
ಹಾಸನ/ಹಾವೇರಿ ಅಕ್ಟೋಬರ್ 24: ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರದ ಮಾರಹಳ್ಳಿ ಗ್ರಾಮದ ಬಳಿ ನಡೆದಿದೆ. ಮಗನನ್ನು ಗುರುವಾಯಿನಕೆರೆಯಲ್ಲಿರುವ ನವೋದಯ ಶಾಲೆಗೆ ಬಿಡಲು ಪತ್ನಿ ಮತ್ತು ಇಬ್ಬರ ಮಕ್ಕಳ ಜೊತೆ ಶಿವಮೊಗ್ಗ ಮೂಲದ ಗೋವಿಂದನಾಯ್ಕ್ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿದ್ದು, ಮಾರನಹಳ್ಳಿ ಬಳಿ ತಡೆಗೋಡೆಯಿಲ್ಲದೆ ಕಾರಣ 80 ಅಡಿ ಆಳಕ್ಕೆ ಬಿದ್ದಿದೆ. ಕಾರು ಬಿದ್ದಿದ್ದನ್ನು ಕಂಡ ಸ್ಥಳೀಯರು ಹಾಗೂ ವಾಹನ ಸವಾರರು ಕೂಡಲೇ ರಕ್ಷಣೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿರಂತರ ಮಳೆಗೆ ಮನೆ ಗೋಡೆ ಕುಸಿದ ಪರಿಣಾಮ ವೃದ್ಧೆ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮತ್ತಿಗೋಡು ಗ್ರಾಮದಲ್ಲಿ ನಡೆದಿದೆ. ಜವರಮ್ಮ(63) ದುರ್ಮರಣ ಹೊಂದಿದವರಾಗಿದ್ದು, ಮನೆಯಲ್ಲಿ ಮಲಗಿದ್ದಾಗ ವೃದ್ಧೆ ಮೇಲೆ ಗೋಡೆ ಕುಸಿದಿದೆ. ಈ ವೇಳೆ ಮೃತ ಜವರಮ್ಮನ ಮಗ ಕೋದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಎ.ಮಂಜು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಹಿಳೆಯ ಮೃತದೇಹವನ್ನ ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ: ಕೃತಿಕಾ ರೆಡ್ಡಿ ಕೊಲೆ ಬಳಿಕ ಆರೋಪಿ ಮಹೇಂದ್ರ ರೆಡ್ಡಿ ಮಾಡಿದ್ದೇನು ಗೊತ್ತಾ?
ಆಟವಾಡುವ ವೇಳೆ ಆಯತಪ್ಪಿ ನೀರಿನ ಬಕೆಟ್ಗೆ ಬಿದ್ದ ಪರಿಣಾಮ ಒಂದು ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಹಾವೇರಿಯ ಶಿವಬಸವ ನಗರದಲ್ಲಿ ನಡೆದಿದೆ. ದಕ್ಷಿತ್ ಯಳಂಬಲ್ಲಿಮಠ ಮೃತ ಮಗುವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಲೆಕೆಳಗಾಗಿ ಬಕೆಟ್ನನಲ್ಲಿ ಬಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾದರೂ ಷಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:01 pm, Fri, 24 October 25