
ಗದಗ, ಸೆಪ್ಟೆಂಬರ್ 10: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಹಶೀಲ್ದಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಕಾಲಕ್ಕೆ ಅಗತ್ಯ ದಾಖಲೆಗಳು ಸಿಗದೆ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ರೈತರು ದಿನವಿಡೀ ಕಚೇರಿ ಆವರಣದಲ್ಲಿ ಕಾದು ಕುಳಿತುಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ. ಜನನ-ಮರಣ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ಜಮೀನಿನ ಉತಾರ (RTC) ಸೇರಿದಂತೆ ವಿವಿಧ ತುರ್ತು ದಾಖಲೆಗಳನ್ನು ಪಡೆಯಲು ತಾಲೂಕಿನ ದೂರದ ಹಳ್ಳಿಗಳಿಂದ ನೂರಾರು ಜನರು ನಿತ್ಯ ಕಚೇರಿಗೆ ಆಗಮಿಸುತ್ತಿದ್ದಾರೆ.
ಆದರೆ, ಅಧಿಕಾರಿಗಳಿಂದ ‘ಸರ್ವರ್ ಡೌನ್’ ಎಂಬ ಒಂದೇ ಸಿದ್ಧಸೂತ್ರದ ಉತ್ತರ ವ್ಯಕ್ತವಾಗುತ್ತಿದ್ದು, ಯಾವುದೇ ಕೆಲಸಗಳು ಸಸೂತ್ರವಾಗಿ ನೆರವೇರುತ್ತಿಲ್ಲ. ಶಾಲಾ-ಕಾಲೇಜು ಪ್ರವೇಶ ಹಾಗೂ ವಿದ್ಯಾರ್ಥಿವೇತನಕ್ಕೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಅನಿವಾರ್ಯವಾಗಿದ್ದು, ಪೋಷಕರು ಮಕ್ಕಳೊಂದಿಗೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ.
ಇನ್ನೊಂದೆಡೆ ಕೃಷಿ ಕೆಲಸಗಳನ್ನು ಬದಿಗೊತ್ತಿ ಕಚೇರಿಗೆ ಬರುವ ರೈತರು ಮೂರ್ನಾಲ್ಕು ದಿನಗಳಿಂದ ಅಲೆದಾಡುವಂತಾಗಿದೆ. ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ದಿನದ ದುಡಿಮೆಯನ್ನು ಕಳೆದುಕೊಂಡು ಬರಿಗೈಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾರೆ. ‘ಸರ್ಕಾರಿ ಸೇವೆ ಜನರ ಮನೆ ಬಾಗಿಲಿಗೆ’ ಎಂಬ ಸರ್ಕಾರದ ಘೋಷಣೆ ಕೇವಲ ಮಾತಿಗೆ ಸೀಮಿತವಾಗಿದ್ದು, ತಾಲೂಕು ಆಡಳಿತದ ವಿಳಂಬ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ!;ಪ್ರಜಾಸೇವಾ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ
ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ