
ಹಾಸನ, ಜನವರಿ 31: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ನದಿಗೆ ಬಿದ್ದು ಪವಾಡ ಸದೃಶವಾಗಿ ಯುವಕನೋರ್ವ ಬದುಕಿ ಬಂದಿರೊ ಘಟನೆ ಹಾಸನ (Hassan) ಜಿಲ್ಲೆಯ ಹೊಳೆನರಸೀಪುರದಲ್ಲಿ (Holenarasipura) ನಡೆದಿದೆ. ಆಯಾನ್ ಬದುಕಿ ಬಂದ ಯುವಕ. ಮುಜಾಮಿಲ್ ಎಂಬುವರ ಪುತ್ರ ಅಯಾನ್ ಹಾಸನದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ.
ಮಂಗಳವಾರ ರಾತ್ರಿ ಕೆ.ಆರ್. ನಗರದಿಂದ ಹಾಸನಕ್ಕೆ ಪೋಷಕರ ಜೊತೆ ರೈಲಿನಲ್ಲಿ ತೆರಳುತ್ತಿದ್ದರು. ರೈಲಿನಲ್ಲಿ ಬಾಗಿಲು ಬಳಿ ನಿಂತಿದ್ದ ಆಯನ್ ಆಯತಪ್ಪಿ ಹೇಮಾವತಿ ನದಿಗೆ ಬಿದ್ದಿದ್ದಾರೆ. ಆಯನ್ ನದಿಗೆ ಬಿದ್ದಿದ್ದನ್ನು ಕಂಡ ಪೋಷಕರು ಪೋಷಕರು ಕೂಗಾಡಿ, ರೈಲು ನಿಲ್ಲಿಸಿದ್ದಾರೆ. ರೈಲು ನಿಂತ ಬಳಿಕ ಕೂಡಲೆ ನದಿಗೆ ಇಳಿದ ಜನರು ಆಯಾನ್ನನ್ನು ರಕ್ಷಣೆ ಮಾಡಿದ್ದಾರೆ. ನದಿಯಲ್ಲಿ ನೀರು ಕೂಡ ಕಡಿಮೆ ಇದ್ದುದರಿಂದ ಯಾವುದೇ ಅಪಾಯವಾಗಿಲ್ಲ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತಿಬ್ಬರು ಬಲಿ: ಓರ್ವ ಮಹಿಳೆ ಜೀವನ್ಮರಣ ಹೋರಾಟ!
ಕೂಡಲೆ ಹೊಳೆನರಸೀಪುರ ನಗರ ಠಾಣೆ ಪೊಲೀಸರಿಗು ಮಾಹಿತಿ ನೀಡಲಾಗಿದ್ದು ಪೊಲೀಸರು ಕೂಡ ಸ್ಥಳಕ್ಕೆ ಬಂದು ಮಾಹಿತಿ ಪಡೆದಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದರೂ ಪವಾಡ ಸದೃಶವಾಗಿ ಬದುಕಿ ಬಂದ ಆಯಾನ್ನನ್ನು ಪೋಷಕರ ಜೊತೆ ಕಳಿಸಲಾಗಿದೆ.
Published On - 9:33 am, Fri, 31 January 25