ಸೂರಜ್​ಗೆ ಮತ್ತೊಂದು ಸಂಕಷ್ಟ: ಕೊರೋನಾ ಸಮಯದಲ್ಲಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Jun 25, 2024 | 9:47 PM

ಈಗಾಗಲೇ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಬಂಧನವಾಗಿರುವ ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊರೋನಾ ಸಮಯದಲ್ಲಿ ತಮ್ಮ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮತ್ತೋರ್ವ ಸಂತ್ರಸ್ತ ಸೂರಜ್ ವಿರುದ್ಧ ದೂರು ನೀಡಿದ್ದು, ಈ ದೂರಿನ ಮೇರೆಗೆ ಇದೀಗ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಮತ್ತೊಂದು ಎಸ್​ಐಆರ್ ದಾಖಲಾಗಿದೆ.

ಸೂರಜ್​ಗೆ ಮತ್ತೊಂದು ಸಂಕಷ್ಟ: ಕೊರೋನಾ ಸಮಯದಲ್ಲಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ
ಸೂರಜ್ ರೇವಣ್ಣ
Follow us on

ಹಾಸನ, (ಜೂನ್ 25): ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ (JDS MLC Dr Suraj Revanna) ವಿರುದ್ಧ ಮತ್ತೊಂದು ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಅಡಿಯಲ್ಲಿ ಎಸ್ಐಆರ್ ದಾಖಲಾಗಿದೆ. ಕೊರೊನ ಸಮಯದಲ್ಲಿ ತನ್ನ ಮೇಲೆ ಕೂಡ ಇದೇ ರೀತಿಯ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮತ್ತೋರ್ವ ಸಂತ್ರಸ್ತ ದೂರು ನೀಡಿದ್ದಾನೆ, ಈ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಎಫ್​ಐಆರ್ ದಾಖಲಾಗಿದೆ. ಅಚ್ಚರಿ ಅಂದರೆ ಹಿಂದೆ ಮೊದಲ ಕೇಸ್​ನ ಸಂತ್ರಸ್ತನ ವಿರುದ್ಧವೇ ದೂರು ನೀಡಿದ್ದವ ಇದೀಗ ಸೂರಜ್​ ವಿರುದ್ಧ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ.

ಮೂರು ವರ್ಷಗಳ ಹಿಂದೆ ತನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಂದು ಆರೋಪಿಸಿ ಸೂರಜ್ ರೇವಣ್ಣ ಆಪ್ತನಾಗಿದ್ದ ಹೊಳೆನರಸೀಪುರ ತಾಲ್ಲೂಕು ಮೂಲದ ಯುವಕ ದೂರು ನೀಡಿದ್ದಾನೆ, ಈ ಮೂಲಕ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಎರಡನೇ ಕೇಸ್ ದಾಖಲಾದಂತಾಗಿದೆ.

ಇದನ್ನೂ ಓದಿ: ಸಲಿಂಗ ಕಾಮ ಕೇಸ್​ಗೆ ಬಿಗ್ ಟಿಸ್ಟ್: ಸೂರಜ್ ವಿರುದ್ಧವೇ ತಿರುಗಿ ಬಿದ್ದು ದೂರು ದಾಖಲಿಸಿದ ಆಪ್ತ ಶಿವಕುಮಾರ್​!

ಇದೇ ಎರಡನೇ ಕೇಸ್​ನ ಸಂತ್ರಸ್ತ ಜೂನ್ 21 ರಂದು ಡಾ ಸೂರಜ್ ಅವರನ್ನ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಮೊದಲ ಪ್ರಕರಣದ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ. ಆದ್ರೆ, ಇದೀಗ ಆಪ್ತ ಉಲ್ಟಾ ಹೊಡೆದು ಸೂರಜ್ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಅರಕಲಗೂಡು ಮೂಲದ ಯುವಕನ(ಮೊದಲ ಪ್ರಕರಣದ ಸಂತ್ರಸ್ತ) ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಸೂರಜ್​ ಮತ್ತೊಂದು ಕಂಟಕ ಎದುರಾಗಿದೆ.

ಸಿಐಡಿ ಕಸ್ಟಡಿಯಲ್ಲಿ ಸೂರಜ್

ಸಲಿಂಗ ಕಾಮ ಪ್ರಕರಣದಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಎಂಎಲ್‌ಸಿ ಸೂರಜ್‌ ರೇವಣ್ಣನನ್ನು (Suraj Revanna Case) 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್​ ಬುಧವಾರ ಆದೇಶ ಹೊರಡಿತ್ತು. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶರಾದ ಕೆ.ಎನ್‌.ಶಿವಕುಮಾರ್‌ ಅವರು ಸೂರಜ್‌ನನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ. ಹೀಗಾಗಿ ಸಿಐಡಿ ಅಧಿಕಾರಿಗಳು ನಿನ್ನೆ (ಜೂನ್​ 24) ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ