
ಬೆಂಗಳೂರು: ಉಪ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಸೋಲನುಭವಿಸಿಬಿಡ್ತು. ಅದಾದ ಬಳಿಕ ಕೆಲ ಶಾಸಕರ ಮೇಲೆ ಅಸಮಾಧಾನಗೊಂಡಿದ್ದ ಕುಮಾರಸ್ವಾಮಿ, ಇದೀಗ ಮತ್ತೆ ಎಲ್ಲಾ ಶಾಸಕರನ್ನು ಒಗ್ಗಟ್ಟಾಗಿ ಪಕ್ಷದಲ್ಲಿ ಕರೆದೊಯ್ಯಲು ಮುಂದಾಗಿದ್ದಾರೆ.
ಅಸಮಾಧಾನಿತರನ್ನ ಹಿಡಿಟ್ಟುಕೊಳ್ಳಲು HDK ತಂತ್ರ:
ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲ, ಗೌರವಾನ್ವಿತವಾಗಿ ನಡೆಸಿಕೊಳ್ತಿಲ್ಲ, ನಿರಂತರ ಕಡೆಗಣನೆ ಆಗ್ತಿದೆ. ಕಿಂಚಿತ್ತೂ ಮರ್ಯಾದೆ ಕೊಡ್ತಿಲ್ಲ ಅಂತಾ ದಳದ ಶಾಸಕರು, ಎಂಎಲ್ಸಿಗಳು ಆರೋಪ ಮಾಡಿದ್ದೇ ಮಾಡಿದ್ದು. ಈ ಎಲ್ಲಾ ಆರೋಪಗಳಿಂದ ಎಚ್ಚೆತ್ತ ದಳಪತಿ ಹೊಸ ಪ್ಲ್ಯಾನ್ ಮಾಡಿದ್ದಾರೆ. ಅಸಮಾಧಾನಿತರನ್ನು ಹಿಡಿಟ್ಟುಕೊಳ್ಳಲು ತಂತ್ರ ಪ್ರಯೋಗಿಸ್ತಿದ್ದಾರೆ.
ಉಪಚುನಾವಣೆಯಲ್ಲಿ ಜೆಡಿಎಸ್ ಮೂರ್ನಾಲ್ಕು ಸ್ಥಾನ ಗೆಲ್ಲುತ್ತೆ ಅನ್ನೋ ವಿಶ್ವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಇದ್ರು. ಆದ್ರೆ, ಉಪಚುನಾವಣೆಯಲ್ಲಿ ದಳಪತಿಗಳು, ತಮ್ಮ ಪಕ್ಷದ ಶಾಸಕರ ಬೆಂಬಲವಿಲ್ಲದೆ ಹಾಗೂ ಕೆಲ ಪಕ್ಷದ ಆಂತರಿಕ ಕಾರಣದಿಂದ ಹೀನಾಯ ಸೋಲನುಭವಿಸಬೇಕಾಯ್ತು. ಆದ್ರೆ, ಈ ಬೈ ಎಲೆಕ್ಷನ್ ಹೆಚ್.ಡಿ. ಕುಮಾರಸ್ವಾಮಿಗೆ ಪಾಠ ಕಲಿಸಿದೆ.
ದೂರವಾಣಿ ಮೂಲಕ ಹೆಚ್ಡಿಕೆ ಸಂಪರ್ಕ:
ಹೀಗಾಗಿ, ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳಿಗೆ ಬ್ರೇಕ್ ಹಾಕೋಕೆ ಮುಂದಾಗಿದ್ದಾರೆ. ಅಸಮಾಧಾನಗೊಂಡಿದ್ದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ಎಲ್ಲಾ ಶಾಸಕರ ಜೊತೆ ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ದೆ, ಶೀಘ್ರದಲ್ಲೇ ಶಾಸಕಾಂಗ ಸಭೆ ಕರೆಯಲು ತೀರ್ಮಾನಿಸಿದ್ದಾರೆ. ಅದಕ್ಕೂ ಮೊದಲು ಎಲ್ಲಾ ಶಾಸಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲು ಹೆಚ್ಡಿಕೆ ಮುಂದಾಗಿದ್ದಾರೆ.
3 ವರ್ಷದಲ್ಲಿ ಪಕ್ಷ ಬಲವರ್ಧನೆಗೆ ಚಿಂತನೆ:
ಎಲ್ಲಾ ಶಾಸಕರ ಜೊತೆ ದೂರವಾಣಿ ಮೂಲಕ ನಿರಂತರ ಚರ್ಚೆ ನಡೆಸ್ತಿರೋದ್ರ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದೆ. ಪಕ್ಷ ಬಲವರ್ಧನೆ ಅನ್ನೋ ಮಂತ್ರ ಇಟ್ಕೊಂಡು ತಂತ್ರ ಹೆಣೆಯತ್ತಿದ್ದಾರೆ. ಮುಂದಿನ 3 ವರ್ಷ ಪಕ್ಷ ಬಲವರ್ಧನೆಗೆ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಈ ಹಿಂದೆ ಮಾಡಿದ ಕೆಲಸಗಳನ್ನೇ ಮುಂದಿಟ್ಟುಕೊಂಡು ಪಕ್ಷ ಬಲಪಡಿಸಲು ಪ್ಲ್ಯಾನ್ ಮಾಡಿದ್ದಾರೆ.
ಪಕ್ಷ ಬಲಪಡಿಸಲು ಪ್ಲ್ಯಾನ್:
ಶಾಸಕರ ಕ್ಷೇತ್ರಗಳಲ್ಲಿ ಯಾವ ಯಾವ ಸಮಸ್ಯೆ ಇದೆ ಅನ್ನೋ ಬಗ್ಗೆ ಮಾಹಿತಿ ಪಡೆದಿರುವ ಕುಮಾರಸ್ವಾಮಿ ಎಲ್ಲಾ ಶಾಸಕರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ನೀಡಿದ ಕೊಡುಗೆ, ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸುವಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಪಕ್ಷ ಬಲವರ್ಧನೆಗೆ ಎಲ್ಲಾ ಆಯಾಮದಲ್ಲೂ ವರ್ಕೌಟ್ ಮಾಡಲು ಮುಂದಾಗಿದ್ದಾರೆ.
ಸದ್ಯ ಉಪಚುನಾವಣೆ ಸೋಲಿನಿಂದ ಎಚ್ಚೆತ್ತ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನಡೆ ಆಗದಂತೆ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಶಾಸಕರನ್ನು ಪಕ್ಷದಲ್ಲಿ ಹಿಡಿದುಕೊಳ್ಳಲು ಅವರ ವಿಶ್ವಾಸ ಗಳಿಸಲು ನಿರಂತರ ದೂರವಾಣಿ ಸಂಪರ್ಕದ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.