ಮಾನವ-ಪ್ರಾಣಿ ಸಂಘರ್ಷ: ಹಾಸನದಲ್ಲಿ 80 ಜನ ಸಾವು, 100ಕ್ಕೂ ಅಧಿಕ ಕಾಡಾನೆಗಳು ಮೃತ

| Updated By: ವಿವೇಕ ಬಿರಾದಾರ

Updated on: Oct 18, 2024 | 11:28 AM

ಹಾಸನ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿರುವಂತೆ ಜನರು ಬೆಳೆ ನಷ್ಟದ ಜೊತೆಗೆ ಪ್ರಾಣ ಭಯದಲ್ಲೂ ದಿನ ದೂಡುವಂತಾಗಿದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿರುವ ನಡುವೆ ಕಾಡು ಪ್ರಾಣಿಗಳ ಸರಣಿ ಸಾವುಗಳು ಕೂಡ ಆತಂಕ ಹೆಚ್ಚಿಸಿದೆ.

ಮಾನವ-ಪ್ರಾಣಿ ಸಂಘರ್ಷ: ಹಾಸನದಲ್ಲಿ 80 ಜನ ಸಾವು, 100ಕ್ಕೂ ಅಧಿಕ ಕಾಡಾನೆಗಳು ಮೃತ
ಆನೆ ಸಾವು
Follow us on

ಹಾಸನ, ಅಕ್ಟೋಬರ್​​ 18: ಎರಡು ವಾರಗಳ ಹಿಂದೆ ಅಕ್ಟೋಬರ್ 7ರಂದು ಅರಸೀಕೆರೆ (Arsikere) ತಾಲೂಕಿನಲ್ಲಿ ವಿದ್ಯುತ್ ಶಾಕ್​ನಿಂದ (Current Shock) ಮೂರು ಕರಡಿಗಳು ಮೃತಪಟ್ಟಿದ್ದವು. ಗುರುವಾರ (ಅ.17) ರಂದು ಸಕಲೇಶಫುರ ತಾಲೂಕಿನ ಬಾಳ್ಳುಪೇಟೆ ಬಳಿ ಕರೆಂಟ್ ಶಾಕ್​ಗೆ ಒಂಟಿ ಸಲಗ ಬಲಿಯಾಗಿದೆ. ಕಾಡು ಪ್ರಾಣಿಗಳ ಚಲನವಲನದ ಬಗ್ಗೆ ಮಾಹಿತಿ ಇದ್ದರೂ ಸೆಸ್ಕಾಂನ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ.

15 ದಿನಗಳ ಹಿಂದೆ ಚಿಕ್ಕಮಗಳೂರು ಭಾಗದಿಂದ ಬಂದ ಕಾಡಾನೆಯೊಂದು ಆಹಾರ ಅರಸಿ ಹಾಸನ ಜಿಲ್ಲೆ ಪ್ರವೇಶಿಸಿದೆ. ಈ ಆನೆ ಗುರುವಾರ ಸಕಲೇಶಫುರ ತಾಲೂಕಿನ ಬಾಳ್ಲುಪೇಟೆ ಸಮೀಪದ ಬನವಾಸೆ ಗ್ರಾಮದ ಬಳಿ ವಿದ್ಯುತ್​ ತಂತಿಗೆ ಸೊಂಡಿಲು ತಾಗಿಸಿ ಧಾರುಣವಾಗಿ ಮೃತಪಟ್ಟಿದೆ. 25 ವರ್ಷ ಪ್ರಾಯದ ಬೃಹತ್ ಒಂಟಿ ಸಲಗದ ಸಾವಿನ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಜನ ಸ್ಥಳದಲ್ಲಿ ಸೇರಿದರು. ಕಾಡಾನೆ ಕಳೇಬರಕ್ಕೆ ನಮಿಸಿ ಕಂಬನಿ ಮಿಡಿದರು.

30 ಅಡಿ ಎತ್ತರದಲ್ಲಿ ವಿದ್ಯುತ್ ಲೈನ್ ಕೊಂಡೊಯ್ಯಬೇಕು ಎಂಬ ನಿಯಮ ಇದ್ದರೂ ಅದನ್ನು ಪಾಲಿಸಿದ ಕಾರಣ ಕಾಡಾನೆ ಬಲಿಯಾಗಿದೆ. ಕೂಡಲೆ ಸೆಸ್ಕಾಂ ಅದಿಕಾರಿಗಳ ವಿರುದ್ಧ ಕೇಸ್ ದಾಖಲು ಮಾಡಬೇಕು, ಅವರನ್ನು ಬಂದಿಸಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಳೆದ 3 ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತಲ್ಲೇ ನಿಂತು ಕೊನೆಗೆ ಪ್ರಾಣ ಬಿಟ್ಟ ಹೆಣ್ಣಾನೆ

100ಕ್ಕೂ ಅಧಿಕ ಕಾಡಾನೆ ಸಾವು

ಹಾಸನ ಜಿಲ್ಲೆಯ ಮಲೆನಾಡು ಭಾಗಗಳಾದ ಸಕಲೇಶಫುರ, ಆಲೂರು, ಬೇಲೂರು ತಾಲೂಕಿನಲ್ಲಿ ದಶಕಗಳಿಂದ ಕಾಡಾನೆಗಳ ಉಪಟಳ ನಿರಂತರವಾಗಿ ಹೆಚ್ಚಾಗುತ್ತಿದೆ. 80ಕ್ಕೂ ಹೆಚ್ಚು ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.

ಆದರೆ, ವಿದ್ಯುತ್​ ಶಾಕ್, ಅನಾರೋಗ್ಯ ಸೇರಿ ಹಲವು ಕಾರಣಗಳಿಂದ 100ಕ್ಕೂ ಅದಿಕ ಕಾಡಾನೆಗಳು ಪ್ರಾಣಬಿಟ್ಟಿವೆ. ಕೇವಲ ಎಂಟು ದಿನಗಳ ಹಿಂದಷ್ಟೇ ಅರಸೀಕೆರೆ ತಾಲೂಕಿನಲ್ಲಿ ವಿದ್ಯುತ್​ ಶಾಕ್​ನಿಂದ ಮೂರು ಕರಡಿಗಳು ಮೃತಪಟ್ಟಿದ್ದವು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ವಿದ್ಯುತ್ ದುರಂತಕ್ಕೆ ಕಾಡಾನೆ ಬಲಿಯಾಗಿದೆ. ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ 12 ಕಾಡಾನೆಗಳು ಬಲಿಯಾಗಿವೆ. ಕಳೆದ 15 ದಿನಗಳ ಅಂತರದಲ್ಲಿ ಎರಡು ಆನೆಗಳು ಸಾವಿಗೀಡಾಗಿವೆ.

ಒಟ್ಟಿನಲ್ಲಿ ಕಾಡಾನೆ ಹಾವಳಿಯಿಂದ ಕಂಗೆಟ್ಟಿರೊ ಜನರು ಜೀವ ಭಯದಲ್ಲಿಯೇ ದಿನ ದೂಡುತ್ತಿದ್ದಾರೆ. ಇದರ ನಡುವೆ ಆಗಾಗ ಬಲಿಯಾಗುತ್ತಿರುವ ಕಾಡಾನೆಗಳ ಕಳೆಬರಹ ಕಂಡು ಕಣ್ಣೀರು ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ