SSLC Exams: ಪ್ರವೇಶ ಪತ್ರ ನೀಡಲು ನಿರಾಕರಿಸಿರುವ ಪ್ರಕರಣಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್

| Updated By: ganapathi bhat

Updated on: Jul 14, 2021 | 6:15 PM

ಯಾವುದೇ ಶಾಲೆಯೂ ಶುಲ್ಕ ವಿಷಯಕ್ಕೆ ಸಂಬಂಧಿಸಿ, ಪರೀಕ್ಷೆಗೆ ಮಕ್ಕಳಿಗೆ ಪ್ರವೇಶ ಪತ್ರ ನಿರಾಕರಿಸಬಾರದು. ಅದಕ್ಕಾಗಿ ಪರೀಕ್ಷಾ ಮಂಡಳಿ ಇಂದು ಅಗತ್ಯ ಸುತ್ತೋಲೆ ಹೊರಡಿಸಲಿದೆ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

SSLC Exams: ಪ್ರವೇಶ ಪತ್ರ ನೀಡಲು ನಿರಾಕರಿಸಿರುವ ಪ್ರಕರಣಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್
Follow us on

ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಪ್ರವೇಶ ಪತ್ರ ನೀಡಲು ನಿರಾಕರಿಸಿರುವಂತಹ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ಮಕ್ಕಳಿಗೆ ತೊಂದರೆ ಆಗದಂತೆ ಬಿಇಒಗಳು ಸೂಕ್ತ ಕ್ರಮ ವಹಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು (ಜುಲೈ 14) ಹೇಳಿದ್ದಾರೆ. ಪೂರ್ಣ ಶುಲ್ಕ ಪಾವತಿಸದೇ ಇರುವುದರಿಂದ ಹಾಲ್ ಟಿಕೆಟ್ ನೀಡಿಲ್ಲ ಎಂಬ ವಿಚಾರದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಹಾಲ್ ಟಿಕೆಟ್ ನೀಡದ ಶಾಲೆಗಳ ವಿಚಾರವಾಗಿ ಬಿಇಒಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಯಾವುದೇ ಶಾಲೆಯೂ ಶುಲ್ಕ ವಿಷಯಕ್ಕೆ ಸಂಬಂಧಿಸಿ, ಪರೀಕ್ಷೆಗೆ ಮಕ್ಕಳಿಗೆ ಪ್ರವೇಶ ಪತ್ರ ನಿರಾಕರಿಸಬಾರದು. ಅದಕ್ಕಾಗಿ ಪರೀಕ್ಷಾ ಮಂಡಳಿ ಇಂದು ಅಗತ್ಯ ಸುತ್ತೋಲೆ ಹೊರಡಿಸಲಿದೆ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜುಲೈ 19 ಮತ್ತು 22ರಂದು ನಿಗದಿ ಆಗಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಿದ್ಧತೆಗಳು ಪೂರ್ಣವಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಈಗಾಗಲೇ ಸಿದ್ಧತೆಗಳ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ. ಇಂದು ವಿಧಾನಸೌಧದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳ ಸಿದ್ಧತೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರ ಮಟ್ಟದ ಅಧಿಕಾರಿಗಳ ಜೊತೆ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದ್ದಾರೆ.

ಯಾವುದೇ ಒಂದು ಮಗುವಿಗೂ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಗಳು ನಡೆದಿವೆ. ಡಿಸಿಗಳ ನೇತೃತ್ವದಲ್ಲಿ ಸಿಇಒ, ಎಸ್.ಪಿ, ಡಿಎಚ್ಒ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪರೀಕ್ಷಾ ಸಿದ್ಧತೆ ಮತ್ತು ಎಸ್ಒಪಿ ಪಾಲನೆ ಕುರಿತಂತೆ ನಿರ್ದೇಶನ ನೀಡಲಾಗಿದೆ. ಮಕ್ಕಳಿಗೆ ಪರೀಕ್ಷಾಂಗಣ ಸುರಕ್ಷತೆ ಮತ್ತು ಆತ್ಮವಿಶ್ವಾಸದ ಭಾವಗಳನ್ನು ಮೂಡಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಈಗಾಗಲೇ ಒಎಂಆರ್ ಶೀಟ್ ಕುರಿತು ಹತ್ತಾರು ಬಾರಿ ತಿಳುವಳಿಕೆ ನೀಡಲಾಗಿದೆ. ಪರೀಕ್ಷಾ ಕೊಠಡಿಯಲ್ಲೂ ಪ್ರತಿ ವಿದ್ಯಾರ್ಥಿಗೂ ಕೊಠಡಿ ಮೇಲ್ವಿಚಾರಕರು ಈ ಕುರಿತು ಸೂಕ್ತ ಮಾರ್ಗದರ್ಶನಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

SSLC ವಿದ್ಯಾರ್ಥಿಗಳಿಗೆ ಹಾಲ್​ಟಿಕೆಟ್​ ನೀಡಲು ಸುತ್ತೋಲೆ
ಶಾಲಾ ಶುಲ್ಕ ಪಾವತಿಸದ್ದಕ್ಕೆ ಹಾಲ್​ಟಿಕೆಟ್​ ನೀಡದ ಆರೋಪ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಕೆಲ ಖಾಸಗಿ ಶಾಲೆಗಳ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯರು ಹಾಲ್​ಟಿಕೆಟ್​ ನೀಡಲು ಸೂಚನೆ ನೀಡಲಾಗಿದೆ. ಪ್ರವೇಶ ಪತ್ರವನ್ನು ಮಂಡಳಿಯ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಲಾಗಿದೆ. ಮುಖ್ಯೋಪಾಧ್ಯಾಯರು ಡೌನ್​ಲೋಡ್ ಮಾಡಿಕೊಡಬೇಕು. ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಹಾಲ್​ಟಿಕೆಟ್ ನೀಡಿ ಎಂದು ತಿಳಿಸಿ ಸುತ್ತೋಲೆ ಹೊರಡಿಸಲಾಗಿದೆ.

ಇದನ್ನೂ ಓದಿ: ಶಾಲೆಯಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ, ಇಲ್ಲವಾದಲ್ಲಿ ಕಾಯ್ದೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸಚಿವ ಸುರೇಶ್ ಕುಮಾರ್ ಎಚ್ಚರಿಕೆ

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್ಎಸ್ಎಲ್​ಸಿ ಪರೀಕ್ಷೆ ಮುಖ್ಯ ಎಂದ ಹೈಕೋರ್ಟ್​; ಶಿಕ್ಷಣ ಸಚಿವ ಸುರೇಶ್ ಕುಮಾರ್​ಗೆ ಆನೆ ಬಲ!

Published On - 5:15 pm, Wed, 14 July 21