ಕೊರೊನಾ ಹೆಚ್ಚಳದ ಹಿನ್ನೆಲೆ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿ ದಡದಲ್ಲಿ ಅಸ್ತಿ ವಿಸರ್ಜನೆಗೆ ತಾತ್ಕಾಲಿಕ ನಿಷೇಧ

ಪ್ರತೀ ನಿತ್ಯ ನೂರಕ್ಕೂ ಹೆಚ್ಚು ಜನರು ಬಂದು ಅಸ್ತಿ ವಿಸರ್ಜನೆ ಮಾಡಿ ಹೋಗುತ್ತಿದ್ದರು. ಹೀಗೆ ಬಂದವರಲ್ಲಿ ಹೆಚ್ಚಿನ ಜನರು ಕೊರೊನಾ ಪಾಸಿಟಿವ್ ಬಂದಿರುವವರ ಜೊತೆಯಲ್ಲೇ ಇರುತ್ತಿದ್ದರಿಂದ ಅಸ್ತಿ ವಿಸರ್ಜನೆ ಮಾಡಿಸುವ ಧಾರ್ಮಿಕ ವಿಧಿ ವಿಧಾನಗಳನ್ನ ನೆರವೇರಿಸುವ ಹಲವು ಅರ್ಚಕರಿಗೂ ಕೊರೊನಾ ಪಾಸಿಟಿವ್ ಬಂದಿದೆ.

ಕೊರೊನಾ ಹೆಚ್ಚಳದ ಹಿನ್ನೆಲೆ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿ ದಡದಲ್ಲಿ ಅಸ್ತಿ ವಿಸರ್ಜನೆಗೆ ತಾತ್ಕಾಲಿಕ ನಿಷೇಧ
ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿ

Updated on: Apr 30, 2021 | 2:28 PM

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿಯ ಪಶ್ಚಿಮ ವಾಹಿನಿ ರಾಜ್ಯ ಪ್ರಸಿದ್ಧ ಪುಣ್ಯಸ್ಥಳಗಲ್ಲಿ ಒಂದು. ಹಾಗಾಗಿಯೇ ಅಲ್ಲಿಗೆ ಪ್ರತೀ ನಿತ್ಯ ನೂರಾರು ಜನರು ಬಂದು ಕಳೆದುಕೊಂಡಿರುವ ತಮ್ಮ ತಮ್ಮ ಸಂಬಂಧಿಕರ ಅಸ್ತಿ ವಿಸರ್ಜನೆ ಮಾಡಿ ಹೋಗುತ್ತಾರೆ. ಈ ನಡುವೆ ಕೊರೊನಾ ಎರಡನೇ ಅಲೆಗೆ ಸಿಲುಕಿ ಬೆಂಗಳೂರು, ಮೈಸೂರಿನಲ್ಲಿ ಮೃತಪಟ್ಟವರ ಅಸ್ತಿಯನ್ನೂ ಸಹ ಇದೇ ಸ್ಥಳದಲ್ಲಿ ಗುಂಪು ಗುಂಪಾಗಿ ವಿಸರ್ಜನೆ ಮಾಡಿ ಹೋಗುತ್ತಿದ್ದಾರೆ. ಆದರೆ ಈಗ ಈ ಭಾಗದಲ್ಲೂ ಕೊರೊನಾ ಹೆಚ್ಚಾದ ಹಿನ್ನಲೆಯಲ್ಲಿ ಕಾವೇರಿ ನದಿ ದಡದಲ್ಲಿ ಅಸ್ತಿ ವಿಸರ್ಜನೆ ಮಾಡುವುದನ್ನೇ ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಕಾವೇರಿ ನದಿಯ ಪಶ್ಚಿಮ ವಾಹಿನಿ ಪುಣ್ಯಸ್ಥಳವಾಗಿದ್ದು, ಸತ್ತವರ ಚಿತಾಭಸ್ಮವನ್ನ ಇಲ್ಲಿ ವಿಸರ್ಜನೆ ಮಾಡಿದರೆ ಅವರಿಗೆ ಮುಕ್ತಿ ಸಿಗಲಿದೆ ಎಂಬ ನಂಬಿಕೆ ಮೊದಲಿಂದಲೂ ಇದೆ. ಹೀಗಾಗಿಯೇ ಇಲ್ಲಿಗೆ ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಬರುತ್ತಿದ್ದಾರೆ. ಇಲ್ಲಿ ಕೊರೊನಾದಿಂದಾಗಿ ಮೃತಪಟ್ಟವರ ಅಸ್ತಿಯನ್ನು  ವಿಸರ್ಜಿಸಿ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಈ ಎಲ್ಲಾ ಬೆಳವಣಿಗೆಯ ಬೆನ್ನಲೆ ಶ್ರೀರಂಗಪಟ್ಟಣದಲ್ಲು ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗಲಾರಂಭಿಸಿದ್ದರಿಂದ ಈ ಲಾಕ್​ಡೌನ್ ಅವಧಿ ಮುಗಿವರೆಗೂ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆಯನ್ನ ನಿಷೇಧಿಸಲಾಗಿದೆ ಎಂದು ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪಾ ಹೇಳಿದ್ದಾರೆ.

ಪ್ರತೀ ನಿತ್ಯ ನೂರಕ್ಕೂ ಹೆಚ್ಚು ಜನರು ಬಂದು ಅಸ್ತಿ ವಿಸರ್ಜನೆ ಮಾಡಿ ಹೋಗುತ್ತಿದ್ದರು. ಹೀಗೆ ಬಂದವರಲ್ಲಿ ಹೆಚ್ಚಿನ ಜನರು ಕೊರೊನಾ ಪಾಸಿಟಿವ್ ಬಂದಿರುವವರ ಜೊತೆಯಲ್ಲೇ ಇರುತ್ತಿದ್ದರಿಂದ ಅಸ್ತಿ ವಿಸರ್ಜನೆ ಮಾಡಿಸುವ ಧಾರ್ಮಿಕ ವಿಧಿ ವಿಧಾನಗಳನ್ನ ನೆರವೇರಿಸುವ ಹಲವು ಅರ್ಚಕರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಸರ್ಕಾರ ನಿಗದಿ ಪಡಿಸಿರುವ ಹದಿಮೂರು ದಿನಗಳ ಕಾಲ ಕಾವೇರಿ ನದಿ ದಡದಲ್ಲಿ ಯಾವುದೇ ರೀತಿಯ ಅಸ್ತಿ ವಿಸರ್ಜನೆ ಮಾಡಬಾರದು ಎಂದು ನಿಷೇಧ ವಿಧಿಸಿದ್ದರೂ ಹಲವರು ಬಂದು ಕದ್ದುಮುಚ್ಚಿ ಅಸ್ತಿ ವಿಸರ್ಜನೆ ಮಾಡಿ ಹೋಗುತ್ತಿದ್ದಾರೆ ತಾಲೂಕು ಆಡಳಿತ ಅಂತವರ ಮೇಲೂ ನಿಗಾವಹಿಸಬೇಕೆಂದು ಸ್ಥಳೀಯರಾದ ದೇವರಾಜು ಒತ್ತಾಯ ಮಾಡಿದ್ದಾರೆ.

ಇಷ್ಟು ದಿನ ಪುಣ್ಯ ಸ್ಥಳವಾಗಿದ್ದ ಪಶ್ಚಿಮ ವಾಹಿನಿ ಈಗ ಮನುಷ್ಯನ ಅಸ್ತಿ, ಮೂಳೆಗಳಿಂದಲೇ ತುಂಬಿ ಹೋಗಿದೆ. ತಾತ್ಕಾಲಿಕವಾಗಿಯಾದರೂ ಇಲ್ಲಿ ಅಸ್ತಿ ವಿಸರ್ಜನೆ ಮಾಡುವುದನ್ನ ನಿಷೇಧಿಸಿರುವ ತಾಲೂಕು ಆಡಳಿತ ಇಲ್ಲಿನ ಸ್ವಚ್ಛತೆ ಬಗೆಗೂ ಗಮನ ಹರಿಸಬೇಕು ಎನ್ನುವುದು ಶ್ರೀರಂಗಪಟ್ಟಣ ನಿವಾಸಿಗಳ ಮನವಿಯಾಗಿದೆ.

ಇದನ್ನೂ ಓದಿ:

ಲಾಕ್​ಡೌನ್​ನಲ್ಲಿ ಆನ್​ಲೈನ್​ ವ್ಯವಹಾರ ಸ್ಥಗಿತಗೊಳಿಸಲು ಮೊಬೈಲ್ ಅಂಗಡಿ ಮಾಲೀಕರ ಸಂಘದಿಂದ ಸರ್ಕಾರಕ್ಕೆ ಆಗ್ರಹ

ರಾಜ್ಯ ಕೊರೊನಾ ಮುಕ್ತವಾಗಲಿ ಎಂದು ಬೌದ್ದ ಬಿಕ್ಷುಗಳಿಂದ ಪಿರಿಯಾಪಟ್ಟಣ ಟಿಬೆಟ್​ ಕ್ಯಾಂಪಸ್‌ನಲ್ಲಿ ಸಾಂಪ್ರದಾಯಿಕ ವಿಶೇಷ ಪೂಜೆ