ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಮಾರ್ಚ್​ ಒಳಗಾಗಿ ಸರ್ಕಾರ ಪ್ರಕಟಿಸಬೇಕು: ಜಯಮೃತ್ಯುಂಜಯ ಸ್ವಾಮೀಜಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 01, 2022 | 9:11 PM

ಕೋವಿಡ್​ ಪಿಡುಗಿನ ಹಿನ್ನೆಲೆಯಲ್ಲಿ ಸಮುದಾಯದ ಜನ ಮೌನವಾಗಿದ್ದರು ಆದರೆ, ನಮ್ಮ ಮೌನವನ್ನು ಸರ್ಕಾರ ಅಪಾರ್ಥ ಮಾಡಿಕೊಂಡಿರುವಂತಿದೆ ಎಂದು ಬೆಳಗಾವಿಯಲ್ಲಿ ಮಂಗಳವಾರ ಮಾಧ್ಯಮದವರಿಗೆ ಹೇಳಿದ ಜಯಮೃತ್ಯುಂಜಯ ಸ್ವಾಮೀಜಿ ಅವರು ನಾಳೆ (ಬುಧವಾರ) ನಗರದಲ್ಲಿ ಒಂದು ಕಾರ್ಯಕಾರಿಣಿ ಸಭೆಯನ್ನು ನಗರದಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಮಾರ್ಚ್​ ಒಳಗಾಗಿ ಸರ್ಕಾರ ಪ್ರಕಟಿಸಬೇಕು: ಜಯಮೃತ್ಯುಂಜಯ ಸ್ವಾಮೀಜಿ
ಜಯ ಮೃತ್ಯುಂಜಯ ಸ್ವಾಮೀಜಿ
Follow us on

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ (2A Reservation) ನೀಡಬೇಕೆಂದು ಕೂಡಲಸಂಗಮ ಜಯಮೃತ್ಯುಂಜಯ ಸ್ವಾಮೀಜಿ (Jaya Mruthiyunjaya Swamiji) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ವರ್ಷ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ ಕನ್ನಡಿಗರಿಗೆ ಚೆನ್ನಾಗಿ ನೆನಪಿದೆ. ಕೋವಿಡ್​ (Covid) ಪಿಡುಗಿನ ಹಿನ್ನೆಲೆಯಲ್ಲಿ ಸಮುದಾಯದ ಜನ ಮೌನವಾಗಿದ್ದರು ಆದರೆ, ನಮ್ಮ ಮೌನವನ್ನು ಸರ್ಕಾರ ಅಪಾರ್ಥ ಮಾಡಿಕೊಂಡಿರುವಂತಿದೆ ಎಂದು ಬೆಳಗಾವಿಯಲ್ಲಿ ಮಂಗಳವಾರ ಮಾಧ್ಯಮದವರಿಗೆ ಹೇಳಿದ ಜಯಮೃತ್ಯುಂಜಯ ಸ್ವಾಮೀಜಿ ಅವರು ನಾಳೆ (ಬುಧವಾರ) ನಗರದಲ್ಲಿ ಒಂದು ಕಾರ್ಯಕಾರಿಣಿ ಸಭೆಯನ್ನು ನಗರದಲ್ಲಿ ನಡೆಸಲಾಗುವುದು ಎಂದು ಹೇಳಿದರು.

‘ಒಂದು ವರ್ಷದಿಂದ 2ಎ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ಇದು ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಪಂಚಮಸಾಲಿ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ. ನಾವು ಪ್ರತಿಬಾರಿ ಸಂಪರ್ಕಿಸಿದಾಗಲೂ ಸರ್ಕಾರ ಸಮಯ ಕೇಳುತ್ತದೆ. ಸರ್ಕಾರಕ್ಕೆ ಅನೇಕ ಸಲ ನಾವು ಗಡುವು ನೀಡಿದ್ದೇವೆ. ಅದರೆ ನಮ್ಮ ಬೇಡಿಕೆ ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ. ನಾವು ನೀಡಿದ ಪ್ರತಿ ಗಡುವಿನ ಉಲ್ಲಂಘನೆಯಾಗುತ್ತಿದೆ. ಮಾರ್ಚ್​ ಒಳಗಾಗಿ ನಾವು ಕೋರಿರುವ ಮೀಸಲಾತಿ ಪ್ರಕಟಿಸಬೇಕು ಅಂತ ಸರ್ಕಾರಕ್ಕೆ ಹೇಳಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಮೀಸಲಾತಿ ಘೋಷಿಸುತ್ತಾರೆ ಎಂಬ ಭರವಸೆ ನಮಗೆ ಇದೆ,’ ಎಂದು ಜಯಮೃತ್ಯುಂಜಯ ಸ್ವಾಮೀಜಿ ಬೆಳಗಾವಿಯಲ್ಲಿ ಹೇಳಿದರು.

‘ಕೊವಿಡ್​ ಹಿನ್ನೆಲೆಯಲ್ಲಿ ನಮ್ಮ ಹೋರಾಟಕ್ಕೆ ತಡೆಯೊಡ್ಡಿದ್ದು ನಿಜ, ಆದರೆ ಅದನ್ನು ಸರ್ಕಾರ ನಾವು ಸುಮ್ಮನಾಗಿದ್ದೇವೆ ಎಂದು ಭಾವಿಸಬಾರದು. ನಮ್ಮ ಮುಂದಿನ ಕಾರ್ಯ ಯೋಜನೆಯನ್ನು ನಾಳಿನ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸುತ್ತೇವೆ,’ ಎಂದು ಸ್ವಾಮೀಜಿ ಹೇಳಿದರು.

ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್, ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸ್ವಾಮೀಜಿ ಅವರು ಸಾಮಾಜಿಕ ನ್ಯಾಯ ದೃಷ್ಟಿಯಿಂದ ಪಂಚಮಸಾಲಿ ಸಮುದಾಯಕ್ಕೂ ಒಂದು ಸ್ಥಾನ ಮೀಸಲಿಡಬೇಕೆಂದು ಹೇಳಿದರು. ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿ ಕಲ್ಪಿಸಲಾಗಿದೆ. ನಮ್ಮ ಸಮುದಾಯಕ್ಕೂ ಅವಕಾಶ ನೀಡಬೇಕೆಂದು ಬಿ ಜೆ ಪಿ ಯ ವರಿಷ್ಠರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ:  Belagavi: ರಾಜಕೀಯವಾಗಿ ಸೂಕ್ಷ್ಮವಾಗಿರುವ ಬೆಳಗಾವಿ ಪಾಲಿಕೆಗೆ ಇನ್ನೂ ಇಲ್ಲ ಮೇಯರ್ ಭಾಗ್ಯ! ಕಮಲ ಶಾಸಕರ ಕರಾಮತ್ತು?