ಸರ್ಕಾರಕ್ಕೆ ಇನ್ನೆಷ್ಟು ಜನರ ಬಲಿಬೇಕು? ತಮ್ಮವರನ್ನು ಕಳೆದುಕೊಂಡು ಸರ್ಕಾರಕ್ಕೆ ಶಾಪ ಹಾಕಿದ ಕುಟುಂಬಸ್ಥರು

|

Updated on: May 09, 2021 | 2:19 PM

ವೈದ್ಯರ ಕಾಲು ಹಿಡಿದುಕೊಂಡ್ರೂ ನನ್ನ ಪತ್ನಿಯನ್ನ ಉಳಿಸಿಕೊಟ್ಟಿಲ್ಲ ಎಂದು 40 ವರ್ಷದ ಪತ್ನಿಯನ್ನ ಕಳೆದುಕೊಂಡ ಪತಿ ಕಣ್ಣೀರು ಇಟ್ಟಿದ್ದಾರೆ. ಈ ದೃಶ್ಯ ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ.

ಸರ್ಕಾರಕ್ಕೆ ಇನ್ನೆಷ್ಟು ಜನರ ಬಲಿಬೇಕು? ತಮ್ಮವರನ್ನು ಕಳೆದುಕೊಂಡು ಸರ್ಕಾರಕ್ಕೆ ಶಾಪ ಹಾಕಿದ ಕುಟುಂಬಸ್ಥರು
ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ
Follow us on

ಬೆಂಗಳೂರು: ಕೊರೊನಾದ ಮರಣ ಮೃದಂಗ ಮುಂದುವರೆದಿದೆ. ಸೋಂಕಿಗೆ ಅನೇಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾಗೆ ಬಲಿಯಾದವರ ಕುಟುಂಬಗಳು ನಿತ್ಯ ಕಣ್ಣೀರಿನಲ್ಲಿ ಮುಳುಗಿದ್ದಾರೆ. ತಮ್ಮವರನ್ನು ಕಳೆದುಕೊಂಡು ಅದೆಷ್ಟೂ ಕುಟುಂಬಗಳು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದೆ. ಇಂತಹದ್ದೇ ಕರುಳು ಹಿಂಡುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಕಂಡು ಬಂದಿದೆ.

ವೈದ್ಯರ ಕಾಲು ಹಿಡಿದುಕೊಂಡ್ರೂ ನನ್ನ ಪತ್ನಿಯನ್ನ ಉಳಿಸಿಕೊಟ್ಟಿಲ್ಲ ಎಂದು 40 ವರ್ಷದ ಪತ್ನಿಯನ್ನ ಕಳೆದುಕೊಂಡ ಪತಿ ಕಣ್ಣೀರು ಇಟ್ಟಿದ್ದಾರೆ. ಈ ದೃಶ್ಯ ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ. ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಹಾಕಿದ್ರೂ ಜನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಆದ್ರೆ ತಮಗೆ ಸರ್ವಸ್ವವೂ ಆಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡ ಜನರ ಕಣ್ಣೀರು ನಿರ್ಲಕ್ಷ್ಯವಹಿಸುವವರಿಗೆ ಬುದ್ದಿ ಹೇಳುತ್ತಿದೆ.

ಆ ಜೋನ್, ಈ ಜೋನ್ ಅಂತೇಳಿ‌ ಎಲ್ಲೂ ಅಡ್ಮಿಟ್ ಮಾಡ್ಕೊತಿರಲಿಲ್ಲ. 1 ಲಕ್ಷ ಕೊಡ್ತೀನಿ ಎಲ್ಲಾದ್ರೂ ಬೆಡ್ ಹುಡ್ಕೊಡಿ ಅಂತ ಜನರನ್ನ ಅಂಗಲಾಚಿದೆ. ಕೊನೆಗೆ ನಗರದ ಸಾತ್ಕಾರ್ಯ ಅನ್ನೊ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ತು. ಅಲ್ಲಿ ಒಂದು ವಾರದಿಂದ ಚಿಕಿತ್ಸೆ ಕೊಡ್ತಿದ್ರು. ಕೊನೆ ಕ್ಷಣದಲ್ಲಿ ಆಕ್ಸಿಜನ್ ಇಲ್ಲ, ಐಸಿಯು ಬೆಡ್ ಬೇಕು. ನಮ್ಮಲ್ಲಿ ಐಸಿಯು ಬೆಡ್ ಇಲ್ಲ ತಗೊಂಡೋಗಿ ಅಂದ್ರು. ಮೊನ್ನೆ 3 ಗಂಟೆ ರಾತ್ರಿ ನನ್ನ ಬಳಿ ಸೈನ್ ಹಾಕಿಸಿಕೊಂಡ್ರು. ನನ್ನ ಪತ್ನಿ ಎದೆನೋವು ಅಂತ ಹೇಳ್ತಿದ್ಳು. ಕಫಾ ಅಂತೇಳಿ ಡಾಕ್ಟರ್ ಇಂಜೆಕ್ಷನ್ ಹಾಕಿದ್ರು. ಎದೆ ನೋವು ಅಂತ ಮಾತಾಡಿದ್ದೇ ಅವಳ ಕೊನೆ ಮಾತು ಎಂದು ಪತ್ನಿಯನ್ನು ಕಳೆದುಕೊಂಡ ಪತಿ ಕಣ್ಣೀರು ಹಾಕಿದ್ದಾರೆ.

ಆಸ್ಪತ್ರೆಗೆ ಹೋಗುವಾಗ ಚನ್ನಾಗಿದ್ಳು ಆದ್ರೆ ಬರುವಾಗ ಶವವಾಗಿದ್ದಾಳೆ
ಇನ್ನು ಪತ್ನಿ ಕಳೆದುಕೊಂಡ ದುಃಖದಲ್ಲಿರುವ ವ್ಯಕ್ತಿಯ ಕಣ್ಣೀರು ಹಾಕುತ್ತ.. ಸೋಂಕಿತ ರೋಗಿಗಳ ಬಳಿ ವೈದ್ಯರು ಬರೊಲ್ಲ. ಆಸ್ಪತ್ರೆಗೆ ಹೋಗುವಾಗ ನನ್ನ ಪತ್ನಿ ಚೆನ್ನಾಗೇ ಇದ್ಳು, ಹೋಗುವಾಗ ನಡೆದುಕೊಂಡು ಹೋದ್ರು, ಬರುವಾಗ ಶವವಾಗಿ ಬಂದಿದ್ದಾಳೆ. ಸೋಂಕಿತರ ಮುಂದೆಯೇ ಇವರು ಉಳಿಯೊಲ್ಲ ಅಂತಾರೆ. ಈ ರೀತಿ ಹೇಳಿದ್ರೆ ಅದನ್ನು ಕೇಳಿಸಿಕೊಂಡ ಸೋಂಕಿತರಿಗೆ ಇನ್ನೆಲ್ಲಿಂದ ಧೈರ್ಯ ಬರುತ್ತೆ? ಬೇರೆ ಕಡೆ ಕರ್ಕೊಂಡ್ ಹೋಗಿ ಅಂತಾರೆ. ಈ ಯಡಿಯೂರಪ್ಪ ಸರ್ಕಾರನೇ ಸರಿ ಇಲ್ಲ. ಜನರನ್ನ ಸಾಯಿಸೋಕೆ ಅಂತಾನೇ ಈ ಬಿಜೆಪಿ ಸರ್ಕಾರ ಬಂದಿದೆ. ಜನ ಸರ್ಕಾರನ ನಂಬಿದ್ರೆ ಸಾಯೋದು ಗ್ಯಾರೆಂಟಿ. ಸಿದ್ದರಾಮಯ್ಯ 30 ಕೆ.ಜಿ ಅಕ್ಕಿ ಕೊಡ್ತಿದ್ರು. ಯಡಿಯೂರಪ್ಪ ಬಂದು ಅದನ್ನ 2 ಕೆ.ಜಿಗೆ ಇಳಿಸಿದ್ದಾನೆ. ಒಂದ್ ಕಡೆ ಅಕ್ಕಿ ಕೊಡದೆ, ಇನ್ನೊಂದ್ಕಡೆ ಸೋಂಕಿತರಿಗೆ ಚಿಕಿತ್ಸೆ ಸಿಗದೆ ಮೃತಪಡುತ್ತಿದ್ದಾರೆ. ಜನರನ್ನ ಸಾಯಿಸೋಕೆ ಈ ಸರ್ಕಾರ ಬಂದಿದೆ ಎಂದು ಮೇಡಿ ಅಗ್ರಹಾರದ ಬಳಿ ವ್ಯಕ್ತಿ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಮತ್ತೊಂದೆಡೆ ಇಂತಹದ್ದೇ ಘಟನೆ ನಡೆದಿದ್ದು ತಾಯಿಯನ್ನ ಕಳೆದುಕೊಂಡ ಮಗನ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಕಾರದ ವಿರುದ್ಧ ಮಗ ಹಿಡಿಶಾಪ ಹಾಕಿದ್ದಾನೆ. MLA, ಮಿನಿಸ್ಟರ್ಗಳಿಗೆ ಮಾತ್ರ ಬೆಡ್ ಸಿಗುತ್ತೆ. ನಮ್ಮಂತಹ ಸಾಮಾನ್ಯ ಜನರಿಗೆ ಬೆಡ್, ಆಕ್ಸಿಜನ್ ಸಿಗೊಲ್ಲ. ಈ ಬೆಡ್ ಸ್ಕ್ಯಾಮ್ ಅನ್ನೋದೆಲ್ಲ ಸುಳ್ಳು. ಕಳೆದ ಮುರ್ನಾಲ್ಕು ತಿಂಗಳಿಂದ ನಮ್ಮ ಮನೇಲಿ 3 ಜನ ಕೊರೊನಾಗೆ ಬಲಿಯಾಗಿದ್ದಾರೆ. ಸರ್ಕಾರ ಏನ್ ಮಾಡ್ತಿದೆ. ಮುಂದಿನ ದಿನಗಳಲ್ಲಿ ಯೋಚನೆ ಮಾಡಿ ವೋಟ್ ಹಾಕ್ಬೇಕು. ಹಣ, ಎಣ್ಣೆಗೋಸ್ಕರ ವೋಟ್ ಮಾರಿಕೊಳ್ಳಬೇಡಿ. ಸರಿಯಾದ ವ್ಯಕ್ತಿಯನ್ನ ಆಯ್ಕೆ ಮಾಡಿಕೊಳ್ಳದಿದ್ರೆ ಇಂತಹ ಸರ್ಕಾರ ಬರುತ್ತೆ. ಬಿಜೆಪಿ ಸರ್ಕಾರಕ್ಕೆ ಇನ್ನೆಷ್ಟು ಜನರ ಬಲಿಬೇಕು? ಎಂದು ತಾಯಿಯನ್ನ ಕಳೆದುಕೊಂಡ ಮಗನ ರೋಧಿಸಿದ್ದಾನೆ.

ಇದನ್ನೂ ಓದಿ: ಈವರೆಗೆ ಮಂಡ್ಯ ಜಿಲ್ಲೆಯಲ್ಲಿ 84 ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢ