ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಖಾಸಗಿ ಕಾಲೇಜಿನಲ್ಲಿ ಮೂಗು ತೂರಿಸಿದ ಟೀಚರ್ ಸಸ್ಪೆಂಡ್

ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಖಾಸಗಿ ಕಾಲೇಜು ಆಡಳಿತದಲ್ಲಿ ಮೂಗು ತೂರಿಸಿದ ಟೀಚರ್ ತಮ್ಮ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾರೆ. ವಿದ್ಯಾರ್ಥಿ ಶಾಲೆ ಫೀ ಸಂಬಂಧ ಮಧ್ಯಸ್ತಿಕೆ ವಹಿಸಿ ಬಂದಿದ್ದ ವ್ಯಕ್ತಿಯ ಬೈಕ್ ಕೀ ಮತ್ತು ಮೊಬೈಲ್ ಕಿತ್ತುಕೊಂಡು ದರ್ಪ ತೋರಿದ ಆರೋಪದ ಮೇಲೆ ಶಿಕ್ಷಕಿಯನ್ನು ಸಸ್ಪೆಂಡ್ ಮಾಡಲಾಗಿದೆ. ಸರ್ಕಾರಿ ಟೀಚರ್ ಖಾಸಗಿ ಕಾಲೇಜು ಆಡಳಿಮ ಮಂಡಳಿ ಪರ ವಕಾಲತ್ತು ವಹಿಸಿ ಮಾಡಿದ್ದೇನು ಎನ್ನುವ ವಿವರ ಈ ಕೆಳಗಿನಂರಿದೆ.

ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಖಾಸಗಿ ಕಾಲೇಜಿನಲ್ಲಿ ಮೂಗು ತೂರಿಸಿದ ಟೀಚರ್ ಸಸ್ಪೆಂಡ್
Teacher Sunitha

Updated on: Mar 02, 2026 | 4:36 PM

ಹಾವೇರಿ, (ಮಾರ್ಚ್ 02): ಫೀಸ್ ಕಟ್ಟಿಲ್ಲ ಎಂದು ಹಾಲ್ ಟಿಕೆಟ್ ನೀಡದೇ ಕಾಲೇಜು ಆಡಳಿತ ಮಂಡಳಿ ಸತಾಯಿಸಿದ್ದಲ್ಲದೇ, ಪರೀಕ್ಷೆ ಬರೆಯಲು ಅವಕಾಶ ಕೊಡದೇ ದರ್ಪತೋರಿದ್ದ ಶಿಕ್ಷಕಿಯನ್ನು ಶಿಕ್ಷಣ ಇಲಾಖೆ (Education Department) ಅಮಾನತುಗೊಳಿಸಿದೆ. ಶನಿವಾರ (ಫೆಬ್ರವರಿ 28) ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ರಾಣೇಬೆನ್ನೂರಿನ (Ranebennur)  ಬಿಎಜೆಎಸ್‌ಎಸ್ ಕಾಲೇಜಿನಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ `ಟಿವಿ9’ ಸುದ್ದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಸರ್ಕಾರಿ ಹಿರಿಯ ಉನ್ನತೀಕರಿಸಿದ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುನೀತಾ ಡಿ.ಬಿಯನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.

ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡದೇ ದರ್ಪ ತೋರಿದ್ದರು. ಜೊತೆಗೆ ಆಡಳಿತ ಮಂಡಳಿ ಪರವಾಗಿ ಮಾತನಾಡಿದ್ದು, ಹಸ್ತಕ್ಷೇಪ ಇರುವುದು ಕಂಡುಬಂದಿತ್ತು. ತನಿಖೆ ಮಾಡಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ದಂಡಿನ ಅವರು ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಅಡಿಗರಿಂದ ಸೂಕ್ತಕ್ರಮಕ್ಕಾಗಿ ಶಿಪಾರಸ್ಸು ಮಾಡಿದ ಪತ್ರದನ್ವಯ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಇದನ್ನೂ ಓದಿ: ಶುಲ್ಕ ಕಟ್ಟಿಲ್ಲವೆಂದು ಬೈಕ್ ಅಡವಿಟ್ಟುಕೊಂಡು ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡಿದ ಕಾಲೇಜು

ಪ್ರಕರಣದ ಹಿನ್ನೆಲೆ

ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ರಾಣೆಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜಿಗೆ ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ಬಿ ಶುಲ್ಕ ಕಟ್ಟಿಲ್ಲ ಅಂತ ಪರೀಕ್ಷೆಗೆ ಬಿಡದೇ ಸತಾಯಿಸಿದ್ದರು. 30 ಸಾವಿರ ರೂ. ಶುಲ್ಕ ಕಟ್ಟಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಿಲ್ಲ. ಆದರೂ ವಿದ್ಯಾರ್ಥಿನಿ ಇಂದು (ಫೆ.28) ಕನ್ನಡ ಪರೀಕ್ಷೆ ಬರೆಯಲು ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ವಿದ್ಯಾರ್ಥಿನಿ ಸಾರಾಳನ್ನು ತಡೆದು, ಎಲ್ಲಾ ಕಾಲೇಜಿನವರೂ ಪುಗಸೆಟ್ಟೆ ಕಲಿಸ್ತಾರಾ? ಎಂದು ಖಾಸಗಿ ಕಾಲೇಜಿನ ಪರವಾಗಿ ದರ್ಪದ ಮಾತುಗಳನ್ನಾಡಿದ್ದರು.

ಅಲ್ಲದೇ ಹಾಲ್ ಟಿಕೆಟ್ ನೀಡುವಂತೆ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ವಿದ್ಯಾರ್ಥಿನಿ ಪರವಾಗಿ ಬಂದಿದ್ದು, ಈ ವೇಳೆ ಹನುಮಂತಪ್ಪ ಮೇಲೂ ದರ್ಪ ತೋರಿದ್ದಾರೆ. ಹಾಗೇ ಹನುಮಂತಪ್ಪನ ಬೈಕ್ ಕೀ ಮತ್ತು ಮೊಬೈಲ್ ಕಿತ್ತುಕೊಂಡು ಹಾಲ್ ಟಿಕೆಟ್ ನೀಡಿದ್ದರು. ಹೀಗೆ ಖಾಸಗಿ ಕಾಲೇಜು ಪರವಾಗಿ ವಕಾಲತ್ತು ವಹಿಸಿ ಸಾರ್ವಜನಿಕರ ಜೊತೆಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:35 pm, Mon, 2 March 26

Loading...
Unable to load recommendations.
Follow Us