ಆಗ ಸುಮ್ಮನಿದ್ದ ಕಾಂಗ್ರೆಸ್ ನಾಯಕರಿಗೆ ಈಗೇಕೆ ಉತ್ಸಾಹ, ಮೇಕೆದಾಟು ಇವರಿಗೆ ವ್ಯಾಪಾರ: ಕಾಂಗ್ರೆಸ್, ಬಿಜೆಪಿ ವಿರುದ್ಧ ರೇವಣ್ಣ ವಾಗ್ದಾಳಿ

ಕೃಷ್ಣಾ ನದಿ ಕೊಳ್ಳದ ಕಾಮಗಾರಿಗಳಲ್ಲಿ ವ್ಯಾಪಾರ ಮುಗಿಸಿ ಈಗ ಮೇಕೆದಾಟಲ್ಲಿ ವ್ಯಾಪಾರ ಮಾಡೋಕೆ ಹೊರಟಿದ್ದಾರೆ ಎಂದು ರೇವಣ್ಣ ವಾಗ್ದಾಳಿ ನಡೆಸಿದರು.

ಆಗ ಸುಮ್ಮನಿದ್ದ ಕಾಂಗ್ರೆಸ್ ನಾಯಕರಿಗೆ ಈಗೇಕೆ ಉತ್ಸಾಹ, ಮೇಕೆದಾಟು ಇವರಿಗೆ ವ್ಯಾಪಾರ: ಕಾಂಗ್ರೆಸ್, ಬಿಜೆಪಿ ವಿರುದ್ಧ ರೇವಣ್ಣ ವಾಗ್ದಾಳಿ
ಜೆಡಿಎಸ್ ಶಾಸಕ ಎಚ್​. ಡಿ. ರೇವಣ್ಣ
Edited By:

Updated on: Dec 27, 2021 | 8:05 PM

ಹಾಸನ: ಕರ್ನಾಟಕದಲ್ಲಿ ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇವರೇ ನೀರಾವರಿ ಸಚಿವರಾಗಿದ್ದರು. ಆಗ ಯಾಕೆ ಮೇಕೆದಾಟು ಯೋಜನೆ ಮಾಡಿಸಲಿಲ್ಲ. ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಈ ಯೋಜನೆ ಜಾರಿ ಮಾಡಬಹುದು ಎಂದು ಆಗ ಏಕೆ ಇವರಿಗೆ ಅನ್ನಿಸಲಿಲ್ಲ. ಇವರಿಗೆ ಈಗ ಮೇಕದಾಟು ಬಗ್ಗೆ ಉತ್ಸಾಹ ಬಂದಿದೆ. ಜನ ಇವರಿಗೆ ಐವತ್ತು ಮೇಕೆ ತಂದು ಕೊಡೋದು ಒಳ್ಳೇದು. ಮುಂದಿನ ಚುನಾವಣೆ ಬರೋವರೆಗೆ ಮೇಕೆ‌ ಜೊತೆ ಇರಿ ಎಂದು ಹೇಳಬೇಕು ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೇ, ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ 19 ತಿಂಗಳು ಕುಮಾರಸ್ವಾಮಿ ಅಧಿಕಾರ ಮಾಡಿದ್ದರು. ಆಗ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡಿಗೆ ಜೋಡೆತ್ತು ಎಂದು ಹೇಳುತ್ತಿದ್ದರು. ಈಗ ಇದರಲ್ಲಿ ಒಂದು ಎತ್ತು ಮೇಕೆದಾಟು ಕಡೆಗೆ ಹೋಗಿದೆ. ನಾವು ಏನು ಮಾಡೋಣ ಸ್ವಾಮಿ ಎಂದು ರೇವಣ್ಣ ಪ್ರಶ್ನಿಸಿದರು. ಕುಮಾರಸ್ವಾಮಿ ಎಲ್ಲರನ್ನು ನಂಬುತ್ತಾರೆ, ಪಾಪ ಹೃದಯವಂತರು ಅವರು. ನಮ್ಮ ಹತ್ತಿರ ಬಂದರೆ ಯಾವುದು ಒದೆಯುತ್ತವೆ ಗೊತ್ತಾಗುತ್ತದೆ. ಕುಮಾರಣ್ಣ ಏನ್ಮಾಡ್ತಾರೆ ಒದೆಯುವುದಕ್ಕೂ ಮೇವು ಹಾಕ್ತಾರೆ. ಆಮೇಲೆ ಅವು ಮೇವು ತಿಂದು ಒದಿತವೆ ಎಂದು ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಟೀಕಿಸಿದರು.

ಕೃಷ್ಣಾ ನದಿ ಕೊಳ್ಳದ ಕಾಮಗಾರಿಗಳಲ್ಲಿ ವ್ಯಾಪಾರ ಮುಗಿಸಿ ಈಗ ಮೇಕೆದಾಟಲ್ಲಿ ವ್ಯಾಪಾರ ಮಾಡೋಕೆ ಹೊರಟಿದ್ದಾರೆ. ರಾಜ್ಯದ ಜನರು ಇವರ ಉದ್ದೇಶಗಳ ಬಗ್ಗೆ ತಿಳಿಯಬೇಕು. ಈ ರಾಷ್ಟ್ರೀಯ ಪಕ್ಷಗಳು ಸುಳ್ಳು ಹೇಳುತ್ತಿವೆ. ಜನರು ಬೀದಿಪಾಲಾಗಿದ್ದಾರೆ, ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದಾರೆ. ಎಷ್ಟು ದಿನ ಸುಳ್ಳು ಹೇಳ್ತೀರಾ ಜನ ನೋಡ್ತಾರೆ, ತಿರುಗಿ ಬೀಳೋ ಕಾಲ ಬರುತ್ತೆ ಎಂದು ಎಚ್ಚರಿಕೆ ನೀಡಿದರು.

ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮಂಜೂರಾತಿ ಮಾಡಿಸಿರುವ ಬಗ್ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಪತ್ರಿಕಾ ಹೇಳಿಕೆ ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ಈ ಬಗ್ಗೆ ಮೈಸೂರು ಸಂಸದರು ದಾಖಲೆಗಳನ್ನು ಮತ್ತೊಮ್ಮೆ ನೋಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಬೆಂಗಳೂರು-ಮೈಸೂರು ರಸ್ತೆಗೆ ಏನು ಮಾಡಿದಿನಿ ನೋಡಲಿ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬಗ್ಗೆ ನನಗೆ ಗೌರವ ಇದೆ, ಅವರು ಕರ್ನಾಟಕಕ್ಕೆ ಅವರದೇ ಆದ ಕೊಡುಗೆ ಕೊಟ್ಟಿದ್ದಾರೆ. ಅಂದು ನಾನು ಎಲ್ಲಾ ಅದಿಕಾರಿಗಳ ಸಭೆಗಳನ್ನು ನಡೆಸಿ, ಬಹುತೇಕ ಕೆಲಸ ಮಾಡಿಸಿದ್ದೆ. ಹಾಸನ-ಮೈಸೂರು ರಸ್ತೆಗೆ ಅಂದು ಗಡ್ಕರಿ ಅವರೇ ಅಡಿಗಲ್ಲು ಹಾಕಿದ್ದರು. ಆದರೆ ಈ ಯೋಜನೆಗೆ ಮೀಸಲಿಟ್ಟಿದ್ದ ಹಣವನ್ನು ಯಡಿಯೂರಪ್ಪ ಮತ್ತು ಕಾರಜೊಳ ಬೇರೆಡೆಗೆ ಹಾಕಿಸಿಕೊಂಡಿದ್ದರು. ಈಗ ಈ ಕೆಲಸವನ್ನು ಮತ್ತೆ ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ಕೊವಿಡ್ ನಿಯಂತ್ರಣಕ್ಕೆ ನೈಟ್​ ಕರ್ಫ್ಯೂ ಹೇರಿದರೆ ಸಾಲದು. ಅದರ ಜೊತೆಗೆ ತಜ್ಞರ ಅಭಿಪ್ರಾಯ ಪಡೆದು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಜನರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ನೈಟ್​ ಕರ್ಫ್ಯೂ ಜೊತೆಗೆ ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ನೀಡಿ. ಕೊರೊನಾ 3ನೇ ಅಲೆ ಬಂದರೆ ಎದುರಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿ ಒತ್ತಾಯಿಸಿ ಜನವರಿ 9ರಂದು ಪಾದಯಾತ್ರೆ : ಪ್ರಕಟಣೆ ಹೊರಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​
ಇದನ್ನೂ ಓದಿ: Mekedatu Project: ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರೂ ಮೇಕೆದಾಟು ಯೋಜನೆಗೆ ಎದುರಾಗಿರುವ ಅಡೆತಡೆಗಳು ಏನು?

Web contact

TV9 Kannada

Read More
Follow Us