ಲೋಕಸಭೆ ಚುನಾವಣೆ ಮೇಲೆ ಕಣ್ಣು: ಬಜೆಟ್​​ನಲ್ಲಿ ಸಿಎಂ ಮಹತ್ವದ ಘೋಷಣೆ ಸಾಧ್ಯತೆ

Karnataka Budget 2024-25: ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 15ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಜೆಟ್ ಮೇಲೆ ಎಲ್ಲರ ಗಮನ ಕೇಂದ್ರಿತವಾಗಿದೆ. ಸಿದ್ದರಾಮಯ್ಯ ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆಯೂ ಇದ್ದು, ಗ್ಯಾರಂಟಿ ಯೋಜನೆಗಳಿಂದಾಗಿ ಬಜೆಟ್ ಗಾತ್ರವೂ ಹೆಚ್ಚಾಗಲಿದೆ.

ಲೋಕಸಭೆ ಚುನಾವಣೆ ಮೇಲೆ ಕಣ್ಣು: ಬಜೆಟ್​​ನಲ್ಲಿ ಸಿಎಂ ಮಹತ್ವದ ಘೋಷಣೆ ಸಾಧ್ಯತೆ
ಸಿದ್ದರಾಮಯ್ಯ
Edited By:

Updated on: Feb 15, 2024 | 7:17 AM

ಬೆಂಗಳೂರು, ಫೆಬ್ರವರಿ 15: ಬಹುನಿರೀಕ್ಷಿತ 2024-25ನೇ ಸಾಲಿನ ರಾಜ್ಯ ಬಜೆಟ್ (Karnataka Budget) ಶುಕ್ರವಾರ ಮಂಡನೆಯಾಗಲಿದೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯ (Siddaramaiah) 15ನೇ ಬಾರಿಗೆ ಮುಂಗಡ ಪತ್ರ ಮಂಡಿಸಿದಂತಾಗಲಿದೆ. ಇತ್ತೀಚಿಗಷ್ಟೇ ಕೇಂದ್ರದ ಬಜೆಟ್ ಮಂಡನೆಯಾಗಿದ್ದು, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ (Congress) ನಾಯಕರು ಬೆಂಕಿ ಉಗುಳುತ್ತಿದ್ದಾರೆ. ಉಭಯ ಪಕ್ಷಗಳ ನಾಯಕರ ನಡುವೆ ತರಿಗೆ ಯುದ್ಧ ನಡೆಯುತ್ತಿದೆ. ಇದರ ನಡುವೆ ರಾಜ್ಯಸರ್ಕಾರದ ಬಜೆಟ್ ಮಂಡನೆಯಾಗುತ್ತಿದೆ.

ಲೋಕಸಭೆ ಚುನಾವಣೆ ಮೇಲೆ ಗಮನ ಇಟ್ಟುಕೊಂಡು ಶುಕ್ರವಾರದ ರಾಜ್ಯ ಬಜೆಟ್​​​ನಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡುವ ಸಾಧ್ಯೆತೆಯೂ ಇದೆ. ಬಜೆಟ್ ಮಂಡನಗೂ ಮುನ್ನ ಸಿದ್ದರಾಮಯ್ಯ ಅವರು ವಿಶೇಷ ಸಂಪುಟ ಸಭೆ ನಡೆಸಲಿದ್ದಾರೆ.

ಸಿದ್ದರಾಮಯ್ಯ 15ನೇ ಬಜೆಟ್, ಕರ್ನಾಟಕದ ಪಾಲಿಗೆ ದಾಖಲೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ. ಕರ್ನಾಟಕದ ಮಟ್ಟಿಗೆ ಇದೊಂದು ಹೊಸ ದಾಖಲೆಯಾಗಿದೆ. ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ಮಹತ್ವದ ಘೋಷಣೆಗಳು ಹೊರಬೀಳುವ ನಿರೀಕ್ಷೆಗಳಿವೆ.

ಈವರೆಗೂ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ದಾಟಿರಲಿಲ್ಲ. ಆದರೆ, ಈ ಬಾರಿ ಸುಮಾರು 50 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಲಿದೆ. ಇದರೊಂದಿಗೆ ಈ ಬಾರಿ ಬಜೆಟ್​ ಗಾತ್ರ 3.80 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ. ಪಂಚ ಗ್ಯಾರಂಟಿ ಹೊರೆ ಹಾಗೂ ಬರದ ಬರೆ ಸರ್ಕಾರಕ್ಕೆ ಸವಾಲಾಗಿದೆ. ಪ್ರಸಕ್ತ ವರ್ಷದಲ್ಲಿ ರಾಜಸ್ವ ಸಂಗ್ರಹ ನಿಗದಿತ ಗುರಿ ತಲುಪದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸಮಾರು 58,000 ಕೋಟಿ ರೂ. ಅನುದಾನ ಮೀಸಲಿಡುವ ಅನಿವಾರ್ಯತೆ ಇದೆ. ಹೀಗಾಗಿ ಗ್ಯಾರಂಟಿ ವೆಚ್ಚದ ಮಧ್ಯೆ ಅಭಿವೃದ್ಧಿಗೆ ವೇಗ ಕೊಡುವ ಸಮತೋಲಿತ ಬಜೆಟ್ ಮಂಡಿಸಬೇಕಿದೆ. ಆದ್ರೂ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಜನತೆಗೆ ಒಂದಷ್ಟು ಬಂಪರ್ ಕೊಡುವೆ ಕೊಡುವ ನಿರೀಕ್ಷೆ ಹೊಂದಲಾಗಿದೆ. ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯಕರ್ನಾಟಕ ಹೀಗೆ ಪ್ರಾದೇಶಿಕವಾರು ನೀರಾವರಿ ಸೇರಿ ವಿವಿಧ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆಯಿದೆ. ಇನ್ನು ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಮಾಡುವ ಸಾಧ್ಯತೆಯಿದೆ.

ಇಂದು ಬಿಜೆಪಿ ನಿಲುವಳಿ ಸೂಚನೆ ಮಂಡನೆ ಸಾಧ್ಯತೆ

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಇಂದು (ಗುರುವಾರ) ಇಡೀ ದಿನ ಚರ್ಚೆ ಮುಂದುವರಿಯಲಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಬಿಜೆಪಿ ನಿಡುವಳಿ ಸೂಚನೆ ನೀಡಿದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸರ್ಕಾರ ಉತ್ತರ ಕೊಡಲಿದೆ. ಬರಗಾಲ ಮತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ಮೇಲೆ ಮಾಡಿರುವ 40% ಕಮಿಷನ್ ಆರೋಪದ ಬಗ್ಗೆ ಬಿಜೆಪಿ ನಿಲುವಳಿ ನೋಟಿಸ್ ಕೊಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿಯಿಂದ ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನ

ಟ್ವಿಟರ್​ನಲ್ಲಿ ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನ ನಡೆಸಿದ ಸಿಎಂ ಸಿದ್ದರಾಮಯ್ಯ, ಅಭಿಯಾನ ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾವು ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಪರವಾಗಿರುವವರೆಂದು ಸಿಎಂ ಹೇಳಿದ್ದಾರೆ. ಮೋದಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆ ಪ್ರಮಾಣ ಶೇ 22.5ಕ್ಕೆ ಇಳಿಸಿದೆ. ಆದ್ರೆ ಜನಸಾಮಾನ್ಯರ ಮೇಲೆ ತೆರಿಗೆ ಪ್ರಮಾಣ ಹೆಚ್ಚಳ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್​ ಯಾವಾಗ, ಸಮಯ? ಗಾತ್ರ ಎಷ್ಟು? ಎಲ್ಲಿ ಲೈವ್ ವೀಕ್ಷಿಸಬಹುದು? ಇಲ್ಲಿದೆ ವಿವರ

ಒಟ್ಟಾರೆ ಇಂದೂ ಕೂಡ ಎರಡೂ ಸದನದಲ್ಲೂ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಂದುವರಿಯಲಿದೆ. ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಚರ್ಚೆಗೆ ವಿಪಕ್ಷಗಳಿಗೆ ಸಮಯಾವಕಾಶ ಸಿಗುತ್ತಾ ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us