿನ್ನರ್ ಪಾರ್ಟಿ ನಡೆದಿದೆ.

ಮಂಡ್ಯ ಶಾಸಕ ರವಿಕುಮಾರ್ ಗಣಿಗ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಡಿನ್ನರ್ ಪಾರ್ಟಿ ನೆಪದಲ್ಲಿ ತಡ ರಾತ್ರಿವರೆಗೆ ಚರ್ಚೆ ನಡೆದಿದೆ. ಸರ್ಕಾರದೊಳಗಿನ ಕೆಲ ತೀರ್ಮಾನಗಳಿಂದ ಬೇಸತ್ತಿರುವ ಹೊಸ ಶಾಸಕರು ಡಿನ್ನರ್ ಪಾರ್ಟಿಯಲ್ಲಿಯೂ ಅಸಮಾಧಾನ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಶಾಸಕರ ಅಸಮಾಧಾನಗಳೇನು?

ವರ್ಗಾವಣೆ ವಿಚಾರಗಳಿಂದಲೂ ನಮಗೆ ಲಾಭ ಇಲ್ಲ. ನಮಗೆ ಹೆಚ್ಚಿನ ಅನುದಾನ ಕೂಡ ಸಿಗುತ್ತಿಲ್ಲ. ಹೀಗೆಯೇ ಆದರೆ ಶಾಸಕರಾಗಿ ನಮಗೆ ಏನು ಪ್ರಯೋಜನ ಎಂದು ಶಾಸಕರು ಅಸಮಾಧಾನ ತೋಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಪಿಡಿಒ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ. ಇದರ ಜೊತೆ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಕೂಡ ಕೌನ್ಸಿಲಿಂಗ್ ಮೂಲಕ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಇನ್ಸ್‌ಪೆಕ್ಟರ್ ವರ್ಗಾವಣೆ ಎರಡು ವರ್ಷಕ್ಕೊಮ್ಮೆ ಮಾಡಲಾಗಿದೆ. ಹೀಗಾಗಿ ವರ್ಗಾವಣೆ ವಿಚಾರದಿಂದಲೂ‌ ನಮ್ಮನ್ನು ದೂರ ಇಡಲಾಗಿದೆ ಎಂದು ಶಾಸಕರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ವಿಧಾನಸಭೆ ಕಲಾಪ: ಎರಡನೇ ದಿನವೂ ವಾಲ್ಮೀಕಿ ಹಗರಣದ್ದೇ ಸದ್ದು, ಬಿಜೆಪಿ – ಕಾಂಗ್ರೆಸ್ ವಾಕ್ಸಮರ

ಇತ್ತ ಸರ್ಕಾರದಿಂದ ಸಮರ್ಪಕವಾದ ಅನುದಾನ ಕೂಡ ಸಿಗುತ್ತಾ ಇಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರು ನಾವು. ನಮ್ಮ ಕಷ್ಟ ಕೇಳುವವರು ಯಾರು ಎಂದು ಅವರು ಅಲವತ್ತುಕೊಂಡಿದ್ದಾರೆ.

ಗುರುವಾರ ಕಾಂಗ್ರೆಸ್​ ಸಿಎಲ್‌ಪಿ‌ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ಡಿನ್ನರ್ ಪಾರ್ಟಿ ನೆಪದಲ್ಲಿ ಕಾಂಗ್ರೆಸ್ ನೂತನ ಶಾಸಕರು ಒಗ್ಗೂಡಿದ್ದಾರೆ. ಹೊಸ ಶಾಸಕರು ಸಿಎಲ್‌ಪಿ ಸಭೆಯಲ್ಲಿ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ