ಇತ್ತ ಬೇಲೂರು ಚೆನ್ನಕೇಶವ ದೇಗುಲದ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಐಕ್ಯತೆಯಿಂದ ಬದುಕುತ್ತಿದ್ದಾರೆ. ಹಿಂದೂ ಬೇರೆಯಲ್ಲ, ಮುಸ್ಲಿಂ ಬೇರೆಯಲ್ಲ. ಮುಸ್ಲಿಂರಿಗೆ ಬೇರೆ ರೀತಿ ಅಡ್ಡಿಪಡಿಸಿದ್ರೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ. ಅಣ್ಣ ತಮ್ಮಂದಿರು ಹಾಗೇ ಹೋಗಬೇಕು. ಯಾರೋ ನಾಲ್ಕು ಜನ ಕೇಸರಿ ಶಾಲು ಹಾಕಿಕೊಂಡು ಬಂದ್ರೆ ಕೇರ್ ಮಾಡಲ್ಲ. ಎಲ್ಲಾ ಸಮಾಜದವರು ಒಟ್ಟಾಗಿ ಸಾಮರಸ್ಯದಿಂದ ಬದುಕಬೇಕು. ಸಾಬ್ರಾಗಿ ಹುಟ್ಟಿ ಜೀವನ ಮಾಡಬೇಡಿ ಅನ್ನೋಕೆ ಆಗುತ್ತಾ. ಬೇಲೂರು, ಹೊಳೆನರಸೀಪುರ ಇರಲಿ ಎಲ್ಲಿಯೂ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಬಾರದು. ಹಿಂದೂ, ಮುಸ್ಲಿಂ ಭಾವೈಕ್ಯತೆಯಿಂದ ಬದುಕಬೇಕು ಎಂದು ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧದ ಬಗ್ಗೆ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧ ವಿಚಾರದಲ್ಲಿ ಕ್ರಮಕ್ಕೆ ಆಗ್ರಹ
ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧ ವಿಚಾರದಲ್ಲಿ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಿಂದೂ ಮುಸ್ಲಿಂ ಎಂದು ಯಾರಾದ್ರು ಅಡೆತಡೆ ಮಾಡಿದ್ರೆ ಯಾವುದೇ ಪಾರ್ಟಿ ಆಗಲಿ ಅವರನ್ನ ಬಲಿಹಾಕಬೇಕಾಗುತ್ತೆ. ಈ ಬಗ್ಗೆ ಎಸ್ಪಿ, ಡಿಸಿ ಇಬ್ಬರೂ ಕ್ರಮ ವಹಿಸಬೇಕು. ಈ ಜಿಲ್ಲೆಯಲ್ಲಿ ಹಿಂದೂ ಬೇರೆಯಲ್ಲ ಮುಸ್ಲಿಂ ಬೇರೆಯಲ್ಲ ಎಲ್ಲರೂ ಐಕ್ಯತೆಯಿಂದ ಇದ್ದೇವೆ. ಒಂದು ಸಮಾಜ ಗುರಿ ಇಟ್ಟು ಕೊಂಡು ಹೋಗೋದಕ್ಕೆ ನನ್ನ ವಿರೋಧ ಇದೆ. ಹಿಂದು ಇರಲಿ ಮುಸ್ಲಿಂ ಇರಲಿ ಈ ಹಿಂದೆ ಹೇಗಿತ್ತೋ ಹಾಗೇ ನಡೆಯಬೇಕು. ಯಾರಾದ್ರು ಅಡ್ಡಿ ಮಾಡಿದ್ರೆ ಕಾನೂನು ಕೈಗೆತ್ತಿಕೊಳ್ಳೋರ ವಿರುದ್ದ ಕ್ರಮ ಕೈಗೊಳ್ಳಿ. ಸೌಹಾರ್ದ ತೆಗೆ ಧಕ್ಕೆ ಆಗದಂತೆ ಎಲ್ಲರು ನಡೆದುಕೊಳ್ಲಬೇಕು ಎಂದು ರೇವಣ್ಣ ತಿಳಿಸಿದ್ದಾರೆ.
ಈ ರೀತಿಯ ನಿರ್ಬಂಧದ ವಿಚಾರಗಳಿಗೆ ನಮ್ಮ ಸಹಮತ ಇಲ್ಲ. ಜಿಲ್ಲೆಯಲ್ಲಿ ಬೇಲೂರು ಇರಲಿ ಹೊಳೆನರಸೀಪುರ ಇರಲಿ ಇಂತಹದ್ದಕ್ಕೆ ಅವಕಾಶ ಇಲ್ಲ ಎಂದು ಹಿಂದುಯೇತರರಿಗೆ ನಿರ್ಬಂಧ ಹೇರಿಕೆ ವಿರುದ್ದ ರೇವಣ್ಣ ಕಿಡಿಕಾರಿದ್ದಾರೆ.
ಮಕ್ಕಳ ವಿದ್ಯಾಬ್ಯಾಸದ ವಿಚಾರದಲ್ಕೂ ಯಾಕ್ರೀ ರಾಜಕೀಯ ಮಾಡ್ತೀರಾ
ಮಕ್ಕಳ ವಿದ್ಯಾಬ್ಯಾಸದ ವಿಚಾರದಲ್ಕೂ ಯಾಕ್ರೀ ರಾಜಕೀಯ ಮಾಡ್ತೀರಾ. ನಿಮ್ಮ ಮಕ್ಕಳು ಮರಿಗೆ ಒಳ್ಳೆದಾಗುತ್ತೇನ್ರಿ ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ. ನನ್ನ 25 ವರ್ಷದ ರಾಜರಣದಲ್ಲಿ ಇಂತಹ ಸೇಡಿನ ರಾಜಕಾರಣದ ಮಂತ್ರಿಯನ್ನ ನೋಡಿಲ್ಲ. ಕಾಲೇಜಲ್ಲಿ ಉಪನ್ಯಾಸಕರಿಲ್ಲ, ಹೊಸ ಕೋರ್ಸ್ ಕೇಳಿದ್ರೆ ಕೊಡಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಗೌಡ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಆ ದೊರೆಸ್ವಾಮಿ ಮನೆಗೆ ಹೋಗಿ ಸೇರ್ಕೊಳೋಕೆ ಹೇಳಿ ಅವ್ರಿಗೆ. ಉನ್ನತ ಶಿಕ್ಷಣವನ್ನ ಖಾಸಗಿ ಅವರಿಗೆ ಅಡವಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಲ್ಲಿ ಯಾವ ರೀತಿ ನಡೆಯುತ್ತಿದೆ ಎನ್ಮೋದು ಗೊತ್ತಿದೆ. 2023 ಕ್ಕೆ ಏನಾಗುತ್ತೆ ಎನ್ನೋದು ನನಗೆ ಗೊತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಈ ಜಿಲ್ಲೆಗೆ ಹತ್ತು ವರ್ಷ ಏನು ಮಾಡಲಿಲ್ಲ. ನಾನು ಅದಿಕಾರಕ್ಕೆ ಬಂದಾಗ ಏನು ಬೇಕೋ ಮಾಡಲಿಲ್ಲವೇ. ಇಷ್ಟು ಕೆಳಮಟ್ಟದ ರಾಜಕಾರಣ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಿಷನ್ ದಂಧೆ ವಿರುದ್ಧ ಗುತ್ತಿಗೆದಾರರು ಸಿಡಿದೇಳಬೇಕು: ಹೆಚ್.ಡಿ ಕುಮಾರಸ್ವಾಮಿ
ಕಮಿಷನ್ ದಂಧೆ ವಿರುದ್ಧ ಗುತ್ತಿಗೆದಾರರು ಸಿಡಿದೇಳಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲ್ಲವೆಂದು ಹೇಳಲಿ. ಗುತ್ತಿಗೆದಾರರು ಕೆಲಸ ಮಾಡುವುದಿಲ್ಲವೆಂದು ನಿರ್ಧರಿಸಲಿ. ಗುತ್ತಿಗೆದಾರರ ಸಂಘದವರು ಬಿಗಿ ನಿಲುವು ತೆಗೆದುಕೊಳ್ಳಲಿ. ಕಾಮಗಾರಿ ನಡೆಸಿದರೆ ತಾನೇ ಕಮಿಷನ್ ಕೊಡಬೇಕಾಗುತ್ತೆ. ಕಾಮಗಾರಿ ನಿಲ್ಲಿಸಿದರೆ ತನ್ನಿಂತಾನೇ ಕಮಿಷನ್ ದಂಧೆ ನಿಲ್ಲುತ್ತೆ. ಭ್ರಷ್ಟಾಚಾರ ನಿಲ್ಲಬೇಕಾದರೆ ಜನ ಜಾಗೃತರಾಗಬೇಕು ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನಮ್ಮ ತಾಯಿಗೆ ಐಟಿ ನೋಟಿಸ್ ನೀಡಿದ್ದರೆ ತಲೆ ಕೆಡಿಸಿಕೊಳ್ಳಲ್ಲ. ಯಾವಾಗ ಐಟಿ ನೋಟಿಸ್ ನೀಡಿದ್ದಾರೆಂಬ ಐಡಿಯಾ ಇಲ್ಲ. ನಮ್ಮ ಕುಟುಂಬ ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ. ಆದಾಯ ತೆರಿಗೆ ಇಲಾಖೆ ನೋಟಿಸ್ಗೆ ನಾವು ಹೆದರುವುದಿಲ್ಲ. ನಾವು ಪರಿಶುದ್ಧವಾಗಿದ್ದರೆ ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಐಟಿ ನೋಟಿಸ್ ರಾಜಕೀಯವಾಗಿ ಬಳಸಿಕೊಳ್ಳುವ ಅಗತ್ಯವಿಲ್ಲ. ಆದಾಯ ತೆರಿಗೆ ಇಲಾಖೆ ಕೇಳಿರುವ ವಿವರಣೆ ನೀಡಿದರೆ ಆಯ್ತು. ಒಂದು ವೇಳೆ ನಮ್ಮ ಕುಟುಂಬ ಆಸ್ತಿ ವಿವರ ಕೇಳಿದ್ರೆ ನೀಡುತ್ತೇವೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮಗೆ ಐಟಿ ನೋಟಿಸ್ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಐಟಿ ನೋಟಿಸ್ ಸಂಬಂಧ ಶಾಸಕರು ಏನೂ ಮಾತನಾಡದೆ ತೆರಳಿದ್ದಾರೆ. ಪ್ರತಿಕ್ರಿಯೆ ನೀಡದೆ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪುರ್, ಶಿವಲಿಂಗೇಗೌಡ, ಮಂಜುನಾಥ್, ಅನ್ನದಾನಿ ಸೇರಿದಂತೆ ಹಲ ಶಾಸಕರು ತೆರಳಿದ್ದಾರೆ.
ಇದನ್ನೂ ಓದಿ: ಸಂಸದರಾಗಿ ಮಂಡ್ಯಕ್ಕೆ ಸುಮಲತಾರ ಕೊಡುಗೆ ಏನು: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
ಇದನ್ನೂ ಓದಿ: ಎಲ್ಲ ಸಮುದಾಯಗಳ ಮಕ್ಕಳು ತಮ್ಮ ಭಾವನೆಗಳನ್ನು ಬದಿಗಿರಿಸಿ ಪರೀಕ್ಷೆ ಬರೆಯಬೇಕು: ಹೆಚ್ಡಿ ಕುಮಾರಸ್ವಾಮಿ