ಹಾವೇರಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ: ಇನ್ನೂ ಸಿಕ್ಕಿಲ್ಲ ಪರಿಹಾರ, ಸಾಲದ ಸುಳಿಯಲ್ಲಿ ಕುಟುಂಬಗಳು

| Updated By: ಆಯೇಷಾ ಬಾನು

Updated on: Aug 17, 2023 | 3:46 PM

ಹಾವೇರಿ ಜಿಲ್ಲೆಯ ಅನ್ನದಾತರು ಸಾಲದ ನೋಟಿಸ್ ನೋಡಿ ಕಂಗಾಲಾಗಿದ್ದಾರೆ. ಇನ್ನಾದರು ಜಿಲ್ಲಾಡಳಿತ ಆಯಾ ರೈತರ ಪರವಾಗಿ ಬ್ಯಾಂಕ್ ಗಳಿಗೆ ನೋಟಿಸ್ ನೀಡಿ, ರೈತರಿಗೆ ಸಾಲಮಾನ್ನಾ ಅಥವಾ ಕಾಲಾವಧಿಯನ್ನ ಹೆಚ್ಚು ಮಾಡಬೇಕು ಎಂದು ಅನ್ನದಾತರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಹಾವೇರಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ: ಇನ್ನೂ ಸಿಕ್ಕಿಲ್ಲ ಪರಿಹಾರ, ಸಾಲದ ಸುಳಿಯಲ್ಲಿ ಕುಟುಂಬಗಳು
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಿಕ್ಕಿಲ್ಲ ಪರಿಹಾರ
Follow us on

ಹಾವೇರಿ, ಆ.17: ಹಾವೇರಿ ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ 53 ರೈತರ(Farmers) ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಭರವಸೆ ನೀಡಿದ ಪರಿಹಾರ ಇನ್ನೂ ಸಿಕ್ಕಿಲ್ಲ. ರೈತರ ಕುಟುಂಬಗಳು ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಸರ್ಕಾರ ಪರಿಹಾರದ ಮೊತ್ತವನ್ನು ಮಂಜೂರು ಮಾಡಿದರೆ ಅದರಿಂದ ನಮಗೆ ಸಹಾಯ ಆಗುತ್ತದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಅದರಲ್ಲೂ ಅನ್ನದಾತರು ಬ್ಯಾಂಕ್​ನಲ್ಲಿ ಬೆಳೆಸಾಲವನ್ನ ತೆಗೆದುಕೊಂಡು ಬೀಜ ಬಿತ್ತನೆ ಮಾಡಲು, ಕೃಷಿ ಕೆಲಸಕ್ಕೆ ಸಾಲವನ್ನ ತೆಗೆದುಕೊಳ್ಳುತ್ತಾರೆ. ಅದರೆ ಈ ಭಾರಿಯೂ ಸಹ ಹಾವೇರಿ ಜಿಲ್ಲೆಯ ಸಂಪೂರ್ಣ ಬರದ ಛಾಯೆ ಆವರಿಸಿದೆ. ಬೆಳೆಗಳು ಬತ್ತಿ ಹೋಗುತ್ತಿವೆ. ಇನ್ನೊಂದು ಕಡೆ ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡುತ್ತಿದೆ. ಹೀಗಾಗಿ ಸರ್ಕಾರ ಪರಿಹಾರ ನೀಡುವಂತೆ ಮೃತ ರೈತರ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಹಾವೇರಿ ತಾಲ್ಲೂಕಿನ ಹಿರೇಲಿಂಗದಹಳ್ಳಿ, ಸಂಗೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೈತರಿಗೆ ಸಾಲದ ನೋಟಿಸ್ ನೀಡಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಹೆಚ್ಚು ಮಳೆಯಾಗಿ ಬೆಳೆಗಳು ಹಾನಿಯಾಗಿ, ಫಸಲು ಕೈಗೆ ಬಾರದೆ ಕಂಗಾಲಾಗಿದ್ದರು. ಈ ಬಾರಿ ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟು, ಜುಲೈ ತಿಂಗಳಲ್ಲಿ ಮಳೆಗಾಗಿ ಬಿತ್ತನೆ ಮಾಡಿದರು, ಆದರೆ ಈಗ ಬೆಳೆಗಳಿಗೆ ರೋಗ ಮತ್ತು ಮಳೆರಾಯನ ಕೃಪೆ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿವೆ. ಜಿಲ್ಲೆಯಲ್ಲಿ ಈ ಬಾರಿ ಕೆಲವು ರೈತರು ಎರಡು- ಮೂರು ಬಾರಿ ಬಿತ್ತನೆ ಮಾಡಿದರೂ ಸಹ ಬೆಳೆಗಳು ನಿಲ್ಲುತ್ತಿಲ್ಲ. ಕಳೆದ ಒಂದು ತಿಂಗಳಿಂದ ಮಳೆ ಸಹ ಆಗದೆ ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಬಾಡಿ ನಿಂತಿವೆ. ಆದರೆ ಬ್ಯಾಂಕ್ ಅಧಿಕಾರಿಗಳು ಮಾತ್ರ ರೈತರ ಮನೆಗಳಿಗೆ ನೋಟಿಸ್ ಕಳಿಸುತ್ತಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ .

ಇದನ್ನೂ ಓದಿ: ಮಳೆಯಾಗದೆ ಬೋರ್​​ವೆಲ್​ ನೀರೇ ಗತಿ, ಆದ್ರೆ ಸರಿಯಾಗಿ ವಿದ್ಯುತ್​​​ ಪೂರೈಕೆಯಾಗುತ್ತಿಲ್ಲ: ಗದಗ-ಬಾಗಲಕೋಟೆ ರೈತರ ಆಕ್ರೋಶ

ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಸೇರಿದಂತೆ ಎಲ್ಲ ಸರ್ಕಾರಗಳು ರೈತರಿಗೆ ನೋಟಿಸ್ ನೀಡಬಾರದು ಅಂತಾ ಆದೇಶ ಮಾಡಿದ್ದರು. ಆದರೆ ಕೆಲವು ಬ್ಯಾಂಕ್ ಗಳು ಮಾತ್ರ ರೈತರ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳದೆ ರೈತರಿಗೆ ನೋಟಿಸ್ ಮೇಲೆ ನೋಟಿಸ್ ನೀಡಿ ಭಯ ಹುಟ್ಟಿಸುತ್ತಿವೆ. ಇನ್ನು ಕೆಲವು ಬ್ಯಾಂಕ್ ನಲ್ಲಿ ರೈತ ಕಿಸಾನ್ ಸನ್ಮನ್ ಯೋಜನೆ ಹಣ ವಿದ್ಯಾಪ್ಯಾವೇತನ, ಹಾಗೂ ಬೆಳೆ ವಿಮೆ ಹಣ ಹಾಗೂ ಮನೆ ನಿರ್ಮಾಣ ಮಂಜೂರು ಆದ ಹಣವನ್ನ ಬ್ಲಾಕ್ ಮಾಡಿ ರೈತರಿಗೆ ಹಣ ಕೊಡದೆ ಸತಾಯಿಸುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ರೈತರಿಗೆ ಯಾವುದೇ ನೋಟಿಸ್ ನೀಡದೆ, ರೈತರಿಗೆ ಕಾಲಾವಧಿ ಹಾಗೂ ಸಾಲಮಾನ್ನಾವನ್ನ ಘೋಷಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಒಟ್ನಲ್ಲಿ ಹಾವೇರಿ ಜಿಲ್ಲೆಯ ಅನ್ನದಾತರು ಸಾಲದ ನೋಟಿಸ್ ನೋಡಿ ಕಂಗಾಲಾಗಿದ್ದಾರೆ. ಇನ್ನಾದರು ಜಿಲ್ಲಾಡಳಿತ ಆಯಾ ರೈತರ ಪರವಾಗಿ ಬ್ಯಾಂಕ್ ಗಳಿಗೆ ನೋಟಿಸ್ ನೀಡಿ, ರೈತರಿಗೆ ಸಾಲಮಾನ್ನಾ ಅಥವಾ ಕಾಲಾವಧಿಯನ್ನ ಹೆಚ್ಚು ಮಾಡಬೇಕು ಎಂದು ಅನ್ನದಾತರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಹಾವೇರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ