ಎತ್ತುಗಳನ್ನು ಗುಡ್ಡ ಹತ್ತಿಸುವ ಜಾತ್ರೆ; ಹಾವೇರಿಯಲ್ಲಿ ದಶಕಗಳಿಂದ ನಡೆದುಕೊಂಡು ಬಂದಿದೆ ಈ ವಿಶಿಷ್ಟ ಆಚರಣೆ

ಹಿರೇಹುಲ್ಲಾಳದ ಗೇರಗುಡ್ಡ ಬಸವೇಶ್ವರ ದೇವಸ್ಥಾನಕ್ಕೆ ಬರುವ ರೈತರು ತಮ್ಮ ತಮ್ಮ ಮನೆಯಲ್ಲಿನ ಎತ್ತುಗಳು ಮತ್ತು ಹೋರಿಗಳನ್ನು ಭರ್ಜರಿಯಾಗಿ ಅಲಂಕಾರ ಮಾಡಿಕೊಂಡು ಬಂದಿರುತ್ತಾರೆ. ಎತ್ತುಗಳಿಗೆ ಮೈಮೇಲೆ‌ ಜೂಲಾ ಹಾಕಿ, ಕೋಡುಗಳಿಗೆ ರಿಬ್ಬನ್, ಬಲೂನ್​ಗಳನ್ನು ಕಟ್ಟಿ, ಬಣ್ಣ ಬಳಿದು ಅಲಂಕಾರ ಮಾಡಿರುತ್ತಾರೆ.

ಎತ್ತುಗಳನ್ನು ಗುಡ್ಡ ಹತ್ತಿಸುವ ಜಾತ್ರೆ; ಹಾವೇರಿಯಲ್ಲಿ ದಶಕಗಳಿಂದ ನಡೆದುಕೊಂಡು ಬಂದಿದೆ ಈ ವಿಶಿಷ್ಟ ಆಚರಣೆ
ಎತ್ತುಗಳನ್ನು ಗುಡ್ಡ ಹತ್ತಿಸುವ ಜಾತ್ರೆ

Updated on: Apr 16, 2021 | 9:23 AM

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ಒಂದು ವಿಶಿಷ್ಟವಾದ ಜಾತ್ರೆ ನಡೆಯುತ್ತದೆ. ಗ್ರಾಮದ ಪಕ್ಕದಲ್ಲಿರುವ ಬೆಟ್ಟದ ಮೇಲಿನ ಬಸವೇಶ್ವರ ದೇವಸ್ಥಾನಕ್ಕೆ ಎತ್ತುಗಳ ಬಂಡಿ ಕಟ್ಟಿಸಿ ಬಂಡಿಯನ್ನು ಬೆಟ್ಟಕ್ಕೆ ಹತ್ತಿಸುವ ವಿಶಿಷ್ಟ ಸಂಪ್ರದಾಯ ಜಾತ್ರೆಯಲ್ಲಿ ನಡೆಯುತ್ತದೆ. ಸುಮಾರು 500 ಮೀಟರ್ ಎತ್ತರದ ಬೆಟ್ಟವನ್ನು ಎತ್ತುಗಳು ಬಂಡಿ ಎಳೆದುಕೊಂಡು ಬಂದು ಬಸವೇಶ್ವರನ ದರ್ಶನ ಪಡೆಯುತ್ತವೆ. ಈ ರೀತಿ ಎತ್ತುಗಳು ಬೆಟ್ಟವನ್ನು ಹತ್ತಿದರೆ ಎತ್ತುಗಳಿಗೆ ಯಾವುದೇ ರೋಗ ರುಜಿನಗಳೂ ಬರುವುದಿಲ್ಲ ಎಂಬ ನಂಬಿಕೆ ಇಲ್ಲಿಯ ರೈತರಲ್ಲಿ ಮನೆ ಮಾಡಿದೆ. ಅಲ್ಲದೆ ಈ ಬಂಡಿ ಹತ್ತಿಸುವ ಸಂದರ್ಭದಲ್ಲಿ ಎಂತಹ ಅವಘಡವಾದರೂ ಯಾವುದೇ ಪ್ರಾಣಹಾನಿ ಮತ್ತು ನೋವುಗಳು ಆಗುವುದಿಲ್ಲ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ಶುಭ ಕಾರ್ಯಕ್ಕೆ ಬಸವೇಶ್ವರನ ಅಪ್ಪಣೆ
ಬೆಟ್ಟದ ಮೇಲಿರುವ ಬಸವೇಶ್ವರನಿಗೆ ಗೇರುಗುಡ್ಡದ ಬಸವೇಶ್ವರ ಎಂತಲೇ ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಮನೆ ಮಗಳನ್ನು ಮದುವೆ ಮಾಡಿ ಕೊಡುವುದಿರಲಿ, ಮನೆಗೆ ಸೊಸೆಯನ್ನು ಕರೆ ತರುವುದಿರಲಿ ಅಥವಾ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸುವುದಿರಲಿ ಇಲ್ಲಿಯ ರೈತರು ಬಸವೇಶ್ವರನ ಅಪ್ಪಣೆ ಪಡೆಯುತ್ತಾರೆ ಮತ್ತು ಇದಕ್ಕಾಗಿಯೇ ವಿಶೇಷ ಪೂಜೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಸವಣ್ಣನ ಮೂರ್ತಿಯ ಬಲಭಾಗದಿಂದ ಹೂ ಬಿದ್ದರೆ ಮಾತ್ರ ಭಕ್ತರಿಗೆ ಹಸಿರು ನಿಶಾನೆ ದೊರೆತಂತೆ. ಕಳೆದ ವರ್ಷ ಕೊರೊನಾದಿಂದ ಈ ಆಚರಣೆ ರದ್ದು ಮಾಡಲಾಗಿತ್ತು. ಪ್ರಸ್ತುತ ವರ್ಷ ಕೊರೊನಾ ಎರಡನೆ ಅಲೆ ಇದ್ದರೂ ಸಹ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ಆಚರಣೆ ಮಾಡಲಾಗಿದೆ.

ಭರ್ಜರಿ ಅಲಂಕಾರ
ಹಿರೇಹುಲ್ಲಾಳದ ಗೇರುಗುಡ್ಡ ಬಸವೇಶ್ವರ ದೇವಸ್ಥಾನಕ್ಕೆ ಬರುವ ರೈತರು ತಮ್ಮ ತಮ್ಮ ಮನೆಯಲ್ಲಿನ ಎತ್ತುಗಳು ಮತ್ತು ಹೋರಿಗಳನ್ನು ಭರ್ಜರಿಯಾಗಿ ಅಲಂಕಾರ ಮಾಡಿಕೊಂಡು ಬಂದಿರುತ್ತಾರೆ. ಎತ್ತುಗಳಿಗೆ ಮೈಮೇಲೆ‌ ಜೂಲಾ ಹಾಕಿ, ಕೋಡುಗಳಿಗೆ ರಿಬ್ಬನ್, ಬಲೂನ್​ಗಳನ್ನು ಕಟ್ಟಿ, ಬಣ್ಣ ಬಳಿದು ಅಲಂಕಾರ ಮಾಡಿರುತ್ತಾರೆ. ರೈತರು ಬೆಟ್ಟ ಹತ್ತಿಸಲು ಎತ್ತುಗಳನ್ನು ತರುವಾಗ ಭರ್ಜರಿ ಅಲಂಕಾರ ಮಾಡಿಕೊಂಡು ಹುಮ್ಮಸ್ಸಿನಿಂದ ತರುತ್ತಾರೆ. ಅಷ್ಟೆ ಹುಮ್ಮಸ್ಸಿನಿಂದ ಕಠಿಣವಾದರೂ ಸುಲಭವಾಗಿ ಬೆಟ್ಟ ಹತ್ತಿಸಿ ಬಸವೇಶ್ವರ ದರ್ಶನ ಪಡೆದುಕೊಂಡು, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನೆಗೆ ವಾಪಸ್ಸಾಗುತ್ತಾರೆ.

ox fair

ಜನ ಸಾಗರದ ನಡುವೆ ನಡೆದ ಎತ್ತುಗಳ ಜಾತ್ರೆ

ಜಾತ್ರೆ ಆರಂಭವಾಗುತ್ತಿದ್ದಂತೆ ಮೊದ ಮೊದಲು ಚಿಕ್ಕಚಿಕ್ಕ ಹೋರಿಗಳನ್ನು ಭರ್ಜರಿಯಾಗಿ ಸಿಂಗರಿಸಿ ಬೆಟ್ಟ ಹತ್ತಿಸಲಾಗುತ್ತದೆ. ನಂತರ ರೈತರು ಹೊಸದಾಗಿ ಖರೀದಿಸಿ ತಂದಿರುವ ಜೋಡಿ ಎತ್ತುಗಳನ್ನು ಬೆಟ್ಟ ಹತ್ತಿಸಲಾಗುತ್ತದೆ. ಅದರ ನಂತರ ಬಂಡಿಗಳನ್ನು ಎಳೆದುಕೊಂಡು ಎತ್ತುಗಳು ಬೆಟ್ಟ ಹತ್ತುತ್ತವೆ. ಈ ಆಚರಣೆಯ ಮತ್ತೊಂದು ವಿಶಿಷ್ಟತೆ ಅಂದರೆ ಎತ್ತುಗಳು ಬೆಟ್ಟ ಹತ್ತುವಾಗ ಯಾವುದೇ ರೀತಿಯ ಅಪಘಾತಗಳು ಇದುವರೆಗೊ ಇಲ್ಲಿ ನಡೆದಿಲ್ಲ. ಈ ದಿನಗಳಲ್ಲಿ ಬೆಟ್ಟ ಹತ್ತುವಾಗ ಬಂಡಿಗಳು ಉರುಳಿ ಬಿದ್ದರೂ ಸಹ ಯಾವುದೇ ಸಾವು ನೋವು ಸಂಭವಿಸುವುದಿಲ್ಲ. ಯಾವುದೇ ಅವಘಡ ಆಗದಂತೆ ನಮ್ಮನ್ನು ಗೇರುಗುಡ್ಡದ ಬಸವಣ್ಣಕಾಪಾಡುತ್ತಾನೆ. ದೇವಸ್ಥಾನಕ್ಕೆ ಬರುವ ಭಕ್ತರು. ಕೇವಲ‌ ಹಿರೇಹುಲ್ಲಾಳ ಮಾತ್ರವಲ್ಲದೆ ಸುತ್ತಮುತ್ತಲಿನ 50 ಗ್ರಾಮಗಳ ರೈತರು ಈ ಜಾತ್ರೆಯಲ್ಲಿ ಪಾಲ್ಗೊಂಡು ವಿಶಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸ್ಥಳೀಯರಾದ ಸಿ.ಕೆ.ಬಾಸೂರ‌ ಹೇಳಿದ್ದಾರೆ.

ox fair

ಬಸವೇಶ್ವರ ದೇವಸ್ಥಾನ

YouTube video player

ಇದನ್ನೂ ಓದಿ:

ಖಾಲಿ ಗಾಡಾ ಸ್ಪರ್ಧೆ; ಜೋಡಿ ಎತ್ತುಗಳ ಓಟಕ್ಕೆ ಮನಸೋತ ಹಾವೇರಿ ಗ್ರಾಮಸ್ಥರು

ದೇಶದ ಬೆನ್ನೆಲುಬು ರೈತ.. ರೈತನ ಬೆನ್ನೆಲುಬು ಎತ್ತು: ದಾಖಲೆ ಮೊತ್ತಕ್ಕೆ ಕಿಲಾರಿ ಎತ್ತು ಮಾರಾಟ..

(Haveri ox fair which is having been celebrating since decades held with grand celebration)

Follow Us