AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಭೂಮಿಯ ಹಕ್ಕು ಪತ್ರಕ್ಕಾಗಿ ನೂರಾರು ರೈತ ಕುಟುಂಬಗಳಿಂದ ಧರಣಿ; ತಹಶೀಲ್ದಾರ್ ಕಚೇರಿ ಎದುರು ಆಕ್ರೋಶ

ಕಳೆದ ಐವತ್ತು ವರ್ಷಗಳಿಂದ ಇದೇ ಭೂಮಿಯಲ್ಲಿ ನೆಲೆಸಿರೋ ಸಕಲೇಶಪುರ ತಾಲೂಕಿನ ಹಾದಿಗೆ ಹಾಗು ಮದನಾಪುರ ಗ್ರಾಮದ ಕುಟುಂಬಗಳಿಗೆ ಈಗ ಏಕಾ ಏಕಿ ತೆರವು ಗೊಳಿಸಲು ನೊಟೀಸ್ ನೀಡಿದ್ದಕ್ಕೆ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.

ಹಾಸನದಲ್ಲಿ ಭೂಮಿಯ ಹಕ್ಕು ಪತ್ರಕ್ಕಾಗಿ ನೂರಾರು ರೈತ ಕುಟುಂಬಗಳಿಂದ ಧರಣಿ; ತಹಶೀಲ್ದಾರ್ ಕಚೇರಿ ಎದುರು ಆಕ್ರೋಶ
ಹಾಸನದಲ್ಲಿ ಭೂಮಿಯ ಹಕ್ಕು ಪತ್ರಕ್ಕಾಗಿ ನೂರಾರು ರೈತ ಕುಟುಂಬಗಳಿಂದ ಧರಣಿ; ತಹಶೀಲ್ದಾರ್ ಕಚೇರಿ ಎದುರು ಆಕ್ರೋಶ
TV9 Web
| Edited By: |

Updated on:Mar 14, 2022 | 6:22 PM

Share

ಹಾಸನ: ಭೂಮಿಯ ಹಕ್ಕು ಪತ್ರಕ್ಕಾಗಿ ನೂರಾರು ರೈತ ಕುಟುಂಬಗಳು ಹೋರಾಟಕ್ಕೆ ಇಳಿದಿವೆ. ಸಕಲೇಶಪುರ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಐವತ್ತು ವರ್ಷಗಳಿಂದ ಸ್ವಾಧೀನದಲ್ಲಿರೋ ಭೂಮಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿದ್ದಾರೆ.

ಸಕಲೇಶಪುರ ತಾಲೂಕು ಹಾನಬಾಳು ಹೋಬಳಿಯ ಮದನಾಪುರ ಮತ್ತು ಹಾದಿಗೆ ಗ್ರಾಮಗಳಲ್ಲಿ ಉಳುಮೆ ಮಾಡಿ, ಮನೆಗಳನ್ನು ಕಟ್ಟಿಕೊಂಡಿರುವ ಸರ್ಕಾರಿ ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮ ಮಾಡಿಕೊಡುವಂತೆ ಕೋರಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಿದ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಕಲೇಶಪುರ ತಾಲೂಕಿನ ಹಾನಬಾಳು ಹೋಬಳಿಯ ಮದನಾಪುರ ಗ್ರಾಮದ ಸರ್ವೆ ನಂಬರ್ 1 ಮತ್ತು 61 ರಿಂದ 68 ಮತ್ತು ಹಾದಿಗೆ ಗ್ರಾಮದ ಸರ್ವೆ ನಂಬರ್ 114, 115, 123 ರಲ್ಲಿ ಕಳೆದ 50 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ನೂರಾರು ಕುಟುಂಬಗಳು ಭೂ ಸ್ವಾಧಿನಾನುಭವದಲ್ಲಿದ್ದು, ಈ ಭೂಮಿಯನ್ನು ಸಕ್ರಮಮಾಡಿಕೊಡಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದದಲ್ಲಿ ನೂರಾರು ಸಂಖ್ಯೆಯ ರೈತರು ಮತ್ತು ಕೂಲಿಕಾರರು ಸಕಲೇಶಪುರ ತಹಸಿಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಭೂಮಿಯನ್ನು ಸಕ್ರಮ ಮಾಡಿಕೊಡುವಂತೆ ಕೋರಿ ಸರ್ಕಾರದ ಅಧಿಕೃತ ಅರ್ಜಿ ನಮೂನೆ 50, 53, 57 ರಲ್ಲಿ ಅಕ್ರಮ ಸಕ್ರಮಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದು. ಈ ಭೂಮಿಗೆ ಸಂಬದಿಸಿದಂತೆ ಕಂದಾಯ ಇಲಾಖೆಯಿಂದ ಹಕ್ಕು ಪತ್ರವನ್ನೂ ಕೂಡ ಕೆಲವರಿಗೆ ವಿತರಿಸಲಾಗಿದೆ. ಕೆಲವರಿಗೆ ಪಹಣಿಯಲ್ಲಿ ಹೆಸರೂ ಕೂಡಾ ಬರುತ್ತಿದೆ. ಈ ಭೂಮಿಯಲ್ಲಿ ಕಾಫಿ, ಕರಿಮೆಣಸಿನ ಗಿಡಗಳನ್ನು ಬೆಳೆದುಕೊಂಡು ಎಲ್ಲಾ ಕುಟುಂಬಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗು ಇದೇ ಭೂಮಿಯಲ್ಲಿ ವಾಸಕ್ಕೆ ಯೋಗ್ಯವಾದ ಮನೆಗಳನ್ನೂ ಕಟ್ಟಿಕೊಂಡು ಇದರ ಸಕ್ರಮಕ್ಕಾಗಿ ಸರ್ಕಾರದ ಅಧಿಕೃತ ಅರ್ಜಿ ನಮೂನೆ 94ಸಿ / 94ಸಿಸಿ ಅಡಿಯಲ್ಲಿ ಅರ್ಜಿಯನ್ನೂ ಸಲ್ಲಿಸಿ ಹಕ್ಕು ಪತ್ರವನ್ನೂ ಪಡೆದಿರುತ್ತಾರೆ. ಆದರೆ ಈಗ ಅರಣ್ಯ ಇಲಾಖೆಯವರು ಈ ಜಾಗ ಅರಣ್ಯ ಇಲಾಖೆಗೆ ಸಂಬಂಧಿಸಿದ್ದು ಎಂದು ನೋಟಿಸ್ ಜಾರಿಗೊಳಿಸಿರುತ್ತಾರೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅದ್ಯಕ್ಷರಾದ ಎಚ್.ಆರ್. ನವೀನ್ ಕುಮಾರ್ ಮಾತನಾಡಿದ್ದು, ಜೀವನ ನಿರ್ವಹಣೆಗಾಗಿ ಭೂಮಿಯನ್ನು ಸಾಗುವಳಿ ಮಾಡಿ ಕೃಷಿ ಮಾಡುತ್ತಾ ಬರುತ್ತಿರುವ ಬಡ ರೈತರಿಗೆ ಭೂಮಿಯನ್ನು ಸಕ್ರಮ ಮಾಡಿಕೊಡುವ ಬದಲಿಗೆ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವ ನೀತಿಗಳನ್ನು ರಾಜ್ಯ ಸರ್ಕಾರ ಅರಣ್ಯ ಮತ್ತು ಕಂದಾಯ ಇಲಾಖೆಯ ಮೂಲಕ ಮಾಡಿಸುತ್ತಿದೆ. ಇದು ರೈತ ವಿರೋಧಿ ಕ್ರಮವಾಗಿದ್ದು ಕೂಡಲೇ ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮ ಮಾಡಿಕೊಡಬೇಕು ಎಂದರು.

ವರದಿ: ಮಂಜುನಾಥ್ ಕೆಬಿ, ಟಿವಿ9 ಹಾಸನ

ಇದನ್ನೂ ಓದಿ: ‘ಆ ಹಿಂದಿ ಸಿನಿಮಾ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ’; ಕನ್ನಡ ಚಿತ್ರಕ್ಕೆ ಸ್ಕ್ರೀನ್ ಸಿಗದೇ ನೋವು ಹೊರಹಾಕಿದ ನಿರ್ದೇಶಕ

ಸಚಿವ ಸೋಮಶೇಖರ್ ಈಗ ಸಿನಿಮಾ ನಟ; ಬಿಸಿ ಪಾಟೀಲ ನಿರ್ಮಾಣದ ಚಿತ್ರದಲ್ಲಿ ಅವರಿಗೂ ಒಂದು ಪಾತ್ರ!

Published On - 6:17 pm, Mon, 14 March 22