ದೈವ ದರ್ಬಾರ ಅಕ್ಕತಲೆ ಪರಾಕ್: ದೇವರಗುಡ್ಡದಲ್ಲಿ ಗೊರವಯ್ಯ ನುಡಿದ ಕಾರಣಿಕದ ಅರ್ಥ ಇದು

ಮಾಲತೇಶ ದೇವರ ಕಾರಣಿಕದ ಅರ್ಥ ವಿಶ್ಲೇಷಿಸಿರುವ ಹಿರಿಯರು ದೇವರಿಗೆ ಪ್ರೀತಿಯಾಗುವಂಥ ಆಡಳಿತ ಕೊಡುವ ಸರ್ಕಾರಗಳು ಅಧಿಕಾರಕ್ಕೆ ಬರುತ್ತವೆ ಎಂದು ಹೇಳಿದ್ದಾರೆ

ದೈವ ದರ್ಬಾರ ಅಕ್ಕತಲೆ ಪರಾಕ್: ದೇವರಗುಡ್ಡದಲ್ಲಿ ಗೊರವಯ್ಯ ನುಡಿದ ಕಾರಣಿಕದ ಅರ್ಥ ಇದು
ಹಾವೇರಿ ತಾಲ್ಲೂಕು ದೇವರಗುಡ್ಡದಲ್ಲಿ ಕಾರಣಿಕ ನುಡಿದ ಗೊರವಯ್ಯ
Edited By:

Updated on: Oct 14, 2021 | 10:20 PM

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ಗುರುವಾರ ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ದಸರಾ ಪ್ರಯುಕ್ತ ಗೊರವಯ್ಯ ಕಾರಣಿಕ ನುಡಿದರು. ಮಾಲತೇಶ ದೇವರ ಕಾರಣಿಕದ ಅರ್ಥ ವಿಶ್ಲೇಷಿಸಿರುವ ಹಿರಿಯರು ದೇವರಿಗೆ ಪ್ರೀತಿಯಾಗುವಂಥ ಆಡಳಿತ ಕೊಡುವ ಸರ್ಕಾರಗಳು ಅಧಿಕಾರಕ್ಕೆ ಬರುತ್ತವೆ ಎಂದು ಹೇಳಿದ್ದಾರೆ. ‘ಯರಿ ದೊರೆ ಅಕ್ಕತಲೆ, ದೈವ ದರ್ಬಾರ ಅಕ್ಕತಲೆ ಪರಾಕ್’ ಎನ್ನುವ ಕಾರಣಿಕವನ್ನು ಗೊರವಯ್ಯ ನುಡಿದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಪ್ರತಿವರ್ಷ ಗೊರವಯ್ಯ ನುಡಿಯುವ ಕಾರಣಿಕವನ್ನು ವರ್ಷದ ಭವಿಷ್ಯವಾಣಿ ಎಂದೇ ಜನರು ನಂಬುತ್ತಾರೆ. ಮುಂದಿನ ರಾಜಕೀಯ ಭವಿಷ್ಯವನ್ನು ಪಕ್ಷೇತರರು ನಿರ್ಧರಿಸುತ್ತಾರೆ. ದೇವರಿಗೆ ಪ್ರೀತಿಯಾದಂಥ ಆಡಳಿತವನ್ನು ಮುಂದಿನ ಸರ್ಕಾರಗಳು ಕೊಡುತ್ತವೆ’ ಎಂದು ಕಾರಣಿಕ ಸಂದೇಶವನ್ನು ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ರಾಜಕೀಯವಾಗಿ ವಿಶ್ಲೇಷಿಸಿದ್ದಾರೆ.

‘ಉತ್ತಮ ಫಸಲು ಬಂದು, ರೈತರ ಬದುಕು ಸಮೃದ್ಧ ಆಗುತ್ತದೆ. ಕೊವಿಡ್‌ 3ನೇ ಅಲೆ ಬರದಂತೆ ಜನರ ಮೇಲೆ ದೈವ ಕೃಪೆ ಇರುತ್ತದೆ. ರೋಗ ರುಜಿನ ಬರದಂತೆ ಜನರನ್ನು ದೇವರು ಕಾಪಾಡುತ್ತಾನೆ’ ಎಂದು ಕಾರಣಿಕವಾಣಿಗೆ ಅರ್ಚಕ ಸಂತೋಷ್ ಭಟ್ ಮತ್ತೊಂದು ಅರ್ಥ ವಿವರಿಸಿದರು. ಇಪ್ಪತ್ತೊಂದು ಅಡಿ ಎತ್ತರದ ಬಿಲ್ಲನ್ನು ಏರಿ ಗೊರವಯ್ಯ ಕಾರಣಿಕ ನುಡಿಯುತ್ತಾರೆ. ಈ ವರ್ಷ ಗೊರವಯ್ಯ ನಾಗಪ್ಪ ಉರ್ಮಿ ಕಾರಣಿಕ ನುಡಿದರು.

Web contact

TV9 Kannada

Read More
Follow Us