ಇಂಥವರು ಅಪರೂಪ: ಬೀದಿಬದಿ ಕೆಲಸ ಮಾಡುವವರಿಗೂ ಸೀರೆ ಕೊಟ್ಟು ಮಗನ ಮದುವೆಗೆ ಅಹ್ವಾನ

ಮದುವೆಗೆ ಹೊಸ ಸೀರೆ ಉಟ್ಟುಕೊಂಡು ಕುಟುಂಬ ಸಮೇತರಾಗಿ ಬಂದು ವಧು ವರರನ್ನು ಆಶೀರ್ವದಿಸಿ, ಊಟ ಮಾಡಿಕೊಂಡು ಹೋಗುವಂತೆ ಕೈ ಮುಗಿದು ಕೇಳಿಕೊಂಡರು.

ಇಂಥವರು ಅಪರೂಪ: ಬೀದಿಬದಿ ಕೆಲಸ ಮಾಡುವವರಿಗೂ ಸೀರೆ ಕೊಟ್ಟು ಮಗನ ಮದುವೆಗೆ ಅಹ್ವಾನ
ಬೀದಿ ಬದಿ ಕೆಲಸ ಮಾಡುವವರನ್ನು ಗುರುತಿಸಿ ಸೀರೆ ಕೊಟ್ಟು ಮಗನ ಮದುವೆಗೆ ಅಹ್ವಾನ
Edited By:

Updated on: Feb 14, 2021 | 6:38 PM

ಹಾವೇರಿ: ಮನೆಯಲ್ಲಿ ಮದುವೆ ಇದೆ ಎಂದರೆ ಸಾಕು ಕುಟುಂಬದ ಹಿರಿಯರು ಮತ್ತು ದೊಡ್ಡದೊಡ್ಡ ವ್ಯಕ್ತಿಗಳಿಗೆ ಮದುವೆ ಕಾರ್ಡ್ ಕೊಟ್ಟು ಆಹ್ವಾನ ನೀಡುವುದು ಸಾಮಾನ್ಯ. ಆದರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ತಮ್ಮ ಮಗನ ಮದುವೆಗೆ ದೊಡ್ಡದೊಡ್ಡವರ ಜೊತೆಗೆ ಬೀದಿಯಲ್ಲಿ ಕೆಲಸ ಮಾಡುವ ಚಮ್ಮಾರರು ಹಾಗೂ ಕಲ್ಲು ಕೆತ್ತನೆಯ ಮಾಡುವ ಬಡ ಜನರಿಗೆ ಮದುವೆ ಲಗ್ನಪತ್ರಿಕೆ ಜೊತೆಗೆ ಒಂದೊಂದು ಸೀರೆ ನೀಡಿ ಮದುವೆಗೆ ಆಹ್ವಾನ ನೀಡಿದ್ದಾರೆ.

ಹಾವೇರಿ ನಗರದ ನೇತಾಜಿ ನಗರದಲ್ಲಿ ವಾಸವಾಗಿರುವ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ ಎಂಬುವವರು ತಮ್ಮ ಮಗನ ಮದುವೆಗೆ ಸೀರೆ ಮತ್ತು ಮದುವೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಚಮ್ಮಾರರು ಹಾಗೂ ಕಲ್ಲು ಕೆತ್ತನೆಯ ಮಾಡುವ ಬಡ ಜನರಿಗೆ ಅಹ್ವಾನ ನೀಡಿದ್ದಾರೆ. ನಗರದ ಬಸ್ ನಿಲ್ದಾಣದ ಬಳಿ 10ಕ್ಕೂ ಅಧಿಕ ಚಮ್ಮಾರ ಕುಟುಂಬದ ಮಹಿಳೆಯರು ವಾಸವಾಗಿದ್ದಾರೆ. ಅವರಿಗೆ ಪರಮೇಶಪ್ಪ ತಮ್ಮ ಪುತ್ರ ಶ್ರೀಧರನ ಮದುವೆಯ ಆಮಂತ್ರಣ ಪತ್ರಿಕೆ ಜೊತೆಗೆ ಪ್ರತಿ ಮಹಿಳೆಯರಿಗೆ ಒಂದೊಂದು ಸೀರೆ ನೀಡಿ ಮದುವೆಗೆ ಅಹ್ವಾನ ನೀಡಿದರು. ಬಸ್ ನಿಲ್ದಾಣ ಮಾತ್ರವಲ್ಲದೆ ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಬಳಿ ಬೀದಿಯಲ್ಲಿ ಕಲ್ಲು ಕೆತ್ತನೆ ಮಾಡುವ ಕುಟುಂಬದ ಮಹಿಳಾ ಸದಸ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ಹಾಗೂ ಸೀರೆ ನೀಡಿ, ಪುತ್ರ ಶ್ರೀಧರನ ಮದುವೆಗೆ ಬರುವಂತೆ ಆಹ್ವಾನಿಸಿದರು.

ಫೆಬ್ರುವರಿ 14ರಂದು ನಡೆಯುವ ಮದುವೆಗೆ ಹೊಸ ಸೀರೆ ಉಟ್ಟುಕೊಂಡು ಕುಟುಂಬ ಸಮೇತರಾಗಿ ಬಂದು ವಧು ವರರನ್ನು ಆಶೀರ್ವದಿಸಿ, ಊಟ ಮಾಡಿಕೊಂಡು ಹೋಗುವಂತೆ ಕೈ ಮುಗಿದು ಕೇಳಿಕೊಂಡರು. ಪರಮೇಶಪ್ಪ ಗುಣಮಟ್ಟದ ಸೀರೆ ನೀಡಿ ಸೀರೆ ಜೊತೆಗೆ ಆಮಂತ್ರಣ ಪತ್ರಿಕೆ ನೀಡಿದ್ದು, ಮದುವೆಗೆ ಆಹ್ವಾನ ನೀಡುತ್ತಿದ್ದಂತೆ ಚಮ್ಮಾರರು ಹಾಗೂ ಕಲ್ಲು ಕೆತ್ತನೆ ಮಾಡುವ ಕುಟುಂಬದವರ ಮೊಗದಲ್ಲಿ ಸಂತಸದ ನಗೆ ಮೂಡಿತ್ತು. ಪರಮೇಶಪ್ಪ ಅವರ ಮಗನ ಮದುವೆಗೆ ಆಹ್ವಾನ ಸ್ವೀಕರಿಸಿದ ನಂತರ ಚಮ್ಮಾರರು ಹಾಗೂ ಕಲ್ಲು ಕೆತ್ತನೆ ಮಾಡುವವರು ಕೈ ಮುಗಿದು ನಮಸ್ಕರಿಸಿ ಮದುವೆಗೆ ಬರುವುದಾಗಿ ತಿಳಿಸಿದರು.

ಮಗನ ಮದುವೆಗೆ ಆಹ್ವಾನಿಸಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ

ಹಸಿದವರಿಗೆ ಅನ್ನ ನೀಡಬೇಕು ಎಂಬುವುದು ನಮ್ಮ ಉದ್ದೇಶ. ಹಾಗಂತ ಈಡಿ ವ್ಯವಸ್ಥೆಯನ್ನೆ ಬದಲು ಮಾಡುತ್ತೇನೆ ಎಂದು ಹೇಳುವುದು ಅಸಾಧ್ಯ. ನಮ್ಮ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಮಾಡುತ್ತೇನೆ. ಈಗಲೂ ಅದೆಷ್ಟೋ ಜನರು ಹೊಟ್ಟೆ ತುಂಬ ಊಟ, ಮೈತುಂಬ ಬಟ್ಟೆ ಇಲ್ಲದೆ ಇದ್ದಾರೆ. ಅಂತಹವರು ಒಂದು ದಿನವಾದರೂ ಸಂಭ್ರಮದಿಂದ ಹೊಸ ಸೀರೆ ಉಟ್ಟು, ಹೊಟ್ಟೆ ತುಂಬಾ ಊಟ‌ ಮಾಡಿ ಮದುವೆಯ ಸಂಭ್ರಮ ಆಚರಿಸಲಿ ಎಂಬ ಉದ್ದೇಶದಿಂದ ಸೀರೆ ಕೊಟ್ಟು ಮದುವೆಗೆ ಆಮಂತ್ರಿಸಿದ್ದೇನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ ಹೇಳಿದ್ದಾರೆ.

ಸೀರೆಕೊಟ್ಟು ಮದುವೆಗೆ ಆಹ್ವಾನ

ದಿನವಿಡಿ ಚಮ್ಮಾರಿಕೆ ಮಾಡುವುದರಲ್ಲಿಯೇ ಜೀವನ ಸಾಗುತ್ತದೆ. ಕುಟುಂಬದ ತುತ್ತಿನ ಚೀಲ ತುಂಬಿಸಿಕೊಳ್ಳಲು ಚಮ್ಮಾರಿಕೆ ಅನಿವಾರ್ಯವಾಗಿದೆ. ಆದರೆ ನಮ್ಮಂತಹವರನ್ನು ಗುರುತಿಸಿ ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ ಸೀರೆ ನೀಡಿ ಮದುವೆಗೆ ಆಹ್ವಾನಿಸಿದ್ದು ಖುಷಿ ತಂದಿದೆ. ಅವರ ಕುಟುಂಬವನ್ನು ದೇವರು ಚೆನ್ನಾಗಿ ಇಟ್ಟಿರಲಿ ಎಂದು ಚಮ್ಮಾರ ಕುಟುಂಬದ ಮಹಿಳೆ ಗೀತಕ್ಕ ಸಂತಸ ವ್ಯಕ್ತಪಡಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಸೀರೆ ನೀಡುತ್ತಿರುವ ದೃಶ್ಯ

ಇದನ್ನೂ ಓದಿ: Aishwarya Amartya Hegde Marriage | ಪುತ್ರಿ ವಿವಾಹಕ್ಕೆ ಕ್ಷೇತ್ರದ ಮತದಾರರಿಗೆ ಗಿಫ್ಟ್ ನೀಡಿ ಆಶೀರ್ವಾದ ಕೋರಿದ ಡಿ.ಕೆ.ಶಿವಕುಮಾರ್

Published On - 6:37 pm, Sun, 14 February 21