ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೇಸಿಗೆ ವಿಶೇಷ ರೈಲುಗಳ ಸಂಚಾರ ಒಂದು ತಿಂಗಳು ವಿಸ್ತರಣೆ! ಇಲ್ಲಿದೆ ಪೂರ್ಣ ವಿವರ

ರೈಲು ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಹಾಗೂ ಸುಗಮ ಸಂಚಾರದ ಉದ್ದೇಶದಿಂದ ನೈಋತ್ಯ ರೈಲ್ವೆಯು ಹುಬ್ಬಳ್ಳಿ ಹಾಗೂ ಬೆಂಗಳೂರಿನಿಂದ ರಾಮೇಶ್ವರಂ, ಕೊಲ್ಲಂ ಮತ್ತು ತಿರುವನಂತಪುರಂಗೆ ಸಂಚರಿಸುವ ಬೇಸಿಗೆ ವಿಶೇಷ ರೈಲುಗಳ ಅವಧಿಯನ್ನು ಜೂನ್ ಕೊನೆಯವರೆಗೆ ವಿಸ್ತರಿಸಿದೆ. ವಿಶೇಷ ರೈಲುಗಳ ಸಂಪೂರ್ಣ ವಿವರ ಇಲ್ಲಿದೆ.

ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೇಸಿಗೆ ವಿಶೇಷ ರೈಲುಗಳ ಸಂಚಾರ ಒಂದು ತಿಂಗಳು ವಿಸ್ತರಣೆ! ಇಲ್ಲಿದೆ ಪೂರ್ಣ ವಿವರ
ಸಾಂದರ್ಭಿಕ ಚಿತ್ರ
Image Credit source: South Western Railway

Updated on: May 26, 2026 | 10:04 AM

ಬೆಂಗಳೂರು, ಮೇ 26: ಬೇಸಿಗೆಯ ರಜೆ ಮುಗಿಸಿ ಊರುಗಳಿಗೆ ಹಾಗೂ ಕೆಲಸದ ಸ್ಥಳಗಳಿಗೆ ಮರಳುವ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ (SWR) ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾರ್ವಜನಿಕರ ದಟ್ಟಣೆ ನಿಯಂತ್ರಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸದ್ಯ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬೇಸಿಗೆ ವಿಶೇಷ ರೈಲುಗಳ (Summer Special Trains) ಅವಧಿಯನ್ನು ಜೂನ್ ತಿಂಗಳ ಕೊನೆಯ ವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ಈ ಎಲ್ಲಾ ವಿಶೇಷ ರೈಲುಗಳು ಈಗ ಅಸ್ತಿತ್ವದಲ್ಲಿರುವ ವೇಳಾಪಟ್ಟಿ, ನಿಲುಗಡೆ (Stoppages) ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ (Composition) ಸಂಚರಿಸಲಿವೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಖ್ಯಾಂಶಗಳು

  • ಹುಬ್ಬಳ್ಳಿ, ಬೆಂಗಳೂರು ಮಾರ್ಗದ ಪ್ರಮುಖ ವಿಶೇಷ ರೈಲುಗಳ ಸಂಚಾರ ಜೂನ್ ಅಂತ್ಯದವರೆಗೆ ವಿಸ್ತರಣೆ.
  • ಸದ್ಯ ಇರುವ ಹಳೆಯ ರೈಲು ಸಮಯ, ನಿಲುಗಡೆ ಹಾಗೂ ಬೋಗಿಗಳ ವ್ಯವಸ್ಥೆಯಲ್ಲೇ ಮುಂದುವರಿಕೆ.
  • ತಾಂತ್ರಿಕ ಕಾಮಗಾರಿ ಹಿನ್ನೆಲೆ ಕೆಲವು ನಿರ್ದಿಷ್ಟ ದಿನಗಳಂದು ಮಾತ್ರ ರೈಲು ಸೇವೆ ರದ್ದು.

ರೈಲುಗಳ ವಿಸ್ತರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ಹುಬ್ಬಳ್ಳಿ-ರಾಮೇಶ್ವರಂ ಭಾನುವಾರದ ವಿಶೇಷ ರೈಲು (07355) ಜೂನ್ 7 ರಿಂದ 28 ರವರೆಗೆ ಹಾಗೂ ರಾಮೇಶ್ವರಂ-ಹುಬ್ಬಳ್ಳಿ ಸೋಮವಾರದ ರೈಲು (07356) ಜೂನ್ 8 ರಿಂದ 29 ರವರೆಗೆ ವಿಸ್ತರಣೆಗೊಂಡಿದೆ. ಅದೇ ರೀತಿ ಹುಬ್ಬಳ್ಳಿ-ಕೊಲ್ಲಂ ಭಾನುವಾರದ ರೈಲು (07313) ಮೇ 31 ರಿಂದ ಜೂನ್ 21 ರವರೆಗೆ ಮತ್ತು ಕೊಲ್ಲಂ-ಹುಬ್ಬಳ್ಳಿ ಸೋಮವಾರದ ರೈಲು (07314) ಜೂನ್ 1 ರಿಂದ ಜೂನ್ 22 ರವರೆಗೆ ಸಂಚರಿಸಲಿವೆ. ಆದರೆ, ಇಂಜಿನಿಯರಿಂಗ್ ಕಾಮಗಾರಿಗಳ ಕಾರಣದಿಂದಾಗಿ ಹುಬ್ಬಳ್ಳಿ-ಕೊಲ್ಲಂ ರೈಲು ಜೂನ್ 7 ರಂದು ಮತ್ತು ಕೊಲ್ಲಂ-ಹುಬ್ಬಳ್ಳಿ ರೈಲು ಜೂನ್ 8 ರಂದು ರದ್ದಾಗಲಿವೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ


ಮತ್ತೊಂದೆಡೆ, ಬೆಂಗಳೂರಿನ ಎಸ್‌ಎಂವಿಟಿ (SMVT) ನಿಲ್ದಾಣದಿಂದ ತಿರುವನಂತಪುರಂ ಸೆಂಟ್ರಲ್ ನಡುವೆ ಸಂಚರಿಸುವ ಪ್ರಮುಖ ವೀಕ್ಲಿ ಸ್ಪೆಷಲ್ ಟ್ರೈನ್​ಗಳಾದ 06523/06524 (ಸೋಮವಾರ/ಮಂಗಳವಾರ) ಮತ್ತು 06547/06548 (ಬುಧವಾರ/ಗುರುವಾರ) ರೈಲುಗಳ ಸೇವೆಯನ್ನು ಜೂನ್ ನಾಲ್ಕನೇ ವಾರದವರೆಗೆ ವಿಸ್ತರಿಸಲಾಗಿದೆ. ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಶುಕ್ರವಾರದ ರೈಲು (06555) ಜೂನ್ 19 ರಿಂದ 26 ರವರೆಗೆ ಹಾಗೂ ತಿರುವನಂತಪುರಂ-ಎಸ್‌ಎಂವಿಟಿ ಬೆಂಗಳೂರು ಭಾನುವಾರದ ರೈಲು (06556) ಜೂನ್ 21 ರಿಂದ ಜೂನ್ 28 ರವರೆಗೆ ವಿಸ್ತರಣೆಯಾಗಿದೆ.

ಇದನ್ನೂ ಓದಿ: ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ!

ಈ ರೈಲುಗಳ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ವಿವರಗಳನ್ನು ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ (www.enquiry.indianrail.gov.in) ಅಥವಾ NTES ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us