Tv9 Impact: ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದರ ಹೆಚ್ಚಳ, ಟಿವಿ9 ವರದಿ ಬಳಿಕ ಎಲ್ಲವೂ ಮೊದಲಂತೆ

| Updated By: ಆಯೇಷಾ ಬಾನು

Updated on: Sep 30, 2024 | 11:27 AM

ಅದು ಉತ್ತರ ಕರ್ನಾಟಕದ ಸರ್ಕಾರಿ ಹೈಟೆಕ್ ವೈದ್ಯಕೀಯ ಆಸ್ಪತ್ರೆ. ಬಡವರ ಪಾಲಿನ ಸಂಜೀವಿನಿ ಅಂತಲೇ ಫೇಮಸ್. ಆದ್ರೆ, ಬಡವರ ಪಾಲಿನ ಸಂಜೀವಿನಿಯಾಗಿದ್ದ ಆಸ್ಪತ್ರೆ ಆಡಳಿತ ಬಡವರ ಸುಲಿಗೆಗೆ ನಿಂತಿತ್ತು. ನಿರ್ದೇಶಕರ ನಿರ್ಧಾರ ಇಡೀ ಜಿಲ್ಲೆಯ ಜನ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಟಿವಿ9 ಗ್ಯಾರಂಟಿಗಾಗಿ ಬಡವ ಸುಲಿಗೆ ಎಂಬ ಶಿರ್ಷಿಕೆ ಅಡಿ ವಿಸ್ತೃತ ವರದಿ ಮಾಡಿತ್ತು. ತಕ್ಷಣ ಎಚ್ಚೆತ್ತ ಉಸ್ತುವಾರಿ ಸಚಿವರು ಸುಲಿಗೆಗೆ ಬ್ರೇಕ್ ಹಾಕಿದ್ದಾರೆ. ಹಳೇ ದರವೇ ಮುಂದುವರೆಸುವಂತೆ ಸೂಚಿಸಿದ್ದಾರೆ.

Tv9 Impact: ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದರ ಹೆಚ್ಚಳ, ಟಿವಿ9 ವರದಿ ಬಳಿಕ ಎಲ್ಲವೂ ಮೊದಲಂತೆ
ಜಿಮ್ಸ್ ಆಸ್ಪತ್ರೆ
Follow us on

ಗದಗ, ಸೆ.30: ಗದಗ ವೈದ್ಯಕೀಯ ಆಸ್ಪತ್ರೆ ಅಂದ್ರೆ ಅದು ಬಡವರ ಪಾಲಿನ ಸಂಜೀವಿನಿ ಅಂತಲೇ ಕರೀತಾರೆ. ಇದು ಉತ್ತರ ಕರ್ನಾಟಕದಲ್ಲೇ ಹೈಟೆಕ್ ಆಸ್ಪತ್ರೆ (Gadag Gims Hospital). 950 ಹಾಸಿಗೆಯ ಆಸ್ಪತ್ರೆ ಇದಾಗಿದೆ.‌ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿ ಎಲ್ಲಾ ಸೌಲಭ್ಯ ಕಲ್ಪಿಸಿದೆ. BPL, ಅಂತ್ಯೋದಯ ಕಾರ್ಡ್ ದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಗದಗ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಅವ್ರಿಗೆ ಅದೇನ್ ಆಗಿತ್ತೋ ಗೋತ್ತಿಲ್ಲ. ರಾಜ್ಯದ ಯಾವುದೇ ವೈದ್ಯಕೀಯ ಆಸ್ಪತ್ರೆಗಳಲ್ಲಿ ಯಾವುದೇ ಚಿಕಿತ್ಸೆ ದರಗಳು ಹೆಚ್ಚಿಗೆ ಮಾಡಿಲ್ಲ. ಆದ್ರೆ, ಜಿಮ್ಸ್ ನಿರ್ದೇಶಕರು ಮಾತ್ರ ಏಕಾಏಕಿ ಎಲ್ಲಾ ಚಿಕಿತ್ಸೆ ದರಗಳು ಹೆಚ್ಚಿಗೆ ಮಾಡಿ ಆದೇಶ ಮಾಡಿದ್ರು. ಸದ್ಯ ಟಿವಿ9 ವರದಿ (Tv9 Impact) ಬಳಿಕ ದರ ಹೆಚ್ಚಳಕ್ಕೆ ಬ್ರೇಕ್ ಬಿದ್ದಿದೆ.

ಜಿಮ್ಸ್ ಆಡಳಿತದ ನಿರ್ಧಾರ ಬಡ ರೋಗಿಗಳು ಕಂಗಾಲಾಗುವಂತೆ‌ ಮಾಡಿತ್ತು. ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಬಡವರಿಂದ ಸುಲಿಗೆಗೆ ನಿಂತಾ ಅನ್ನೋ ಪ್ರಶ್ನೆ ಕಾಡ್ತಾಯಿತ್ತು. ಈ ಕುರಿತು ಟಿವಿ9ನಲ್ಲಿ ವಿಸ್ತೃತ ವರದಿ‌ ಮಾಡಿತ್ತು. ಗ್ಯಾರಂಟಿ ಯೋಜನೆಗಾಗಿ ಬಡ ಜನರ ಸುಲಿಗೆಗೆ ನಿಂತಾ ಸರ್ಕಾರ ಅನ್ನೋ ಶೀರ್ಷಿಕೆ ಅಡಿ ಟಿವಿ9 ವಿಸ್ತ್ರತ ವರದಿ ಮಾಡಿತ್ತು. ಟಿವಿ9 ವರದಿ ಪ್ರಸಾರ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಉಸ್ತುವಾರಿ ಸಚಿವ ಹೆಚ್​ಕೆ ಪಾಟೀಲ್ ಸಧ್ಯಕ್ಕೆ ಯಾವುದೇ ದರ ಹೆಚ್ಚಳ ಬೇಡ, ಕೂಡಲೇ ಚಿಕಿತ್ಸಾ ದರ ಇಳಿಸುವಂತೆ ಜಿಮ್ಸ್ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಸೂಚನೆ ಮೇರೆಗೆ ದರಗಳು ಇಳಿಕೆ ಮಾಡಲಾಗಿದೆ ಅಂತ ಟಿವಿ9ಗೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಅವರು ತಿಳಿಸಿದರು.

ಇದನ್ನೂ ಓದಿ; ಬೆಂಗಳೂರಿನಲ್ಲಿ 2022ರಲ್ಲಿ 4,785, 2023ರಲ್ಲಿ 5,580 ಬೈಕ್ ಕಳ್ಳತನ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೊಲೀಸ್ ಕಮಿಷನರ್

ಟಿವಿ9 ವರದಿ ಬಳಿಕ ಗದಗ ಜಿಲ್ಲೆಯಾದ್ಯಂತ ಜಿಮ್ಸ್ ಆಡಳಿತ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಯಾವ ವೈದ್ಯಕೀಯ ಆಸ್ಪತ್ರೆಗಳಲ್ಲಿ ಇಲ್ಲದ ದರ ಪರಿಷ್ಕರಣೆ ಇಲ್ಯಾಕೇ ಅಂತ ಪ್ರಶ್ನೆ ಮಾಡಿದರು. ನಿತ್ಯವೂ ವೈದ್ಯರ ಜೊತೆ ಜಗಳ ಮಾಡುತ್ತಾಯಿದ್ದರು. ಇದು ವೈದ್ಯರಿಗೂ ತಲೆ ನೋವಾಗಿತ್ತು. ಗದಗ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ದರ ಹೆಚ್ಚಳ ಮಾಡಿದರು. ಎಲ್ಲಾ ರೀತಿಯ ರಕ್ತ ತಪಾಸಣೆ, ಎಂಡೋಸ್ಕೋಪಿ, ಅಲ್ಟ್ರಾಸೌಂಡ್, ಸೋನೋಗ್ರಾಫಿ, ಎಕ್ಸರೇ, ದಂತ ಚಿಕಿತ್ಸೆ ಸೇರಿದಂತೆ ಎಲ್ಲಾ ದರ ಹೆಚ್ಚಳ ಮಾಡಲಾಗಿತ್ತು. ಬಹುತೇಕ ದರದಲ್ಲಿ ಎರಡು, ಮೂರು ಪಟ್ಟು ಹೆಚ್ಚಳ ಮಾಡಲಾಗಿತ್ತು. ಹಿರಿಯ ವೈದ್ಯರು, ಅಧಿಕಾರಿಗಳ ಗಣನೆಗೆ ತರದೇ ಏಕಾಏಕಿ ಹೆಚ್ಚಳ ಆರೋಪ ಕೇಳಿಬಂದಿತ್ತು. ಟಿವಿ9 ಮಾಡಿದ ಜನಪರ ವರದಿಗೆ ಮೆತ್ತಗಾದ ಜಿಮ್ಸ್ ಆಡಳಿತ ಮಂಡಳಿ ದರ ಇಳಿಕೆ ಮಾಡಿದೆ. ಹೀಗಾಗಿ ಟಿವಿ9 ವರದಿಗೆ ಗದಗ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಅತೀ ಕಡಿಮೆ ದರದಲ್ಲಿ ಬಡವರಿಗೆ ಚಿಕಿತ್ಸೆ ಇತ್ತು. ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಇತ್ತು. ಆದರೆ, ಕಳೆದ 20 ದಿನಗಳಿಂದ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಂದಲೂ ಜಿಮ್ಸ್ ಆಡಳಿತ ಹಣ ಸುಲಿಗೆ ಮಾಡಿದೆ.

ಚಿಕಿತ್ಸೆ ಹಳೆ ದರ ಹೊಸ ದರ
ಎಂಡೋಸ್ಕೋಪಿ 200 1000
ಎಕ್ಸರೇ 50 100
ಡ್ರೆಸ್ಸಿಂಗ್ 20 100
ಅಲ್ಟ್ರಾಸೌಂಡ್ 50 200
ಡೆಂಟಲ್ 100 1500

ಹೀಗೆ ಬಹುತೇಕ ತಪಾಸಣೆ ದರ ಹೆಚ್ಚಳ ಮಾಡಿತ್ತು. ಈಗ ಟಿವಿ9 ವರದಿ ಬಳಿಕ ಎಲ್ಲಾ ಚಿಕಿತ್ಸೆಗೆ ಹಳೆ ದರಗಳೇ ಮುಂದುವರೆಸಿ ಆದೇಶ ಮಾಡಲಾಗಿದೆ. ಏನೇ ಇರಲಿ ಸರ್ಕಾರ ಪದೇ ಪದೇ ಬಡವರ ಪರ ಅಂತಿದೆ. ಆದ್ರೆ, ಅಧಿಕಾರಿಗಳು ಮಾಡಿದ ಯಡವಟ್ಟು ಇಷ್ಟೊಂದು ರಾದ್ಧಾಂತಕ್ಕೆ ಕಾರಣವಾಗಿದ್ದು ವಿಪರ್ಯಾಸವೇ ಸರಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ