ಹುಳು ಹತ್ತಿದ ದಿನಸಿ, ಕೊಳೆತ ತರಕಾರಿಯಿಂದ ನಿತ್ಯ ಅಡುಗೆ: ಇದೇ ವಿದ್ಯಾರ್ಥಿಗಳಿಗೆ ಮೃಷ್ಟಾನ್ನ; ಗದಗನ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ ಕರ್ಮಕಾಂಡ

| Updated By: ವಿವೇಕ ಬಿರಾದಾರ

Updated on: Jan 08, 2023 | 6:12 PM

ಹುಳು ಹತ್ತಿದ ದಿನಸಿ, ಕೊಳೆತ ತರಕಾರಿ ನಿತ್ಯ ಅಡುಗೆ; ಇದೇ ವಿದ್ಯಾರ್ಥಿಗಳಿಗೆ ಮೃಷ್ಟಾನ್ನ; ಕೇಳಿದ್ದಕ್ಕೆ ದಮ್ಕಿ ಹಾಕುವ ಅಧಿಕಾರಿಗಳ ಗೂಂಡಾಗಳು ಕಾಣದಂತೆ ಕುಳಿತ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಗದಗನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವ್ಯವಸ್ಥೆ ಇಲ್ಲಿದೆ.

ಹುಳು ಹತ್ತಿದ ದಿನಸಿ, ಕೊಳೆತ ತರಕಾರಿಯಿಂದ ನಿತ್ಯ ಅಡುಗೆ: ಇದೇ ವಿದ್ಯಾರ್ಥಿಗಳಿಗೆ ಮೃಷ್ಟಾನ್ನ; ಗದಗನ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ ಕರ್ಮಕಾಂಡ
ಹುಳು, ಕಲ್ಲು ಮಿಶ್ರಿತ ಅಕ್ಕಿ ಮತ್ತು ಕಾಳು
Follow us on

ಗದಗ: ಆ ಬಡ ವಿದ್ಯಾರ್ಥಿಗಳು ನೂರಾರು ಕನಸು ಕಟ್ಟಿಕೊಂಡಿದ್ದಾರೆ. ಚೆನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬ ಅಭಿಲಾಷೆ ಹೊಂದಿದ್ದಾರೆ. ಸರ್ಕಾರ ಕೂಡ ಕೋಟಿ ಕೋಟಿ ಖರ್ಚು ಮಾಡಿ ಬಡ ಮಕ್ಕಳಿಗಾಗಿ ವಸತಿ ನಿಲಯದ ವ್ಯವಸ್ಥೆ ಮಾಡಿದೆ. ಆದರೆ, ಇವರ ಈ ವಸತಿ ನಿಲಯದಲ್ಲಿನ ವ್ಯವಸ್ಥೆ ನೋಡಿದರೇ ಅಯ್ಯೋ ಬದುಕಿದ್ದೇ ಪವಾಡ ಎಂಬಂತಿದೆ. ಹೌದು ಗದಗ ನಗರದ ಕಳಸಾಪೂರ ರಸ್ತೆಯಲ್ಲಿರೋ ಮೆಟ್ರಿಕ್ ನಂತರ ಬಾಲಕ ವೃತ್ತಪರ ವಸತಿ ನಿಲಯದಲ್ಲಿ ಕೊಳೆತ ತರಕಾರಿ, ಹುಳಗಳು ಇರುವ ಆಹಾರ ಪದಾರ್ಥಗಳು ನೋಡಿದರೆ ಮೈ ಜುಮ್ ಎನ್ನುತ್ತೆ. ಈ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರೇ ಗೂಂಡಾಗಳಿಂದ ವಿದ್ಯಾರ್ಥಿಗಳಿಗೆ ಧಮ್ಮಿ ಹಾಕಿಸುತ್ತಾರಂತೆ. ಹೀಗಾಗಿ ವಿದ್ಯಾರ್ಥಿಗಳು ಭಯದಲ್ಲಿಯೇ ಕಾಲ ಕಳೆಯುಂತಾಗಿದೆ.

ಬೂಸ್ಟ್ ಹಿಡಿದ ಶೇಂಗಾ, ಕಡಲೆಯಲ್ಲಿ ಕಲ್ಲು, ಉಪ್ಪಿಟ್ಟು ರವೆಯಲ್ಲು ಹುಳಗಳ ಕಾಟ. ಹುಳು ತಿದ್ದ ಹುರಳಿ ಕಾಳು. ಈ ಕಲ್ಲು, ಹುಳು ಮಿಶ್ರಿತ ಆಹಾರ ಪದಾರ್ಥಗಳು ಪತ್ತೆಯಾಗಿದ್ದು, ಗದಗ ನಗರದ ಕಳಸಾಪೂರ ರಸ್ತೆಯಲ್ಲಿರೋ ಮೆಟ್ರಿಕ್ ನಂತರ ಬಾಲಕ ವೃತ್ತಪರ ವಸತಿ ನಿಲಯದಲ್ಲಿ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಅನೇಕ ದಿನಗಳಿಂದ ಕಳೆಪೆ ಆಹಾರ ಸೇವಿಸುವ ದುಸ್ಥಿತಿ ಬಂದಿದೆ. ವಿದ್ಯಾರ್ಥಿಗಳ ಅನ್ನಕ್ಕೂ ಗದಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಯಿ ಹಾಕಿ ಮುಕ್ಕುತ್ತಿದ್ದಾರೆ. ಗುಣಮಟ್ಟದ ಆಹಾರ ಪದಾರ್ಥ ಪೂರೈಕೆಗೆ ಒಪ್ಪಂದ ಮಾಡಿಕೊಂಡ ಅಧಿಕಾರಿಗಳು, ಬಳಿಕ ಪೂರೈಕೆದಾರರ ಜೊತೆ ಶಾಮೀಲಾಗಿದ್ದಾರೆ ಅನ್ನೋದು ಈ ವಸತಿ ನಿಲಯದಲ್ಲಿನ ಕಳಪೆ ಆಹಾರ ಪದಾರ್ಥವೇ ಸಾಕ್ಷಿ.

ಹೌದು ಸರ್ಕಾರ ಬಡ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲಿ ಅಂತ ಕೋಟ್ಯಾಂತರ ಅನುದಾನ ನೀಡಿ ವಸತಿ ನಿಲಯ, ಊಟದ ವ್ಯವಸ್ಥೆ ಮಾಡಿದೆ. ಆದರೆ, ಗದಗನ ಸಮಾಜ ಕಲ್ಯಾಣ ಅಧಿಕಾರಿಗಳು ಮಕ್ಕಳ ಅನ್ನಕ್ಕೂ ಕೈಹಾಕಿದ್ದಾರೆ. ವಸತಿ ನಿಲಯದಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿದ್ದು, ಆಹಾರವನ್ನು ಹೇಗೆ ಸೇವನೆ ಮಾಡಬೇಕು ಎಂದು ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಈ ವಸತಿ ನಿಲಯದಲ್ಲಿ ತಾಂತ್ರಿಕ ಕೋರ್ಸ್ ಮಾಡುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇಲ್ಲಿನ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಕಳಪೆ ಆಹಾರವನ್ನು ನೀಡುತ್ತಿದ್ದಾರಂತೆ. ಕೊಳೆತ ತರಕಾರಿ, ಹುಳು ಇರುವ ದವಸ ಧಾನ್ಯಗಳಿಂದ ಆಹಾರ ತಯಾರಿಸಿ, ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರಂತೆ. ಇಷ್ಟು ದಿನ ಸಹಿಸಿಕೊಂಡಿದ್ದ ವಿದ್ಯಾರ್ಥಿಗಳು, ಇವತ್ತು ರೊಚ್ಚಿಗೆದ್ದಿದ್ದರು. ಇಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಮಗೆ ಒಳ್ಳೆಯ ಆಹಾರ ನೀಡಬೇಕು ಎಂದು ಒತ್ತಾಯ ಮಾಡಿದರು. ಹಾಗೇ ಹಾಸ್ಟೆಲ್ ಬಗ್ಗೆ ಏನಾದರೂ ಮಾತನಾಡಿದರೇ, ಇಲ್ಲಿನ ಅಧಿಕಾರಿಗಳು ಹೊರಗಡೆಯಿಂದ ರೌಡಿಗಳನ್ನು ಕರೆಸಿ ಅವಾಜ್​ ಹಾಕಿಸುತ್ತಾರಂತೆ. ಹೀಗಾಗಿ ಭಯದಲ್ಲಿ ಕಾಲಕಳೆಯುವಂತ ಸ್ಥಿತಿ ನಿರ್ಮಾಣವಾಗಿದೆ ಅಂತ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ವಸತಿ ನಿಲಯದ ಅಡುಗೆ ಮನೆಯಲ್ಲಿ ಹಾಗೂ ಆಹಾರ ಪ್ರದಾರ್ಥ ಕೋಣೆಯಲ್ಲಿ ಯಾರಾದರು ಕಾಲಿಟ್ರೆ ಸಾಕು ಅಬ್ಬಾ ಇಂಥ ಆಹಾರ ಪದಾರ್ಥಗಳಿಂದ ಅಡುಗೆ ಮಾಡುತ್ತಾರಾ? ಅನ್ನೋ ಪ್ರಶ್ನೆ ಕಾಡುತ್ತೆ. ರವೆಯಲ್ಲಿ ಉಳು, ಬೂಸ್ಟ್ ಹಿಡಿದ ಶೇಂಗಾ, ಕೊಳೆತ ತರಕಾರಿ, ನುಶಿತಿಂದ ಹುರಳಿ ಕಾಲು, ಕಲ್ಲಿನಿಂದ ಕೂಡಿದ ಕಡಲೆ, ಆಹಾರ ಪದಾರ್ಥ ನೋಡಿದರೇ ಸಂಪೂರ್ಣ ಥರ್ಡ್ ಕ್ಲಾಸ್ ಗುಣಮಟ್ಟದ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ ಎಂದೆನಿಸಲಾರದು.

ಈ ಬಗ್ಗೆ ಸಮಾಜ ಕಲ್ಯಾಣ ತಾಲೂಕಾ ಅಧಿಕಾರಿ ವಿಜಯಲಕ್ಷ್ಮಿ ಅವರನ್ನು ಕೇಳಿದರೆ, ಕಳಪೆ ಆಹಾರ ನೀಡುತ್ತಿಲ್ಲ, ಆದರೆ, ಹುಳು ಹಾಗೂ ಕೊಳೆತ ತರಕಾರಿಯಿಂದ ಅಡುಗೆ ಮಾಡಬೇಡಿ ಎಂದು ಈ ಹಿಂದೆಯೂ ವಾರ್ನ್ ಮಾಡಿದ್ದೇ, ಈವಾಗಲೂ ಅವರಿಗೆ ಸೂಚನೆ ನೀಡುತ್ತೇನೆ ಅಂತಾರೆ. ಇನ್ನೂ ಹೊರಗಡೆಯಿಂದ ಬಂದು ಧಮ್ಮಿ ಯಾರು ಹಾಕಿಲ್ಲ, ಹಾಗೇನಾದರೂ ಕಂಡು ಬಂದರೇ ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ ಅಂತಾರೆ.

ವಸತಿ ನಿಲಯದಲ್ಲಿ ಕುಡಿಯುವ ನೀರು, ಸ್ವಚ್ಚತೆ ಇಲ್ಲದೆ ನರಕದಲ್ಲಿ ವಿದ್ಯಾರ್ಥಿಗಳು ವಾಸಮಾಡುತ್ತಿದ್ದಾರೆ. ಇಷ್ಟಾದರೂ ಗದಗನಲ್ಲೇ ಇದ್ದರೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ್ ವರಗಪ್ಪನವರ ಕೂಡ ಇತ್ತ ಸುಳಿದಿಲ್ಲ ಅಂತ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಎಚ್ಚತ್ತುಕೊಂಡು, ಅಂದಾ ದರ್ಬಾರ್ ನಡೆಸುತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.

ವರದಿ- ಸಂಜೀವ ಪಾಂಡ್ರೆ ಟಿವಿ9 ಗದಗ

Published On - 6:05 pm, Sun, 8 January 23