ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ

ಹಾವೇರಿಯಲ್ಲಿ 'SLV ಮಹಿಳಾ ಮಾರ್ಟ್' ಕಂಪನಿ, ಮನೆಯಿಂದಲೇ ಕೆಲಸ (ಗೃಹ ಕೈಗಾರಿಕೆ) ನೀಡುವ ಆಮಿಷವೊಡ್ಡಿ ನೂರಾರು ಮಹಿಳೆಯರಿಗೆ 5-10 ಕೋಟಿ ರೂ. ವಂಚಿಸಿದೆ. ಅಗರಬತ್ತಿ, ಕಸಬರಗಿ ಪ್ಯಾಕಿಂಗ್ ಕೆಲಸದ ನೆಪದಲ್ಲಿ ಹೂಡಿಕೆ ಮಾಡಿಸಿಕೊಂಡು, ಮಾಲೀಕರು ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ಮಹಿಳೆಯರು ನ್ಯಾಯಕ್ಕಾಗಿ ಪೊಲೀಸ್ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.

ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ SLV ಮಹಿಳಾ ಮಾರ್ಟ್ ಮಾಲೀಕರ ಮಹಾಮೋಸ
SLV ಮಹಿಳಾ ಮಾರ್ಟ್ ವಂಚನೆ

Updated on: Jun 10, 2026 | 3:55 PM

ಹಾವೇರಿ, ಜೂ.10: “ಮನೆಯಲ್ಲೇ ಕುಳಿತು ಕೈತುಂಬಾ ಸಂಪಾದಿಸಿ” ಎಂಬ ಆಕರ್ಷಕ ಜಾಹೀರಾತುಗಳನ್ನು ನಂಬಿದ ನೂರಾರು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಭಾರಿ ವಂಚನೆಯಾಗಿರುವ ಆಘಾತಕಾರಿ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ಹಾವೇರಿಯ ಅಶ್ವಿನಿ ನಗರದಲ್ಲಿರುವ ‘SLV ಮಹಿಳಾ ಮಾರ್ಟ್’ ಎಂಬ ಹೆಸರಿನ ಕಂಪನಿಯು ಸ್ವಯಂ ಉದ್ಯೋಗ ನೀಡುವ ಆಸೆ ತೋರಿಸಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದ ಜನರಿಂದ ಬರೋಬ್ಬರಿ 5 ರಿಂದ 10 ಕೋಟಿ ರೂಪಾಯಿ ಹಣವನ್ನು ದೋಚಿ ರಾತ್ರೋರಾತ್ರಿ ಪರಾರಿಯಾಗಿದೆ.

ವಿನಾಯಕ ಆನ್ವೇರಿ ಹಾಗೂ ರಮ್ಯ ಎಂಬುವವರು ಈ SLV ಮಹಿಳಾ ಮಾರ್ಟ್ ಕಂಪನಿಯ ಮಾಲೀಕರಾಗಿದ್ದು, “ಮನೆಯಲ್ಲೇ ಕುಳಿತು ಅಗರಬತ್ತಿ, ಕಸಬರಗಿ (ರೊಟ್ಟಿ ಕಸಬರಗಿ) ಹಾಗೂ ಮೇಣದಬತ್ತಿಗಳನ್ನು ಪ್ಯಾಕ್ ಮಾಡುವ ಗೃಹ ಕೆಲಸ ನೀಡುತ್ತೇವೆ. ಇದಕ್ಕೆ ಲಕ್ಷ ಲಕ್ಷ ಬಂಡವಾಳ ಹೂಡಿಕೆ ಮಾಡಬೇಕು” ಎಂದು ಈ ವಂಚಕರು ನಂಬಿಸಿದ್ದರು. ಆರಂಭದ ಒಂದೆರಡು ತಿಂಗಳು ಹೂಡಿಕೆ ಮಾಡಿದವರಿಗೆ ಸರಿಯಾಗಿ ಹಣ ಹಾಗೂ ಕಮಿಷನ್ ನೀಡುವ ನಾಟಕವಾಡಿ ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಿದ್ದರು.

ಕಂಪನಿಯ ನಂಬಿಕೆ ಹೆಚ್ಚಾಗುತ್ತಿದ್ದಂತೆ ಹಾವೇರಿ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ನೂರಾರು ಮಹಿಳೆಯರು ಲಕ್ಷಾಂತರ ರೂಪಾಯಿ ಹಣವನ್ನು ತಂದು ಹೂಡಿಕೆ ಮಾಡಿದ್ದಾರೆ. ಹೀಗೆ ಒಟ್ಟಾರೆ ಅಂದಾಜು 5 ರಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದಂತೆಯೇ ಮಾಲೀಕರಾದ ವಿನಾಯಕ ಮತ್ತು ರಮ್ಯ ಕಂಪನಿಗೆ ಬೀಗ ಜಡಿದು ರಾತ್ರೋರಾತ್ರಿ ನಾಪತ್ತೆಯಾಗಿದ್ದಾರೆ. ಇತ್ತ ತಾವು ಕಷ್ಟಪಟ್ಟು ಹೂಡಿಕೆ ಮಾಡಿದ ಅಸಲು ಹಣವೂ ಸಿಗದೆ, ಇತ್ತ ಕೆಲಸ ಮಾಡಿದ ಕೂಲಿಯೂ ಸಿಗದೆ ನೂರಾರು ಮಹಿಳೆಯರು ಬೀದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಐಶಾರಾಮಿ ಜೀವನಕ್ಕಾಗಿ ಉಂಡ ಮನೆಗೇ ಕನ್ನ: 25 ಲಕ್ಷ ಹಣ ಕದ್ದು ಜೈಲುಪಾಲಾದ ನೇಪಾಳಿ ದಂಪತಿ

ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ನೂರಾರು ಮಹಿಳೆಯರು ಹಾವೇರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಂಚಕ ಕಂಪನಿ ಹಾಗೂ ಅದರ ಮಾಲೀಕರ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಕಣ್ಣೀರು ಹಾಕುತ್ತಲೇ SLV ಮಹಿಳಾ ಮಾರ್ಟ್ ಕಂಪನಿಗೆ ಹಿಡಿಶಾಪ ಹಾಕುತ್ತಿರುವ ನೊಂದ ಮಹಿಳೆಯರು, “ನಮ್ಮ ಜೀವಮಾನದ ಉಳಿತಾಯದ ಹಣವನ್ನು ನಂಬಿಸಿ ದೋಚಿದ್ದಾರೆ. ಪೊಲೀಸರು ತಕ್ಷಣವೇ ಆ ಮೋಸಗಾರರನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಬೇಕು ಮತ್ತು ನಮ್ಮ ಹಣವನ್ನು ವಾಪಸ್ ಕೊಡಿಸಬೇಕು” ಎಂದು ಒತ್ತಾಯಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ.

ವರದಿ: ಅಣ್ಣಪ್ಪ ಬರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Wed, 10 June 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us