ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿ ಮೇಲೆ ಇಡಿ ದಾಳಿ; ನನಗೂ ಕಟ್ಟಡದ ಮಾಲೀಕರಿಗೂ ಯಾವುದೇ ಸಂಬಂಧವಿಲ್ಲ ಎಂದ ಕಿಮ್ಮನೆ ರತ್ನಾಕರ್​

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಕಾಂಗ್ರೆಸ್ ಕಚೇರಿ ಮೇಲೆ ಇಡಿ ದಾಳಿ ಮಾಡಿದೆ. ಶಂಕಿತ ಉಗ್ರ ಶಾರಿಕ್​ ಅಜ್ಜನ ಒಡೆತನದಲ್ಲಿರುವ ಕಟ್ಟಡ ಇದಾಗಿದ್ದು, ಶಂಕಿತ ಉಗ್ರ ಶಾರಿಕ್ ಹಣದ ವ್ಯವಹಾರದ ಬಗ್ಗೆ ಇಡಿ ತನಿಖೆ ನಡೆಸಿದೆ.

ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿ ಮೇಲೆ ಇಡಿ ದಾಳಿ; ನನಗೂ ಕಟ್ಟಡದ ಮಾಲೀಕರಿಗೂ ಯಾವುದೇ ಸಂಬಂಧವಿಲ್ಲ ಎಂದ ಕಿಮ್ಮನೆ ರತ್ನಾಕರ್​
ಮಾಜಿ ಸಚಿವ ಕಿಮ್ಮನೆ ರತ್ನಾಕರ್
Edited By:

Updated on: Jan 11, 2023 | 2:02 PM

ಶಿವಮೊಗ್ಗ: ಶಂಕಿತ ಉಗ್ರ ಶಾರಿಕ್ ಹಣದ ವ್ಯವಹಾರದ ಕುರಿತು ತೀರ್ಥಹಳ್ಳಿಯಲ್ಲಿರುವ ಶಾರಿಕ್​ ಅಜ್ಜನ ಒಡೆತನದ ಕಟ್ಟಡದ ದಾಖಲೆಗಳನ್ನು ಪರಿಶೀಲಿಸುವ ಸಲುವಾಗಿ ಅದೇ ಕಟ್ಟದಲ್ಲಿರುವ ಕಾಂಗ್ರೆಸ್ ಕಚೇರಿ ಹಾಗೂ ಕಿಮ್ಮನೆ ರತ್ನಾಕರ್ ಅವರ ಕಚೇರಿಯನ್ನ ಇಂದು(ಜ.11) ಇಡಿ ಪರಿಶೀಲನೆ ನಡೆಸಿದೆ. ಬೆಳಂಬೆಳಗ್ಗೆ 5 ಕಾರುಗಳಲ್ಲಿ 15ಕ್ಕೂ ಹೆಚ್ಚು ಬಂದಿರುವ ಇಡಿ ಅಧಿಕಾರಿಗಳು ತೀರ್ಥಹಳ್ಳಿಯಲ್ಲಿಯ ಸೊಪ್ಪುಗುಡ್ಡೆಯಲ್ಲಿರುವ ಶಂಕಿತ ಉಗ್ರ ಮಾಜ್ ಮುನೀರ್ ಹಾಗೂ ಶಾರಿಕ್ ಮನೆಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಪ್ರತಿ ಮನೆಗೂ ತೆರಳಿ ಮೊಬೈಲ್‌ ಸ್ವಿಚ್ ಆಫ್ ಮಾಡುವಂತೆ ಹೇಳಿದ್ದಲ್ಲದೆ ಯಾರೂ ಫೋಟೋ ತೆಗೆಯದಂತೆ ಸೂಚನೆ ನೀಡಿದ್ದಾರೆ. ಇದೇ‌ ಮೊದಲ ಬಾರಿಗೆ ಹೊರ ಊರಿನಿಂದ ಶಸ್ತ್ರ ಸಜ್ಜಿತ ಪೊಲೀಸರನ್ನು ತಮ್ಮ ಬೆಂಗಾವಲಿಗೆ ಕರೆತಂದಿದ್ದಾರೆ ಇಡಿ ಅಧಿಕಾರಿಗಳು.

ನನ್ನ ಮನೆ ಮತ್ತು ಕಚೇರಿ ಮೇಲೆ ಯಾವುದೇ ರೀತಿಯ ಇಡಿ ದಾಳಿ ನಡೆದಿಲ್ಲ. ನಾನು ಬಾಡಿಗೆಗಿದ್ದ ಕಟ್ಟಡದ ಮೇಲೆ ಇಡಿ ದಾಳಿ ನಡೆದಿದೆ. ಬೆಳಗ್ಗೆ ನಮ್ಮ ಕಚೇರಿಗೆ ಬಂದ ಇಡಿ ಅಧಿಕಾರಿಗಳು ನನ್ನನ್ನು ಕಚೇರಿಗೆ ಕರೆಯಿಸಿದ್ದರು. ಆಗ ನಾನು ಕಚೇರಿ ಬಾಡಿಗೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಹಾಸಿಮ್​ ಎಂಬುವರ ಕಟ್ಟಡವನ್ನು ಹತ್ತು ವರ್ಷಕ್ಕೆ ಲೀಸ್ ಪಡೆದಿದ್ದೇವೆ. ಜೊತೆಗೆ ಒಂದು ತಿಂಗಳಿಗೆ ಒಂದು ಸಾವಿರ ಬಾಡಿಗೆ ನೀಡುತಿದ್ದೇವೆ. ಹತ್ತು ಲಕ್ಷ ರೂಪಾಯಿ ವಾಪಸ್ ಕೊಟ್ಟ ದಿನವೇ ನಾವು ಕಟ್ಟಡ ಖಾಲಿ ಮಾಡುವುದಾಗಿ ಹೇಳಿದ್ದೇವೆ. ಹಾಸಿಮ್ ಮತ್ತು ನಮ್ಮ ನಡುವೆ ಇರುವುದು ಮಾಲೀಕ ಹಾಗೂ ಬಾಡಿಗೆದಾರ ಸಂಬಂಧವಷ್ಟೇ ಎಂದು ತೀರ್ಥಹಳ್ಳಿಯಲ್ಲಿ ಇಡಿ ದಾಳಿ ಕುರಿತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಇದನ್ನೂ ಓದಿ:ಛತ್ತೀಸ್​​​ಗಢದ ಹಲವೆಡೆ ಇಡಿ ದಾಳಿ, ₹6.5 ಕೋಟಿ ಹಣ, ಚಿನ್ನಾಭರಣ ವಶ

ಹಾಸಿಮ್​ಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಮನೆ ಮೇಲೆ ಇಡಿ ದಾಳಿಯಾದರೆ ಹತ್ತು ಸಾವಿರ ರೂಪಾಯಿಯೂ ಸಿಗುವುದಿಲ್ಲ. ಮನೆಯಲ್ಲಿರುವ ಸೋಫಾ ಹಾಗೂ ಫ್ರಿಡ್ಜ್​ಗಳನ್ನೇನಾದರೂ ತೆಗೆದುಕೊಂಡು ಹೋಗಬೇಕಷ್ಟೇ. ಇಲ್ಲವೇ ಇಡಿಯವರೇ ನನಗೇನಾದರೂ ಕೊಟ್ಟು ಹೋಗಬೇಕು. ಹಾಸಿಮ್​ಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೂ ಏನು ಸಂಬಂಧವೋ ಗೊತ್ತಿಲ್ಲ ಅವರನ್ನೇ ಕೇಳಬೇಕು. ತೀರ್ಥಹಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸುವವರೇ ಆರಗ ಜ್ಞಾನೇಂದ್ರ. ಈ ಹಿಂದೆ ನಡೆದ ಕೋಮುಗಲಭೆಯಲ್ಲಿ ಆರಗ ಜ್ಞಾನೇಂದ್ರ ಅವರೇ ಆರೋಪಿಯಾಗಿದ್ದರು. ಈಗಲೂ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನವಿದೆ. ಬಿಜೆಪಿ ಆಡಳಿತದಲ್ಲಿ ಮಾನ ಮರ್ಯಾದೆ ಎಲ್ಲವನ್ನೂ ಕಳೆದುಕೊಂಡಿದೆ. ಹೀಗಾಗಿ ಇದೀಗ ಜಾತಿ ಧರ್ಮದ ವಿಷಯದಲ್ಲಿ ಏನಾದರೂ ಸಿಗುತ್ತದೆಯಾ ಎಂದು ನೋಡುತಿದ್ದಾರೆ ಎಂದು ಕಿಮ್ಮನೆ ರತ್ನಾಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us