ಅಡ್ಡಮತದಾನ ಮಾಡಿಲ್ಲ, ಪಕ್ಷಕ್ಕೆ ದ್ರೋಹ ಬಗೆದಿಲ್ಲ: ಚನ್ನಕೇಶವನ ಬಲಿಕಲ್ಲು ಮುಟ್ಟಿ ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ

ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ (Cross Voting) ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಎಚ್.ಕೆ. ಸುರೇಶ್ ಐತಿಹಾಸಿಕ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ದೇಗುಲದ ಬಲಿಕಲ್ಲು ಮುಟ್ಟಿ "ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ, ಅಡ್ಡಮತದಾನ ಮಾಡಿಲ್ಲ" ಎಂದು ಮೂರು ಬಾರಿ ಉಚ್ಚರಿಸುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಾರೆ.

ಅಡ್ಡಮತದಾನ ಮಾಡಿಲ್ಲ, ಪಕ್ಷಕ್ಕೆ ದ್ರೋಹ ಬಗೆದಿಲ್ಲ: ಚನ್ನಕೇಶವನ ಬಲಿಕಲ್ಲು ಮುಟ್ಟಿ ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಬಿಜೆಪಿ ಶಾಸಕ ಎಚ್.ಕೆ. ಸುರೇಶ್
Image Credit source: tv9
Edited By:

Updated on: Jun 30, 2026 | 11:05 AM

ಹಾಸನ, ಜೂನ್ 30: ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ನಡೆದಿದೆ ಎಂಬ ಆರೋಪಗಳು ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಶಾಸಕ ಎಚ್.ಕೆ. ಸುರೇಶ್ (HK Suresh)  ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವ ಮೂಲಕ ತಾವೊಬ್ಬ ನಿಷ್ಠಾವಂತ ಪಕ್ಷದ ಕಾರ್ಯಕರ್ತ ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ. ಬೇಲೂರಿನ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶಾಸಕರು ಆಣೆ ಪ್ರಮಾಣ ಮಾಡಿದ್ದಾರೆ.

ಚನ್ನಕೇಶವಸ್ವಾಮಿ ದೇಗುಲ ದರ್ಶನ ಬಳಿಕ ಆಣೆ

ಶಾಸಕ ಎಚ್.ಕೆ. ಸುರೇಶ್ ಮಂಗಳವಾರ ಬೆಳಗ್ಗೆ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಚನ್ನಕೇಶವಸ್ವಾಮಿ, ಸೌಮ್ಯನಾಯಕಿ ಹಾಗೂ ರಂಗನಾಯಕಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚನ್ನಕೇಶವಸ್ವಾಮಿಯ ಪಾದಮುಟ್ಟಿ ಭಕ್ತಿಯಿಂದ ನಮಸ್ಕರಿಸಿದರು. ‘ಪೂರ್ವಜನ್ಮದ ಪುಣ್ಯದಿಂದ ನನಗೆ ಭಗವಂತನ ಬಲಭಾಗದಲ್ಲಿ ವಾಸಮಾಡುವ ಹಾಗೂ ಕ್ಷೇತ್ರದ ಜನರ ಸೇವೆ ಮಾಡುವ ಅಪೂರ್ವ ಅವಕಾಶ ಸಿಕ್ಕಿದೆ’ ಎಂದು ಅವರು ಹೇಳಿದರು.

ಬಿಜೆಪಿಗೆ ದ್ರೋಹ ಬಗೆಯಲ್ಲ ಎಂದ ಸುರೇಶ್

HK Suresh : ನಾನು ಅಡ್ಡ ಮತದಾನ ಮಾಡಿಲ್ಲವೆಂದು 3 ಬಾರಿ ಉಚ್ಚರಿಸಿದ ಬಿಜೆಪಿ MLA ಸುರೇಶ್|#TV9D
ದೇವಾಲಯದ ಆವರಣದ ಎದುರಿನ ಬಲಿಕಲ್ಲು (ಕರಿಕಲ್ಲು) ಮುಟ್ಟಿ ಪ್ರಮಾಣ ಮಾಡಿದ ಶಾಸಕರು, ‘ಈ ಕರಿಕಲ್ಲೇ ಸಾಕ್ಷಿ, ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೇ ಅಡ್ಡಮತದಾನ ಮಾಡಿಲ್ಲ’ ಎಂದು ಮೂರು ಬಾರಿ ಗಟ್ಟಿಯಾಗಿ ಉಚ್ಚರಿಸಿದರು. ಅಷ್ಟೇ ಅಲ್ಲದೆ, ‘ನಾನು ನನ್ನ ಜೀವವಿರುವವರೆಗೂ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ದ್ರೋಹ ಮಾಡಿಲ್ಲ’ ಎಂದು ಮೂರು ಬಾರಿ ಪುನರುಚ್ಚರಿಸಿದರು.

ಮೋದಿಗೆ ದ್ರೋಹ ಮಾಡಿದ್ರೆ ಭಗವಂತ ಕ್ಷಮಿಸಲ್ಲ: ಸುರೇಶ್

ಆಣೆ ಪ್ರಮಾಣದ ಬಳಿಕ ಮಾತನಾಡಿದ ಶಾಸಕ ಸುರೇಶ್, ‘ನನ್ನ ವಿರುದ್ಧ ಕೇಳಿಬರುತ್ತಿರುವ ಈ ಅಡ್ಡಮತದಾನದ ಅಪಪ್ರಚಾರ ಈ ಕ್ಷೇತ್ರದ ವಿರುದ್ಧ ನಡೆದಿರುವ ದೊಡ್ಡ ಪಿತೂರಿ ಮತ್ತು ಷಡ್ಯಂತ್ರವಾಗಿದೆ. ನಮ್ಮ ಕ್ಷೇತ್ರಕ್ಕೆ ಖುದ್ದಾಗಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಬಂದು ಪ್ರಚಾರ ಮಾಡಿದ್ದರು. ಅಂತಹ ನಾಯಕರಿಗೆ ಹಾಗೂ ಪಕ್ಷಕ್ಕೆ ನಾನು ಅನ್ಯಾಯ ಮಾಡಿದರೆ ಭಗವಂತ ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ. ನಮ್ಮ ಪಕ್ಷದ ವಿರೋಧ ಪಕ್ಷದ ನಾಯಕರು ಸೂಚಿಸಿದಂತೆ ನಾನು ನಿಖರವಾಗಿ ನನ್ನ ಮತ ಚಲಾವಣೆ ಮಾಡಿದ್ದೇನೆ. ಇದಕ್ಕೆ ಆ ಪರಮಾತ್ಮನೇ ಸಾಕ್ಷಿ’ ಎಂದು ಸ್ಪಷ್ಟಪಡಿಸಿದರು.

‘ನನ್ನನ್ನು ಹಣದಿಂದಾಗಲಿ ಅಥವಾ ದೌರ್ಜನ್ಯದಿಂದಾಗಲಿ ಯಾರೂ ಖರೀದಿಸಲು ಸಾಧ್ಯವಿಲ್ಲ. ನನ್ನನ್ನು ಕೇವಲ ಜನರ ಪ್ರೀತಿಯಿಂದ ಮಾತ್ರ ಖರೀದಿಸಲು ಸಾಧ್ಯ. ಇಷ್ಟು ಜನರ ಪ್ರೀತಿಯೇ ನನಗೆ ಶ್ರೀರಕ್ಷೆ. ನನ್ನ ವಿರುದ್ಧ ನಡೆದಿರುವ ಈ ಪಿತೂರಿಯ ಹಿಂದಿನ ಷಡ್ಯಂತ್ರವನ್ನು ಆ ಭಗವಂತನೇ ಎಲ್ಲರಿಗೂ ತಿಳಿಸಲಿ ಎಂಬ ಕಾರಣಕ್ಕೆ ನಾನು ಈ ಆಣೆ ಪ್ರಮಾಣ ಮಾಡಿದ್ದೇನೆ’ ಎಂದು ಶಾಸಕ ಎಚ್.ಕೆ. ಸುರೇಶ್ ಆಕ್ರೋಶ ಮತ್ತು ಬೇಸರವನ್ನು ಹೊರಹಾಕಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us