ಹೊಳೆನರಸೀಪುರ ತಾಲೂಕು ಕಚೇರಿಯಲ್ಲಿ ರೈತರ ಕಡತ ನಾಪತ್ತೆ: ತಹಸೀಲ್ದಾರ್‌ಗೆ ದೂರು ನೀಡಿದ ಗ್ರಾಮಸ್ಥರು

| Updated By: ಗಂಗಾಧರ​ ಬ. ಸಾಬೋಜಿ

Updated on: May 17, 2022 | 10:30 AM

ಕಲ್ಲು ಗಣಿಗಾರಿಕೆ ಮಾಲೀಕರು ನಮ್ಮ ಜಮೀನು ಒತ್ತುವರಿ ಮಾಡಿದ್ದಾರೆ. ಕೇವಲ ಎರಡು ತಿಂಗಳಿನಲ್ಲಿ ಗಣಿಗಾರಿಕೆ ನಡೆಸುವವರಿಗೆ ಜಮೀನು ಖಾತೆ ಮಾಡಿ ಕೊಟ್ಟಿದ್ದಾರೆ. ನಮ್ಮ ಹೆಸರಿಗೆ ಖಾತೆ ಮಾಡಿಸಲು ದಾಖಲೆ ಕೇಳಿದರೆ ಕಡತ ಇಲ್ಲ ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹೊಳೆನರಸೀಪುರ ತಾಲೂಕು ಕಚೇರಿಯಲ್ಲಿ ರೈತರ ಕಡತ ನಾಪತ್ತೆ: ತಹಸೀಲ್ದಾರ್‌ಗೆ ದೂರು ನೀಡಿದ ಗ್ರಾಮಸ್ಥರು
ರೈತರ ಕಡತ ನಾಪತ್ತೆ
Follow us on

ಹಾಸನ : ತಾಲ್ಲೂಕು ಕಚೇರಿಯಲ್ಲೇ ರೈತರ ಕಡತಗಳು ನಾಪತ್ತೆಯಾಗಿದ್ದು, ನಾಲ್ವರು ಸಿಬ್ಬಂದಿಗೆ ಜಿಲ್ಲೆಯ ಹೊಳೆನರಸೀಪುರ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ಕಲ್ಲೋರೆ ಬೋರೆ ಕಾವಲ್ ಗ್ರಾಮದ ಸರ್ವೆ ನಂ.1 ರ ಮಂಜೂರಾತಿ ಕಡತಗಳು ನಾಪತ್ತೆಯಾಗಿವೆ. ದ್ವಿತೀಯ ದರ್ಜೆ ಸಹಾಯಕರುಗಳಾದ ಎಂ.ಜಿ.ಸತೀಶ್‌ಕುಮಾರ್, ಮಾದಯ್ಯ.ಡಿ, ರಂಗರಾಜು, ರವಿ ಎಂಬುವವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ತಾಲ್ಲೂಕಿನ ಸಿ.ಹಿಂದಲಹಳ್ಳಿ ಗ್ರಾಮಸ್ಥರು ದಾಖಲೆ ಕೇಳಿದಾಗ ಪ್ರಕರಣ ಬಯಲಾಗಿದೆ. 80 ವರ್ಷದಿಂದ ಸರ್ಕಾರಿ ಜಮೀನು ಉಳುಮೆ ಮಾಡುತ್ತಿದ್ದ ಗ್ರಾಮಸ್ಥರು, ದರಕಾಸ್ತಿನಲ್ಲಿ ಜಮೀನು ಖಾತೆಗಾಗಿ 65 ಕುಟಂಬಗಳು ದಾಖಲೆ‌ ಕೇಳಿದ್ದಾರೆ. ಮೇ.5 ರಂದು ಸಾಗುವಳಿ ಪತ್ರ, ಮಂಜೂರಾತಿ ಪತ್ರದ ನಕಲುಗಳನ್ನು ನೀಡಿದ್ದ ತಾಲ್ಲೂಕು ಕಚೇರಿ ಸಿಬ್ಬಂದಿ, ಮೇ.9 ರಂದು ಬಾಂಡ್ ಪೇಪರ್, ಮ್ಯೂಟೇಷನ್ ನೀಡುವುದಾಗಿ ಹೇಳಿದ್ದರು. ಕಛೇರಿಗೆ ಬಂದು ದಾಖಲೆ ಕೇಳಿದಾಗ ಕಡತ ಕಳೆದು ಹೋಗಿದೆ ಎಂದು ಗ್ರಾಮ ಸಹಾಯಕರು ಹೇಳಿದ್ದು, ತಕ್ಷಣ ಗ್ರಾಮಸ್ಥರು ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ.

ಕಲ್ಲು ಗಣಿಗಾರಿಕೆ ಮಾಲೀಕರು ನಮ್ಮ ಜಮೀನು ಒತ್ತುವರಿ ಮಾಡಿದ್ದಾರೆ. ಕೇವಲ ಎರಡು ತಿಂಗಳಿನಲ್ಲಿ ಗಣಿಗಾರಿಕೆ ನಡೆಸುವವರಿಗೆ ಜಮೀನು ಖಾತೆ ಮಾಡಿ ಕೊಟ್ಟಿದ್ದಾರೆ. ನಮ್ಮ ಹೆಸರಿಗೆ ಖಾತೆ ಮಾಡಿಸಲು ದಾಖಲೆ ಕೇಳಿದರೆ ಕಡತ ಇಲ್ಲ ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಸಿ.ಹಿಂದಲಹಳ್ಳಿ ಗ್ರಾಮಸ್ಥರು, ಕಲ್ಲು ಗಣಿಗಾರಿಕೆ ನಡೆಸುವವರಿಗೆ ಅನುಕೂಲ ಮಾಡಿ ಕೊಡಲು ಅಧಿಕಾರಿಗಳಿಂದ ಅಕ್ರಮ ಎಂದು ಗ್ರಾಮಸ್ಥರ ಆರೋಪ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.