ಬೆಂಗಳೂರು, (ಮಾರ್ಚ್ 18): ಅಕ್ರಮ ಚಿನ್ನ ಸಾಗಾಟದಲ್ಲಿ (Gold Smuggling Case) ಸಿಕ್ಕಿಬಿದ್ದು ನಟಿ ರನ್ಯಾ ರಾವ್ (Ranya Rao) ಜೈಲು ಪಾಲಾಗಿದ್ದು, ಡಿಐಆರ್, ಸಿಬಿಐ ಹಾಗೈ ಇಡಿ ತನಿಖೆ ತೀವ್ರಗೊಳಿಸಿದ್ದು, ಚಿನ್ನದ ಜಾಲ ಬಗೆದಷ್ಟು ಬಯಲಾಗುತ್ತಿದೆ. ಇನ್ನು ಈ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಹಿಂದೆ ಕರ್ನಾಟಕ ಸಚಿವರು ಇದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಇದರ ಮಧ್ಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ರನ್ಯಾ ರಾವ್ ತಂಟೆಗೆ ಕೇಸ್ ಹಾಕಿಸಿಕೊಂಡಿದ್ದಾರೆ. ಹೌದು… ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಬಗ್ಗೆ ಅವಾಚ್ಯ ಪದ ಬಳಕೆ ಆರೋಪದ ಮೇಲೆ ಯತ್ನಾಳ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ
ಯತ್ನಾಳ್ ಅವರು ಅವಾಚ್ಯ ಪದ ಬಳಸಿ ನಟಿಯ ತೇಜೋವಧೆ ಮಾಡಿದ್ದಾರೆ ಎಂದು ರನ್ಯಾ ರಾವ್ ಪರ ಅಕುಲ ಅನುರಾಧ ಎಂಬವರು ಆರೋಪಿಸಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಈಗ ಯತ್ನಾಳ್ ವಿರುದ್ಧ ಬಿಎನ್ಎಸ್ ಸೆಕ್ಷನ್ 79 ಅಡಿಯಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
“ಆಕೆ ದೇಹದಾದ್ಯಂತ ಚಿನ್ನವನ್ನು ಹೊಂದಿದ್ದಳು, ರಂಧ್ರಗಳನ್ನು ಹೊಂದಿರುವಲ್ಲೆಲ್ಲಾ ಅದನ್ನು ಬಚ್ಚಿಟ್ಟಿದ್ದಳು” ಎಂದು ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ರನ್ಯಾ ಪರವಾಗಿ ಅಕುಲ ಅನುರಾಧ ಅವರು ದೂರು ನೀಡಿದ್ದಾರೆ.
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಭಾಗಿಯಾಗಿರುವ ಇಬ್ಬರು ಸಚಿವರು ಯಾರು ಎನ್ನುವುದು ನನಗೆ ಗೊತ್ತು. ಶೀಘ್ರವೇ ವಿಧಾನಸಭೆಯಲ್ಲಿ ಬಹಿರಂಗ ಪಡಿಸುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಈ ಮೂಲಕ ಯತ್ನಾಳ್ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದರು.
ಇನ್ನು ಯತ್ನಾಳ್ ಅವರ ಹೇಳಿಕೆ ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿ ತಾಕತ್ ಇದ್ರೆ ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.