ಪ್ರೀತಿ ಕೊಂದ ಕೊಲೆಗಾರ 6 ತಿಂಗಳ ಬಳಿಕ ಸಿಕ್ಕಿಬಿದ್ದ: ಹಂತಕನ ಹೆಡೆಮುರಿ ಕಟ್ಟಿದ್ದೇ ರೋಚಕ

ಅದೊಂದು ಮಣ್ಣಲ್ಲಿ ಮಣ್ಣಾಗುತ್ತಿದ್ದ ಕೊಲೆ ಪ್ರಕರಣ. ಪೊಲೀಸರ ಜಾಣಾಕ್ಷತನ ತನಿಖೆಯಿಂದ ಆರು ತಿಂಗಳ ನಂತರ ಕೊಲೆ ರಹಸ್ಯ ಬಯಲಾಗಿದೆ. ಒಂದೇ ಒಂದು ಮೆಸೇಜ್ ಇಡೀ ಪ್ರಕರಣ ಟ್ವಿಸ್ಟ್ ನೀಡಿದೆ. ಇದೇ ಮೇಸೆಜ್ ಹಿಡ್ಕೊಂಡು ಹಂತಕನ ಹೆಡೆಮುರಿ ಕಟ್ಟಿದ್ದಾರೆ. ಹೌದು.. ದೃಶ್ಯ ಸಿನಿಮಾ ಮಾದರಿಯಲ್ಲಿ ಸಾಕ್ಷಿ ನಾಶ ಮಾಡುತ್ತಿದ್ದ ಕಿಲಾಡಿ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಈ ನಿಗೂಢ ಕೊಲೆಯ ಹಂತಕನ ಹೆಡೆಮುರಿ ಕಟ್ಟಿದ್ದೇ ರೋಚಕವಾಗಿದೆ.

ಪ್ರೀತಿ ಕೊಂದ ಕೊಲೆಗಾರ 6 ತಿಂಗಳ ಬಳಿಕ ಸಿಕ್ಕಿಬಿದ್ದ: ಹಂತಕನ ಹೆಡೆಮುರಿ ಕಟ್ಟಿದ್ದೇ ರೋಚಕ
Gadag Murder Case
Edited By:

Updated on: Jun 15, 2025 | 4:40 PM

ಗದಗ, (ಜೂನ್ 15): ಮದುವೆಯಾಗು ಎಂದು ಪೀಡಿಸಿದ್ದ ಪ್ರೇಯಿಸಿ (Lover) ಮಧುಶ್ರೀಯನ್ನು ಕೊಲೆ ಮಾಡಿ ಬಳಿಕ ಹಳ್ಳದಲ್ಲಿ ಹೂತ್ತಿದ್ದ ಪ್ರಕರಣವನ್ನು ಗದಗ (Gadag) ಪೊಲೀಸರು ಭೇದಿಸಿದ್ದಾರೆ. ಗದಗ ತಾಲೂಕಿನ ನಾರಾಯಣಪುರ (Narayanapura) ಗ್ರಾಮದ ಸತೀಶ್ ಹಿರೇಮಠ ಅದೇ ಗ್ರಾಮದ ಮಧುಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಹೀಗೆ ಒಂದು ದಿನ ಕುಟುಂಬಸ್ಥರ ಕಣ್ತಪ್ಪಿಸಿ ಇಬ್ಬರು ಹಳ್ಳಿ ಗ್ರಾಮದ ಹೊರಹೊಲದಲ್ಲಿ ಭೇಟಿಯಾಗಿದ್ದು, ಈ ವೇಳೆ ಮಧುಶ್ರೀ ತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಬಳಿಕ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸತೀಶ್, ವೇಲ್​ ನಿಂದ ಮಧುಶ್ರೀ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಪಕ್ಕದ ಹಳ್ಳದಲ್ಲೇ ಹೂತು ಹಾಕಿ ಏನು ಗೊತ್ತಿಲ್ಲದಂತೆ ಇದ್ದ. ಆದ್ರೆ, ಪೊಲೀಸರಿಗೆ ಸಿಕ್ಕ ಆ ಒಂದು ಮೆಸೇಜ್​ ನಿಂದ ಸತೀಶನ ಪ್ರೀತಿ ಕೊಂದ ಕೊಲೆಯ ಕಥೆ ಆಚೆ ಬಂದಿದೆ.

ಮಧುಶ್ರೀ ಅಂಗಡಿ ಗದಗ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿ. ಅದೇ ಗ್ರಾಮದ ಸತೀಶ್ ಹಿರೇಮಠ ಎನ್ನುವಾತನ ಜೊತೆಗೆ ಪ್ರೀತಿಸುತ್ತಿದ್ದಳು. ಐದಾರು ವರ್ಷ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದ್ರೆ ಮಧುಶ್ರೀ ಕುಟುಂಬಸ್ಥರಿಗೆ ಈ ಪ್ರೀತಿ ಪ್ರೇಮದ ವಿಷಯ ಗೊತ್ತಾಗಿದೆ. ಹೀಗಾಗಿ ಗದಗನಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಕೆಲವು ತಿಂಗಳು ಕಾಲ ದೂರ ಇದ್ದ ಈ ಜೋಡಿ ಪುನಃ ಒಂದಾಗಿತ್ತು. ಅದು 2024 ಡಿಸೆಂಬರ್ 16 ರ ರಾತ್ರಿ ಮಧುಶ್ರೀ ಗದಗ ನಗರದ ಅವರ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದಳು. ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿ ಕೊನೆಗೆ 2025 ಜನವರಿ 12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಆಗ ಪೊಲೀಸರು ಸತೀಶ್ ಮೇಲೆ ಅನುಮಾನದಿಂದ ವಿಚಾರಣೆ ಆರಂಭ ಮಾಡಿದ್ದು, ನನಗೆ ಏನು ಗೊತ್ತಿಲ್ಲ ಎಂದು ನಾಟಕ ಮಾಡಿದ್ದ.

ಇದನ್ನೂ ಓದಿ: ‘ಮನೇಲಿ ಯಾರಿಲ್ಲ ಬಾ’: ಪ್ರೇಯಸಿ ಮಾತಿಗೆ ಮರುಳಾಗಿ ಹೋದವ ಹೆಣವಾದ! ಕೊಲೆ ರಹಸ್ಯ ಕೊನೆಗೂ ಭೇದಿಸಿದ ಕಲಬುರಗಿ ಪೊಲೀಸರು

ಕೇಸಿಗೆ ಟ್ವಿಸ್ಟ್​ ಕೊಟ್ಟ ಆ ಒಂದು ಮೆಸೇಜ್

ಅಷ್ಟರಲ್ಲಿ ಇಬ್ಬರು ಒಂದೇ ಬೈಕ್ ನಲ್ಲಿ ಹೋಗಿರುವ ಸಿಸಿಟಿವಿ ವಿಡಿಯೋ ಸಹ ಸಿಕ್ಕಿತ್ತು. ಇದರ ಆಧಾರದ ಮೇಲೆ ಪೊಲೀಸರು ಮತ್ತೆ ಸತೀಶ್ ನನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ಬೈಕ್ ಮೇಲೆ ಇಬ್ಬರು ಹೊಗಿದ್ದು ನಿಜ. ಆದ್ರೆ, ಮಧುಶ್ರೀಯನ್ನು ಹಾತಲಗೇರಿ ಗ್ರಾಮದ ಬಳಿ ಬಿಟ್ಟು ನಾನು ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಹೋಗಿದ್ದೇನೆ. ಅವಳು ಎಲ್ಲಿಗೆ ಹೋಗಿದ್ದಳೆಂದು ಗೊತ್ತಿಲ್ಲ ಎಂದಿದ್ದ. ಆಗ ಪೊಲೀಸರು ಸತೀಶ್​ ನನ್ನು ಬಿಟ್ಟು ಕಳಿಸಿದ್ದರು. ಕಲೆ ದಿನಗಳ ನಂತರ ಸತೀಶ್ ನ ಮೊಬೈಲ್ ಒಂದು‌‌ ಕಂಪನಿ ಮೆಸೇಜ್ ಬಂದಿತ್ತು. ಆಗಲೇ ನಾಪತ್ತೆ ಕೇಸ್​ ಗೆ ಟ್ವಿಸ್ಟ್ ಸಿಕ್ಕಿದ್ದು, ಈ ಮೆಸೇಜ್​ ಜಾಡು ಹಿಡಿದು ಹೋದ ಪೊಲೀಸರಿಗೆ ಸತೀಶನ ನೌಟಂಕಿ ಆಟ ಗೊತ್ತಾಗಿದೆ. ಸತೀಶನ ಮೊಬೈಲ್​ ಗೆ ಬಂದಿದ್ದ ಲೊಕೇಶನ್ ಬೇರೆಯಾಗಿತ್ತು. ಆಗ ಪೊಲೀಸರು ಸತೀಶ್ ಗೆ ತಮ್ಮದೇಯಾದ ಸ್ಟೈಲ್ ನಲ್ಲಿ ವಿಚಾರಣೆ ‌ಮಾಡಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ.

ಅಂದಹಾಗೇ 2024 ಡಿಸೆಂಬರ್ 16 ರಂದು ಪ್ರೇಯಸಿ ಮಧುಶ್ರೀಯನ್ನು ಕರೆದುಕೊಂಡು ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದ, ತಮ್ಮ ಜಮೀನಿಗೆ ಹೋಗಿದ್ದ. ಆಗ ಮಧುಶ್ರೀ ಮದುವೆಯಾಗು ಎಂದು ಹಠ ಹಿಡಿದಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳವಾಗಿದ್ದು, ಗಲಾಟೆ ವಿಕೋಪಕ್ಕೆ ಹೋಗಿದೆ. ರೊಚ್ಚಿಗೆದ್ದ ಸತೀಶ್ ಮಧುಶ್ರೀಯ ವೇಲ್ ನಿಂದ ಕುತ್ತಿಗೆಗೆ ಬಿಗಿದು, ಕೊಲೆ ಮಾಡಿದ್ದಾನೆ. ನಂತರ ಪಕ್ಕದ ಹಳ್ಳದಲ್ಲಿ ಅವಳ ಶವವನ್ನು ಹೊತು ಹಾಕಿ, ಏನೂ ಗೊತ್ತಿಲ್ಲದ ರೀತಿ ಇದ್ದ.

ಆಗಾಗ ಬಂದು ಎಲುಬು ಗಳನ್ನು ಬೇರೆ ಕಡೆ ಹಾಕಿ, ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದ. ಆದ್ರೆ, ಅಂದು ಸ್ವಿಚ್ ಆಪ್ ಆದ ಮೊಬೈಲ್ ಗೆ ಕಂಪನಿಯ ಒಂದು ಮೆಸೇಜ್ ಬಂದಿದ್ದು,  ಆರೋಪಿ ಸತೀಶ್ ಹೇಳೋ ಲೊಕೇಶನ್ ಬೇರೆ, ಮೊಬೈಲ್ ಗೆ ಬಂದಿರೋ ಮೆಸೇಜ್ ಲೊಕೇಶನ್ ಬೇರೆಯಾಗಿತ್ತು. ಹೀಗಾಗಿ ಕೇಸ್ ಬೆನ್ನತ್ತಿದ ಬಡಾವಣೆ ಪೊಲಿಸ್ ಠಾಣೆ ಪಿಎಸ್ಐ ಮಾರುತಿ, ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ಮಾಡಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಶವವನ್ನು ಹೊತು ಹಾಕಿದ ಜಾಗವನ್ನು ತೋರಿಸಿದ್ದಾನೆ. ಸದ್ಯ ದೇಹದ ಕೆಲವು ಎಲುಬು ಸಿಕ್ಕಿದ್ದು, ಇನ್ನೂ ಅವಳ ರುಂಡ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ರುಂಡಕ್ಕಾಗಿ ಶೋಧ ನಡೆಸಿದ್ದಾರೆ.

ಪೊಲೀಸರು ಮಧುಶ್ರೀ ಶವದ ಅವಶೇಷಗಳನ್ನು ಹಳ್ಳದಲ್ಲಿ ಪತ್ತೆ ಮಾಡಿದ್ದಾರೆ. ಡಿಎನ್‌ಎ ಪರೀಕ್ಷೆ ಮಾಡಲು ಕಳುಹಿಸುತ್ತಿದ್ದಾರೆ. ಮದುವೆಯಾಗು ಎಂದಿದ್ದಕ್ಕೆ ಪ್ರೀಯಕರ ಸತೀಶ್ ಪ್ರೇಯಸಿ ಮಧುಶ್ರೀಯನ್ನು ಕೊಲೆ ಮಾಡಿ, ದೃಶ್ಯ ಸಿನಿಮಾ‌ ಮಾದರಿಯಲ್ಲಿ ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿದ್ದ. ಆದ್ರೆ ಅದೊಂದು ಮೆಸೇಜ್ ಆರು ತಿಂಗಳ ನಂತರ ಕೊಲೆಯ ರಹಸ್ಯವನ್ನು ಬಯಲು ಮಾಡಿದೆ. ಪೊಲೀಸರ ಈ ಕಾರ್ಯಾಚರಣೆ ಹ್ಯಾಂಡ್ಸಪ್ ಹೇಳಲೇ ಬೇಕು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us