ಹಾಸನದಲ್ಲಿ ಮುಂದುವರೆದ ಕಾಡಾನೆ ಹಾವಳಿ, ಒಂಟಿ ಸಲಗ ದಾಳಿಗೆ ಮತ್ತೊಂದು ಬಲಿ

ಹಾಸನ ಜಿಲ್ಲೆಯ ತಾಲೂಕಿನ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕವಿತಾ (37) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ನಿನ್ನೆ ಗಂಡನ ಮನೆಯಿಂದ ತಾಯಿ ಮನೆಗೆ ಬಂದಿದ್ದ ಕವಿತಾ ಅವರು, ಇಂದು(ಆ.18) ಬೆಳಿಗ್ಗೆ ಮನೆಯ ಹಿಂಭಾಗ ತೋಟಕ್ಕೆ ತೆರಳಿದ್ದರು. ಈ ವೇಳೆ ಆನೆ ದಾಳಿ ಮಾಡಿದ್ದು, ಇದೀಗ ಮೃತಪಟ್ಟಿದ್ದಾರೆ.

ಹಾಸನದಲ್ಲಿ ಮುಂದುವರೆದ ಕಾಡಾನೆ ಹಾವಳಿ, ಒಂಟಿ ಸಲಗ ದಾಳಿಗೆ ಮತ್ತೊಂದು ಬಲಿ
ಹಾಸನದಲ್ಲಿ ಕಾಡಾನೆ ದಾಳಿಯಿಂದ ಮಹಿಳೆ ಸಾವು
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 18, 2023 | 9:45 AM

ಹಾಸನ, ಆ.18: ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಮಲೆನಾಡು ಭಾಗಗಳಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಅರಣ್ಯ ಇಲಾಖೆಯವರು ಎಷ್ಟೇ ಮುಂಜಾಗೃತ ಕ್ರಮಗಳನ್ನು ಕೈಗೊಂಡರು, ಕಾಡಾನೆ(Elephant) ದಾಳಿಗೆ ಬ್ರೇಕ್​ ಹಾಕಲಾಗುತ್ತಿಲ್ಲ. ಆಗಸ್ಟ್​ 14 ರಂದು ಹಾಸನ (Hassan) ಜಿಲ್ಲೆಯಲ್ಲಿ ಬೈಕ್​ ಸವಾರನ ಮೇಲೆ ಒಂಟಿ ಸಲಗ ದಾಳಿ ಮಾಡಿತ್ತು. ರಾತ್ರಿ ಸಕಲೇಶಪುರ ತಾಲ್ಲೂಕಿನ, ಕಿರೇಹಳ್ಳಿ ಗ್ರಾಮದ ಬಳಿ ಬೈಕ್​ ಚಲಾಯಿಸಿಕೊಂಡು ಹೋಗುತ್ತಿದ್ದ ಚೇತನ್ ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿ,ಬೈಕ್​ನ್ನು ಪುಡಿ ಪುಡಿ ಮಾಡಿತ್ತು. ಅದೃಷ್ಟವಶಾತ್​ ಸವಾರ ಚೇತನ್​ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಅದರ ಬೆನ್ನಲ್ಲೇ ಇದೀಗ ಹಾಸನ ಜಿಲ್ಲೆಯ ತಾಲೂಕಿನ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕವಿತಾ (37) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ತೋಟದ ಬಳಿ ತೆರಳಿದ್ದ ಮಹಿಳೆ ಮೇಲೆ ದಾಳಿ ಮಾಡಿದ್ದ ಕಾಡಾನೆ

ಹೌದು, ನಿನ್ನೆ ಗಂಡನ ಮನೆ ನಾರ್ವೆಯಿಂದ ತಾಯಿ ಮನೆಗೆ ಬಂದಿದ್ದ ಕವಿತಾ ಅವರು, ಇಂದು(ಆ.18) ಬೆಳಿಗ್ಗೆ ಮನೆಯ ಹಿಂಭಾಗ ತೋಟಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿದೆ. ಪ್ರಜ್ಞಾಹೀನವಾಗಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿ ಕೂಡಲೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ವಡೂರು ಗ್ರಾಮದ ಕವಿತಾ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪ್ರತ್ಯೇಕ ಪ್ರಕರಣ: ಮಂಡ್ಯ, ಮೈಸೂರಲ್ಲಿ ಕಾಡಾನೆಗಳ ಉಪಟಳ; ಕೊಡಗಿನಲ್ಲಿ ವಿದ್ಯುತ್ ತಂತಿ​ ತಗುಲಿ ಗಜರಾಜ ಸಾವು ಶಂಕೆ

​ ರಸ್ತೆ ಬಳಿ ಚಿರತೆ ಪ್ರತ್ಯಕ್ಷ; ಮೊಬೈಲ್‌ನಲ್ಲಿ ಸೆರೆ

ಮೈಸೂರು: ಇತ್ತೀಚೆಗೆ ಶಿವಮೊಗ್ಗದದಲ್ಲಿ ಚಿರತೆ ದಾಳಿಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಮೈಸೂರಿನ ಹುಣಸೂರಿನ ಕಲ್ಕುಣಿಕೆ ರಸ್ತೆ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ರಸ್ತೆ ಬದಿ ಚಿರತೆ ಕುಳಿತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನು ಇದರಿಂದ ಸ್ಥಳೀಯ ನಿವಾಸಿಗಳು ಗಾಬರಿಗೊಂಡಿದ್ದು, ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 am, Fri, 18 August 23

Manjunath KB
Follow Us