ಹಾಸನದಲ್ಲಿ ಹೆಚ್ಚಾದ ಡೆಂಗ್ಯೂ ಕೇಸ್; ಮೂರು ಮಕ್ಕಳ ಸಾವು, 8 ಮಕ್ಕಳ ಸ್ಥಿತಿ ಗಂಭೀರ

ಹಾಸನದಲ್ಲಿ ಹಚ್ಚಾಗಿ ಮಕ್ಕಳಲ್ಲಿ ಡೆಂಗ್ಯೂ ಪತ್ತೆಯಾಗುತ್ತಿದೆ. ಈಗಾಗಲೇ ಮೂರು ಮಕ್ಕಳು ಮೃತಪಟ್ಟಿದ್ದು 11 ಮಕ್ಕಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಘೂ 8 ಮಕ್ಕಳ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಂಸದರು ಸಭೆ ನಡೆಸುತ್ತಿದ್ದು ಚರ್ಚೆ ನಡೆಯುತ್ತಿದೆ.

ಹಾಸನದಲ್ಲಿ ಹೆಚ್ಚಾದ ಡೆಂಗ್ಯೂ ಕೇಸ್; ಮೂರು ಮಕ್ಕಳ ಸಾವು, 8 ಮಕ್ಕಳ ಸ್ಥಿತಿ ಗಂಭೀರ
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: Jul 04, 2024 | 1:25 PM

ಹಾಸನ, ಜುಲೈ.04: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು (Dengue Cases) ಹೆಚ್ಚಾಗಿವೆ. ಅದರಲ್ಲೂ ಹಾಸನ (Hassan) ಜಿಲ್ಲೆಯಲ್ಲಿ ಮಹಾಮಾರಿ ಡೆಂಗ್ಯೂ ಹೆಚ್ಚಾಗಿ ಮಕ್ಕಳಲ್ಲೇ ಪತ್ತೆಯಾಗುತ್ತಿದೆ. ಒಂದೇ ವಾರದಲ್ಲಿ 15 ವರ್ಷದೊಳಗಿನ ಮೂರು ಹೆಣ್ಣು ಮಕ್ಕಳು ಡೆಂಗ್ಯೂಗೆ ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲೂ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಹಿಮ್ಸ್​ನಲ್ಲಿ ಚಿಕಿತ್ಸೆಗೆ ದಾಖಲಾಗಿರುವ 48 ಮಂದಿಯಲ್ಲಿ 11 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತಾಲೂಕು ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ಜಿಲ್ಲಾಸ್ಪತ್ರೆಗೆ ರೋಗ ಪೀಡಿತರು ಬರುತ್ತಿದ್ದಾರೆ. ಕಳೆದ ಜನವರಿಯಿಂದ ಈವರೆಗೆ 628 ವಯಸ್ಕರು ಹಾಗು 602 ಡೆಂಗ್ಯೂ ಪೀಡಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಒಳರೋಗಿಗಳಾಗಿ ದಾಖಲಿಸಿ ಹಿಮ್ಸ್ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈವರೆಗೆ ಒಟ್ಟು ನಾಲ್ವರು ಡೆಂಗ್ಯೂಗೆ ಬಲಿಯಾಗಿದ್ದಾರೆ. ರಾಜ್ಯ ಡೆಂಗ್ಯೂ ಡೆತ್ ಆಡಿಟ್ ಸಮಿತಿ ಎರಡು ಸಾವುಗಳನ್ನ ದೃಡಪಡಿಸಿದೆ. ಇದುವರೆಗೆ ಜಿಲ್ಲೆಯಲ್ಲಿ 6,400 ಜನರಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಡೆಂಗ್ಯೂ ನಿಯಂತ್ರಕ್ಕೆ ಹಲವು ಕ್ರಮ ಕೈಗೊಂಡ ಬಗ್ಗೆ ಹಿಮ್ಸ್ ನಿರ್ದೇಶಕ ಡಾ ಸಂತೋಷ್ ಹಾಗು ಹಿಮ್ಸ್ ಸ್ಥಾನಿಕ ವೈದ್ಯಾಧಿಕಾರಿ ಡಾ ಪ್ರವೀಣ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮುಡಾ ಅಕ್ರಮ: ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಹೇಳಿದ್ದಿಷ್ಟು

ಇನ್ನು ಡೆಂಗ್ಯೂ ನಿಯಂತ್ರಣ ಸಂಬಂಧ ಚರ್ಚೆ ನಡೆಸಲು ಸಂಸದ ಶ್ರೇಯಸ್ ಪಾಟೇಲ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಹಾಸನದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಕರೆದಿದ್ದು ಹಾಸನದ ಹಿಮ್ಸ್​ನಲ್ಲಿ ಡೆಂಗ್ಯೂ ಪೀಡಿತ ಎಂಟು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಸಂಸದರ ಸಭೆಯಲ್ಲಿ ಹಿಮ್ಸ್​ನ ಮಕ್ಕಳ ತಜ್ಞ ಡಾ ಮನುಪ್ರಕಾಶ್ ಮಾಹಿತಿ ನೀಡಿದ್ದಾರೆ. ಹಿಮ್ಸ್​ನಲ್ಲಿ 60 ಬೆಡ್​ನ ಮಕ್ಕಳ ಐಸಿಯು ಇದೆ. ನರ್ಸಿಂಗ್ ಸ್ಟಾಫ್ ಕಡಿಮೆ ಇದೆ. ಮಕ್ಕಳ 107 ಬೆಡ್​ಗಳ ಪೈಕಿ 100 ಬೆಡ್ ಭರ್ತಿಯಾಗಿದೆ ಎಂದು ಹಾಸನದ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಚರ್ಚಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Manjunath KB
Follow Us