ಭವಾನಿ ರೇವಣ್ಣಗೆ ಇಂದೂ ಸಿಗಲ್ಲಿಲ್ಲ ಜಾಮೀನು: ವಿಡಿಯೋ ಹಂಚಿದವರು SIT ಕಸ್ಟಡಿಗೆ

| Updated By: ಡಾ. ಭಾಸ್ಕರ ಹೆಗಡೆ

Updated on: May 29, 2024 | 5:12 PM

ಮೈಸೂರು ಜಿಲ್ಲೆ ಕೆ.ಆರ್.ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಿನ್ನೆ ವಿಚಾರಣೆ ಮಾಡಿಬೇಕಿದ್ದ ಕೋರ್ಟ್ ಇವತ್ತಿಗೆ ಮುಂದೂಡಿತ್ತು. ಹಾಗಾಗಿ ಭವಾನಿ ರೇವಣ್ಣಗೆ ನಿರಾಸೆಯಾಗಿತ್ತು. ಇಂದು ವಿಚಾರಣೆ ನಡೆಸಿದ ಕೋರ್ಟ್ ಆದೇಶ ಕಾಯ್ದಿರಿಸಿದ್ದು ತಿರ್ಪನ್ನು ಮೇ 31ಕ್ಕೆ ಮುಂದೂಡಿ. ಹೀಗಾಗಿ ಇಂದು ನಿರಾಸೆಯಾಗಿದೆ. ಇನ್ನು ಪೆನ್ ಡ್ರೈವ್ ವೈರಲ್ ಪ್ರಕರಣದ ಆರೋಪಿಗಳಿಗೆ ಮೂರು ದಿನ ಎಸ್​​ಐಟಿ ಕಸ್ಟಡಿಗೆ ನೀಡಲಾಗಿದೆ.

ಭವಾನಿ ರೇವಣ್ಣಗೆ ಇಂದೂ ಸಿಗಲ್ಲಿಲ್ಲ ಜಾಮೀನು: ವಿಡಿಯೋ ಹಂಚಿದವರು SIT ಕಸ್ಟಡಿಗೆ
ಭವಾನಿ ರೇವಣ್ಣಗೆ ಇಂದೂ ಸಿಗಲ್ಲಿಲ್ಲ ಜಾಮೀನು, ವಿಡಿಯೋ ಹಂಚಿದವರು SIT ಕಸ್ಟಡಿಗೆ
Follow us on

ಬೆಂಗಳೂರು, ಮೇ 29: ಮೈಸೂರು ಜಿಲ್ಲೆ ಕೆ.ಆರ್.ನಗರ ಮಹಿಳೆಯ ಅಪಹರಣ (Kidnap)
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಭವಾನಿ ರೇವಣ್ಣ (Bhavani Revanna) ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಇವತ್ತಿಗೆ ಮುಂದೂಡಲಾಗಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್, ಸಂತೋಷ್ ಗಜಾನನ ಭಟ್ ಅವರು ವಾದ ಪ್ರತಿವಾದಗಳನ್ನು ಆಲಿಸದ ನಂತರ ಭವಾನಿ ರೇವಣ್ಣ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ್ದು, ಮೇ 31ಕ್ಕೆ ಆದೇಶ ಮುಂದೂಡಿದ್ದಾರೆ.

ಭವಾನಿ ವಿರುದ್ಧ ನೇರ ಆರೋಪಗಳಿಲ್ಲ: ಸಂದೇಶ್ ಚೌಟ

ಭವಾನಿ ರೇವಣ್ಣ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, ಎಸ್ಐಟಿ ವಾದ ಕೇಳಿದರೆ ಭವಾನಿ ವಿರುದ್ಧ ನೇರ ಆರೋಪಗಳಿಲ್ಲ. ಬೇರೊಬ್ಬರ ಮೊಬೈಲ್ ಕರೆಗಳನ್ನು ಆಧರಿಸಿ ಲಿಂಕ್ ಮಾಡಲಾಗುತ್ತಿದೆ. ಸಾಂದರ್ಭಿಕ ಸಾಕ್ಷಿಗಳನ್ನು ಉಲ್ಲೇಖಿಸಿ ವಾದಿಸಲಾಗುತ್ತಿದೆ. ಭವಾನಿ ಬಂಧಿಸಿ ತನಿಖೆ ನಡೆಸಬೇಕೆಂದು ಕೇಳಿದ್ದಾರೆ.

ಭವಾನಿ ಸೂಚನೆ ಮೇರೆಗೆ ಬಂದ ಮಹಿಳೆಯನ್ನು ಏ. 26 ರಂದೇ‌ ಮನೆಗೆ ಕಳುಹಿಸಲಾಗಿದೆ. ದೂರಿನಲ್ಲೇ ಈ ಅಂಶ ಸ್ಪಷ್ಟವಿದ್ದರೂ ಭವಾನಿಯನ್ನು ಆರೋಪಿ ಮಾಡಲಾಗುತ್ತಿದೆ. ಅಪಹರಣ ಕೇಸ್​​ನಲ್ಲಿ‌ ಭವಾನಿಯ ಯಾವುದೇ ಪಾತ್ರವಿಲ್ಲ.

ಇದನ್ನೂ ಓದಿ: ಕೊನೆಗೂ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್​ ಬುಕ್ ಮಾಡಿದ ಪ್ರಜ್ವಲ್, ಯಾವಾಗ ಬರ್ತಾರೆ ಗೊತ್ತಾ?

ಎಫ್ಐಆರ್ ದಾಖಲಿಸಿ 27 ದಿನಗಳಾದರೂ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಈವರೆಗೂ ಏಕೆ ತನಿಖೆಗೆ ಕರೆಯಲಿಲ್ಲ. ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ವಾದಿಸಿದ್ದಾರೆ.

ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಬಾರದು: ಎಸ್​ಪಿಪಿ ಬಿ.ಎನ್.ಜಗದೀಶ್

SIT ಪರ ಎಸ್​ಪಿಪಿ ಬಿ.ಎನ್.ಜಗದೀಶ್ ವಾದಮಂಡನೆ ಮಾಡಿದ್ದು, ಭವಾನಿ ಅವರು ಸತೀಶ್ ಬಾಬು ಮತ್ತಿತರರಿಗೆ ಮೊಬೈಲ್ ಕರೆಗಳನ್ನು ಮಾಡಿಸಿದ್ದಾರೆ. ಭವಾನಿಯನ್ನು ಬಂಧಿಸದೇ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಭವಾನಿ ಹಣಬಲ ಹೊಂದಿದ್ದು ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗ ಅವರ ಬಂಧನ ಅನಿವಾರ್ಯವೆಂದು ಎಸ್ಐಟಿ ವಾದಿಸಿದೆ.

ಭವಾನಿ ರೇವಣ್ಣ ಎಸ್ಐಟಿ ನೀಡಿರುವ ಪತ್ರದ ವೈಖರಿ ಗಮನಿಸಬೇಕು. ಎಸ್ಐಟಿ ಯಾವಾಗ ನೋಟಿಸ್ ನೀಡಬೇಕೆಂದು ಭವಾನಿ ನಿರ್ಧರಿಸುವಂತಿಲ್ಲ. ಪ್ರಕರಣದಲ್ಲಿ ಸಾಕ್ಷಿಯಾಗಲು ಅವರು ಪ್ರಯತ್ನಿಸಿದಂತಿದೆ. ಸಂತ್ರಸ್ತೆ ಇಟ್ಟಿದ್ದ ಸ್ಥಳದಿಂದ ತಪ್ಪಿಸಿಕೊಂಡು ಸಹೋದರಿ ಮನೆಗೆ ತೆರಳಿದ್ದಾಳೆ. ಸಂತ್ರಸ್ತೆ ತನ್ನ ಪುತ್ರನ ವಿರುದ್ಧ ದೂರು ನೀಡದಂತೆ ತಡೆಯಲು ಭವಾನಿ ಯತ್ನಿಸಿದ್ದಾರೆ. ಸಂತ್ರಸ್ತೆಯ ಸಿಆರ್​​ಪಿಸಿ 161, 164 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಭವಾನಿ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯ ಸಂಗ್ರಹಸಲಾಗಿದೆ.

ಇದನ್ನೂ ಓದಿ: ಕಿಡ್ನ್ಯಾಪ್ ಕೇಸ್: ರೇವಣ್ಣ ಬೆನ್ನಲ್ಲೇ ಭವಾನಿಗೂ ಬಂಧನದ ಭೀತಿ, ಕೋರ್ಟ್ ಮೊರೆ

ಶಾಸಕರ ಕುಟುಂಬದವರಾಗಿ ಕಾನೂನು ಪಾಲಿಸಬೇಕು ಆದರೆ, ಕಾನೂನು ಮೀರಿ ಭವಾನಿ ರೇವಣ್ಣ ವರ್ತಿಸಿದ್ದಾರೆ ಹೀಗಾಗಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು. ಸಮಾಜದ ಹಿತಾಸಕ್ತಿ ಪರಿಗಣಿಸಿ ಅರ್ಜಿ ವಜಾಗೊಳಿಸಬೇಕು ಎಂದು ವಾದಿಸಿದ್ದಾರೆ.

ಪೆನ್ ಡ್ರೈವ್ ವೈರಲ್ ಪ್ರಕರಣ: ಆರೋಪಿಗಳಿಗೆ ಮೂರು ದಿನ ಎಸ್​​ಐಟಿ ಕಸ್ಟಡಿ

ಹಾಸನ ಪೆನ್ ಡ್ರೈವ್ ವೈರಲ್ ಪ್ರಕರಣದ ಆರೋಪಿಗಳಾದ ನವೀನ್​ ಹಾಗೂ ಚೇತನ್​ರನ್ನು ಇಂದಿನಿಂದ ಜೂನ್ 1 ರವರೆಗೆ ಅಂದರೆ ಮೂರು ದಿನ ಎಸ್​ಐಟಿ ಕಸ್ಟಡಿಗೆ ನೀಡಿ ಹಾಸನದ ಎರಡನೇ ಅಧಿಕ ಹಿರಿಯ ಸಿವಿಲ್ ಮತ್ತು ಜೆಎಂಎಫ್​ಸಿ ಕೋರ್ಟ್ ಆದೇಶಿಸಿದೆ. ಜೂನ್ 1 ರ ಶನಿವಾರ ಸಂಜೆ 4-30 ಕ್ಕೆ ಕೋರ್ಟ್​ಗೆ ಹಾಜರುಪಡಿಸಲು ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:57 pm, Wed, 29 May 24